ಪತ್ರಕರ್ತ ಸಿದ್ದಿಕ್ ಕಪ್ಪನ್ ಜಾಮೀನು ಅರ್ಜಿ ಮತ್ತೆ ತಿರಸ್ಕಾರ
ಲಕ್ನೋ, ಜು. 07: ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧನಕ್ಕೆ ಒಳಗಾಗಿರುವ ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್ಗೆ ಜಾಮೀನು ಅರ್ಜಿಯನ್ನು ಮಥುರಾ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಕಳೆದ ವರ್ಷ ಅಕ್ಟೋಬರ್ 5 ರಂದು ನಡೆದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಸಿದ್ದಿಕ್ ಕಪ್ಪನ್ ಸೇರಿಂದತೆ ಮೂವರು ಹತ್ರಾಸ್ಗೆ ಹೋಗುತ್ತಿದ್ದಾಗ ಬಂಧಿಸಲಾಗಿತ್ತು.
"ಅಕ್ರಮ ಚಟುವಟಿಕೆಗಳಿಗಾಗಿ ವಿವಿಧ ದಿನಾಂಕಗಳಲ್ಲಿ ಆರೋಪಿಗಳ ಬ್ಯಾಂಕ್ ಖಾತೆಗೆ 20,000 ಮತ್ತು 25,000 ರೂಗಳನ್ನು ಜಮಾ ಮಾಡಲಾಗಿದೆ" ಎಂದು ಆರೋಪ ಮಾಡಲಾಗಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಅನಿಲ್ ಕುಮಾರ್ ಪಾಂಡೆ ವಿಚಾರಣೆಯ ಎರಡನೇ ದಿನ "ಕಪ್ಪನ್ ಅಲಹಾಬಾದ್ ಹೈಕೋರ್ಟ್ ಹೋಗಬಹುದು," ಎಂದು ಹೇಳಿದ್ದಾರೆ.
ಮಲಯಾಳಂ ಸುದ್ದಿ ಪೋರ್ಟಲ್ಗಾಗಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ವರದಿ ಮಾಡಲು ಕಪ್ಪನ್ ಉತ್ತರ ಪ್ರದೇಶದ ಹತ್ರಾಸ್ಗೆ ತೆರಳುತ್ತಿದ್ದಾಗ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಮೂವರು ಶಂಕಿತ ಸದಸ್ಯರೊಂದಿಗೆ ಅಕ್ಟೋಬರ್ 5 ರಂದು ಬಂಧಿಸಲಾಗಿತ್ತು.
ಇನ್ನು ಈ ಬಗ್ಗೆ ದಿ ಟೆಲಿಗ್ರಾಫ್ಗೆ ಪ್ರತಿಕ್ರಿಯೆ ನೀಡಿರುವ ಕಪ್ಪನ್ ಪರ ಸಲಹೆಗಾರ ಮಧುವಾನ್ ದತ್ ಚತುರ್ವೇದಿ, "ಕಪ್ಪನ್ನ ವಾದಗಳನ್ನು ಪರಿಗಣಿಸದೆ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಕಪ್ಪನ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.ಅಷ್ಟಕ್ಕೂ ಪಿಎಫ್ಐ ನಿಷೇಧಿತ ಸಂಘಟನೆ ಏನಲ್ಲ," ಎಂದು ಹೇಳಿದ್ದಾರೆ.
ಇನ್ನು "ಆರೋಪಗಳು ಗಂಭೀರವಾಗಿರುವುದನ್ನು ಗಮನಿಸಿ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು," ಎಂದು ಕೂಡಾ ಚತುರ್ವೇದಿ ಹೇಳಿದರು.
ನ್ಯಾಯಾಲಯ ತನ್ನ ಆದೇಶದಲ್ಲಿ, "ಆರೋಪಿ ತಾನು ಪತ್ರಕರ್ತ ಮತ್ತು ಪತ್ರಿಕೋದ್ಯಮ ಕೆಲಸಕ್ಕಾಗಿ ಹತ್ರಾಸ್ಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದ. ಆದರೆ ತೇಜಸ್ ನ್ಯೂಸ್ ಅನ್ನು ಉಲ್ಲೇಖಿಸುವ ಗುರುತಿನ ಚೀಟಿಯನ್ನು ಆತನ ಬಂಧನದ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ. ತೇಜಸ್ ನ್ಯೂಸ್ ಅನ್ನು ಡಿಸೆಂಬರ್ 2018 ರಲ್ಲಿ ಮುಚ್ಚಲಾಗಿದೆ ಎಂದು ಹೇಳಲಾಗಿದೆ. ಆರೋಪಿ ಪಿಎಫ್ಐಗಾಗಿ ಕೆಲಸ ಮಾಡುತ್ತಿದ್ದಾರೆ. ಕೋಮು / ವರ್ಗ ಸಂಘರ್ಷವನ್ನು ಪ್ರಚೋದಿಸಲು ಪಿಎಫ್ಐ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಎಂದು ತನಿಖೆಯ ಸಮಯದಲ್ಲಿ ಕಂಡುಬಂದಿದೆ. ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ. ಆರೋಪಿಗಳ ಲ್ಯಾಪ್ಟಾಪ್ನಿಂದ ಅಂತಹ ಬರಹಗಳು ಕಂಡುಬಂದಿದೆ. ಪತ್ರಿಕೋದ್ಯಮದ ನೆಪದಲ್ಲಿ ಆರೋಪಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ," ಎಂದಿದೆ.
"ಆರೋಪಿ ಪಿಎಫ್ಐಗೆ ಸೇರಿದವನು ಮತ್ತು ದೇಶ ಮತ್ತು ವಿದೇಶಗಳಿಂದ ಹಣವನ್ನು ಪಡೆಯುವ ಮತ್ತು ದೇಶದ ಸಮಗ್ರತೆ ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವಲ್ಲಿ ತೊಡಗಿರುವ ಭಯೋತ್ಪಾದಕ ಗುಂಪಿನ ಸದಸ್ಯನಾಗಿದ್ದಾನೆ ಎಂದು ಕಂಡುಬಂದಿದೆ. ಸಿಮಿ ಎಂಬ ನಿಷೇಧಿತ ಸಂಘಟನೆಯ ಕೆಲವು ಸಾಹಿತ್ಯವು ದೆಹಲಿಯ ನಿವಾಸದಿಂದ ದಾಳಿ ವೇಳೆ ಕಂಡುಬಂದಿದೆ. ಸಿಮಿಯ ಉನ್ನತ ನಾಯಕರೊಂದಿಗೆ ಆರೋಪಿಗಳು ಸಂಪರ್ಕದಲ್ಲಿದ್ದರು. ಅಕ್ರಮ ಚಟುವಟಿಕೆಗಳಿಗಾಗಿ ವಿವಿಧ ದಿನಾಂಕಗಳಲ್ಲಿ 20,000 ಮತ್ತು 25 ಸಾವಿರ ರೂಗಳನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಸಹ-ಆರೋಪಿಗಳಿಗೆ ಈಗಾಗಲೇ ಜಾಮೀನು ನಿರಾಕರಿಸಲಾಗಿದೆ. ಆದ್ದರಿಂದ ಪ್ರಕರಣದ ಗಂಭೀರತೆಯನ್ನು ಗಮನಿಸಿದರೆ, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸರಿಯಾದ ಕಾರಣವಿಲ್ಲ," ಎಂದು ನ್ಯಾಯಾಲಯ ಹೇಳಿದೆ.
ಕಳೆದ ತಿಂಗಳು, ಮಥುರಾದ ವಿಭಾಗೀಯ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಪ್ಪನ್ ಮತ್ತು ಇತರ ಮೂವರನ್ನು ಶಾಂತಿ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಿಡುಗಡೆ ಮಾಡಿತ್ತು. ಕಪ್ಪನ್ ಮತ್ತು ಇತರ ಮೂವರು ಶಾಂತಿ ಉಲ್ಲಂಘಿಸುವ ಉದ್ದೇಶದಿಂದ ಹತ್ರಾಸ್ಗೆ ಪ್ರಯಾಣಿಸುತ್ತಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶ ಪೊಲೀಸರು ಸಿಆರ್ಪಿಸಿಯ ಸೆಕ್ಷನ್ 116 (6) ರ ಅಡಿಯಲ್ಲಿ ಅಕ್ಟೋಬರ್ 5 ರಂದು ಉಪವಿಭಾಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಕಳೆದ ಜೂನ್ 18ರಂದು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕಪ್ಪನ್ರ 90 ವರ್ಷದ ತಾಯಿ ಖದೀಜಾ ಕುಟ್ಟಿ ನಿಧನರಾಗಿದ್ದರು. ಕಪ್ಪನ್ ಜೈಲಿನಲ್ಲಿ ಇದ್ದಿದರಿಂದ ತಾಯಿಯ ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಿಸಲು ಸಾಧ್ಯವಾಗಿರಲಿಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications