ಹುಟ್ಟುಹಬ್ಬಕ್ಕೆ ಮಾಯಾವತಿ ಕೇಳಿದ ವಿಶಿಷ್ಟ ಗಿಫ್ಟ್ ಯಾವುದು?

ಲಕ್ನೋ, ಜನವರಿ 15 : ಸಂಕ್ರಾಂತಿ ಹಬ್ಬದಂದು ತಮ್ಮ 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಕುಮಾರಿ ಮಾಯಾವತಿ ಅವರು, ತಮ್ಮ ಹುಟ್ಟುಹಬ್ಬದ ಉಡುಗೊರೆಯಾಗಿ ವಿಶಿಷ್ಟವಾದದ್ದನ್ನು ನೀಡಬೇಕೆಂದು ಕೋರಿದ್ದಾರೆ.

ಅದೇನೆಂದರೆ, ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರು ತಮ್ಮ ದಶಕಗಳ ಕಹಿಯನ್ನು ಮರೆತು, ಉತ್ತರ ಪ್ರದೇಶದಲ್ಲಿ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು ಸಿಗುವಂತೆ ಕೆಲಸ ಮಾಡಬೇಕು. ಉತ್ತರ ಪ್ರದೇಶವೇ ಮುಂದಿನ ಪ್ರಧಾನಿಯನ್ನು ಆರಿಸುವಂತಾಗಬೇಕು. ಇದೇ ನನಗೆ ನೀವು ಕೊಡಬೇಕಾಗಿರುವ ಉಡುಗೊರೆ ಎಂದು ಮಾಯಾವತಿ ವಿಶಿಷ್ಟವಾದ ಉಡುಗೊರೆಯನ್ನು ಕೇಳಿದ್ದಾರೆ.

ಈ ಬಾರಿ ಲೋಕಸಭೆ ಚುನಾವಣೆ ಇನ್ನೇನು ಹತ್ತಿರದಲ್ಲಿಯೇ ಇರುವಾಗ ನನ್ನ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ದೇಶದ ಅತೀದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ನಾವು ಸಮಾಜವಾದಿ ಪಕ್ಷದ ಜೊತೆ ಮೈತ್ರಿಯನ್ನು ಘೋಷಿಸಿದ್ದೇವೆ. ಇದು ಭಾರತೀಯ ಜನತಾ ಪಕ್ಷ ಮತ್ತು ಇತರ ಪಕ್ಷಗಳ ನಿದ್ದೆಯನ್ನೇ ಕದ್ದಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು.

Mayawati asks special gift on her birthday

ದೇಶದ ಚುಕ್ಕಾಣಿ ಯಾರು ಹಿಡಿಯುತ್ತಾರೆ ಮತ್ತು ಯಾರು ಪ್ರಧಾನಿಯಾಗುತ್ತಾರೆ ಎಂದು ಉತ್ತರ ಪ್ರದೇಶ ನಿರ್ಧರಿಸಲಿದೆ. ಎರಡೂ ಪಕ್ಷಗಳು ತಮ್ಮ ಹಳೆಯ ವೈಷಮ್ಯ ಮರೆತು, ಘಟಬಂಧನದಲ್ಲಿ ಸ್ಪರ್ಧಿಸುತ್ತಿರುವ ಎಲ್ಲ ಅಭ್ಯರ್ಥಿಗಳು ಗೆಲ್ಲುವಂತೆ ಶ್ರಮಿಸಬೇಕು. ಅದೇ ನೀವು ನನಗೆ ನೀಡಬೇಕಿರುವ ಉತ್ತಮ ಉಡುಗೊರೆ ಎಂದು ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.

ಮೈತ್ರಿಕೂಟವನ್ನು ಘೋಷಿಸಿದಾಗಲೇ, ಮಾಯಾವತಿ ಅವರು ಪ್ರಧಾನಿ ಅಭ್ಯರ್ಥಿಯಾಗಿರುವುದನ್ನು ನೀವು ಒಪ್ಪಿಕೊಳ್ಳುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಉತ್ತರ ಪ್ರದೇಶ ಹಲವಾರು ಪ್ರಧಾನಿಗಳನ್ನು ದೇಶಕ್ಕೆ ಕಾಣಿಕೆಯಾಗಿ ನೀಡಿದೆ. ನಾನು ಯಾರನ್ನು ಬೆಂಬಲಿಸುತ್ತೇನೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಉತ್ತರ ಪ್ರದೇಶದಿಂದಲೇ ಮತ್ತೊಬ್ಬರು ಪ್ರಧಾನಿಯಾದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಅಖಿಲೇಶ್ ಯಾದವ್ ಅವರು ಮಾಯಾವತಿ ಅವರ ಹೆಸರು ಹೇಳದೆಯೇ ಆ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದರು.

ಈ ಎರಡೂ ಪಕ್ಷಗಳು ಕಾಂಗ್ರೆಸ್ಸನ್ನು ಹೊರಗಿಟ್ಟಿದ್ದಲ್ಲದೆ, ಈ ಸಂದರ್ಭದಲ್ಲಿ ಅತಿದೊಡ್ಡ ರಾಷ್ಟ್ರೀಯ ಪಕ್ಷವನ್ನು ಟೀಕೆಗೂ ಮೈತ್ರಿಕೂಟ ಗುರಿ ಮಾಡಿದೆ. ಕಾಂಗ್ರೆಸ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಮಾಯಾವತಿ ಅವರು, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಗೆದ್ದಿರುವ ಕಾಂಗ್ರೆಸ್ ಇನ್ನೂ ಕಲಿಯಬೇಕಾಗಿರುವುದು ಬೇಕಾದಷ್ಟಿದೆ. ಕಾಂಗ್ರೆಸ್ ಪಕ್ಷ ರೈತರ ಸಾಲವನ್ನು 2 ಲಕ್ಷದವರೆಗೆ ಮಾತ್ರ ಮನ್ನಾ ಮಾಡಲು ನಿರ್ಧರಿಸಿದೆ. ಇದರಿಂದ ರೈತರಿಗೆ ಯಾವುದೇ ಸಹಾಯವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪುಸ್ತಕ ಬಿಡುಗಡೆ : ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ''A Travelogue of My Struggle-Ridden Life and BSP Movement' ಎಂಬ ಮಾಯಾವತಿ ಅವರ ರಾಜಕೀಯ ಜೀವನಾಧಾರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕೇಕ್ ಕಿತ್ತು ತಿಂದ ಬೆಂಬಲಿಗರು : ಮಾಯಾವತಿ ಅವರು ಹುಟ್ಟುಹಬ್ಬ ಆಚರಿಸುತ್ತಿದ್ದ ಸಂದರ್ಭದಲ್ಲಿ ತರಿಸಲಾಗಿದ್ದ ಬೃಹತ್ ಕೇಕ್ ಅನ್ನು ಕತ್ತರಿಸುವ ಮೊದಲೇ ಬೆಂಬಲಿಗರು ಮತ್ತು ಕಾರ್ಯಕರ್ತರು ಮುಗಿಬಿದ್ದು ಕಿತ್ತುಕೊಂಡು ತಿಂದ ಪ್ರಸಂಗವೂ ನಡೆಯಿತು. ಲೋಕಸಭೆ ಚುನಾವಣೆ ಬರುವ ಮುನ್ನವೇ ಅಲ್ಲಿ ಪರಿಸ್ಥಿತಿ ಹೀಗಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+