ದಿನಸಿ ತರಲು ಕಳಿಸಿದ ತಾಯಿ; ಮನದರಸಿ ಜೊತೆ ವಾಪಸ್ ಬಂದ ಪುತ್ರ!
ಲಕ್ನೋ, ಏಪ್ರಿಲ್ 30 : ಲಾಕ್ ಡೌನ್ ಕರ್ತವ್ಯಗಳಲ್ಲಿ ಬ್ಯುಸಿಯಾಗಿದ್ದ ಪೊಲೀಸರು ಮಹಿಳೆಯೊಬ್ಬರು ನೀಡಿದ ದೂರು ಕೇಳಿ ಬೆಚ್ಚಿ ಬಿದ್ದಿದ್ದಾರೆ. ದಿನಸಿ ತರಲು ಕಳಿಸಿದ ಮಗ ಹೆಂಡತಿ ಜೊತೆ ವಾಪಸ್ ಬಂದಿದ್ದಾನೆ ಎಂಬುದು ದೂರಾಗಿತ್ತು.
Recommended Video
"ನಾನು ಮಗನನ್ನು ದಿನಸಿ ತರಲು ಕಳಿಸಿದ್ದೆ. ಆತ ಹೆಂಡತಿ ಜೊತೆ ವಾಪಸ್ ಬಂದಿದ್ದಾನೆ. ಈ ಮದುವೆಯನ್ನು ನಾನು ಒಪ್ಪುವುದಿಲ್ಲ. ಆತನ ವಿರುದ್ದ ಕ್ರಮ ಕೈಗೊಳ್ಳಿ" ಎಂದು ಮಹಿಳೆ ಪೊಲೀಸರ ಮುಂದೆ ಬೇಡಿಕೆ ಇಟ್ಟಿದ್ದಾಳೆ.
ಎರಡು ತಿಂಗಳ ಹಿಂದೆ ಹರಿದ್ವಾರದ ಆರ್ಯ ಸಮಾಜ ಮಂದಿರದಲ್ಲಿ 26 ವರ್ಷದ ಯುವಕ ಸವಿತಾ ಎಂಬಾಕೆಯನ್ನು ವಿವಾಹವಾಗಿದ್ದ. ಮನೆಯಲ್ಲಿ ಗೊತ್ತಿಲ್ಲದೇ ಆದ ವಿವಾಹ ಲಾಕ್ ಡೌನ್ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಯುವಕನ ತಾಯಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಗುಡ್ಡುವಿನ ಮದುವೆ ಕಥೆ : ಗಾಜಿಯಾಬಾದ್ ನಿವಾಸಿಯಾದ 26 ವರ್ಷದ ಗುಡ್ಡು ಎರಡು ತಿಂಗಳ ಹಿಂದೆ ಹರಿದ್ವಾರದಲ್ಲಿ ಗುಟ್ಟಾಗಿ ಸವಿತಾ ಎಂಬಾಕೆಯನ್ನು ವಿವಾಹವಾಗಿದ್ದ. ವಿವಾಹ ಪ್ರಮಾಣ ಪತ್ರ ಸಿಗುವುದು ತಡವಾಯಿತು.
ಪುನಃ ಹರಿದ್ವಾರಕ್ಕೆ ಹೋಗಿ ಪ್ರಮಾಣ ಪತ್ರ ತರಬೇಕು, ಬಳಿಕ ಪತ್ನಿಯನ್ನು ಮನೆಗೆ ಕರೆತರಬೇಕು ಎಂದು ಗುಡ್ಡು ಆಲೋಚಿಸುವ ಹೊತ್ತಿಗೆ ಲಾಕ್ ಡೌನ್ ಜಾರಿಗೊಂಡಿತು. ಹರಿದ್ವಾರದಿಂದ ಬಂದ ಸವಿತಾ ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡ ತೊಡಗಿದಳು.
ಲಾಕ್ ಡೌನ್ ಪರಿಣಾಮ ಆಕೆಯೂ ಅಲ್ಲಿ ಸಂಕಷ್ಟಕ್ಕೆ ಸಿಲುಕಿದಳು. ಇತ್ತ ಗುಡ್ಡು ಪತ್ನಿಯನ್ನು ಮನೆಗೆ ಕರೆತರಲು ತೀರ್ಮಾನಿಸಿದ. ಅಮ್ಮ ದಿನಸಿ ತರಲು ಕಳಿಸಿದ ನೆಪ ಇಟ್ಟಕೊಂಡು ಹೋದ ಆತ ಪತ್ನಿಯೊಂದಿಗೆ ವಾಪಸ್ ಬಂದ, ಇದನ್ನು ನೋಡಿದ ತಾಯಿ ಪೊಲೀಸರ ಮೊರೆ ಹೋದಳು.
ಗುಡ್ಡುವಿನ ವಿವಾಹದ ವಿವಾದ ಈಗ ಸೈದಾಬಾದ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ಲಾಕ್ ಡೌನ್ ಮುಗಿಯುವ ತನಕ ದೆಹಲಿಯ ನಿವಾಸದಲ್ಲಿಯೇ ಇರಿ ಎಂದು ನವ ದಂಪತಿಗಳಿಗೆ ಸೂಚಿಸಿದ್ದಾರೆ. ಮನೆ ಖಾಲಿ ಮಾಡಿಸಬಾರದು ಎಂದು ಮಾಲೀಕರಿಗೂ ಸೂಚನೆ ಕೊಟ್ಟಿದ್ದಾರೆ.












Click it and Unblock the Notifications