ಬಿಜೆಪಿಯ ಮಾಜಿ ಸಚಿವ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಆರೋಪ ಹಿಂಪಡೆದ ಯುವತಿ
ಲಕ್ನೋ, ಅಕ್ಟೋಬರ್ 13: ಬಿಜೆಪಿಯ ಮಾಜಿ ಸಚಿವ ಚಿನ್ಮಯಾನಂದ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಮಹಿಳೆ, ನ್ಯಾಯಾಲಯದಿಂದ ತಮ್ಮ ದೂರನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಚಿನ್ಮಯಾನಂದ ಪಾಲುದಾರಿಕೆಯುಳ್ಳ ಕಾನೂನು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಮಹಿಳೆ, ಬಿಜೆಪಿ ನಾಯಕನಿಂದ ನಿರಂತರವಾಗಿ ಅತ್ಯಾಚಾರಕ್ಕೆ ಒಳಗಾಗಿದ್ದಾಗಿ ಆರೋಪಿಸಿದ್ದರು. ಚಿನ್ಮಯಾನಂದ ವಿರುದ್ಧ ಕೊಲೆ ಬೆದರಿಕೆ ಆರೋಪಗಳನ್ನು ಕೂಡ ಮಾಡಿದ್ದರು. ಆದರೆ ಅವರು ಮಂಗಳವಾರ ಲಕ್ನೋದ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಿಂದ ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಚಿನ್ಮಯಾನಂದ ವಿರುದ್ಧ ತಾವು ಮಾಡಿದ್ದ ಅತ್ಯಾಚಾರದ ಆರೋಪಗಳನ್ನು ನಿರಾಕರಿಸುವುದಾಗಿ ಆಕೆ ತಿಳಿಸಿದ್ದಾರೆ.

ಯುವತಿಯ ಹೇಳಿಕೆಯಿಂದ ಆಕ್ರೋಶಗೊಂಡ ಪ್ರಾಸಿಕ್ಯೂಷನ್, ಕೂಡಲೇ ಸಿಆರ್ಪಿಸಿ ಸೆಕ್ಷನ್ 340ರ ಅಡಿ ಅರ್ಜಿ ಸಲ್ಲಿಸಿದ್ದು, ಸುಳ್ಳು ಆರೋಪಕ್ಕಾಗಿ ಆಕೆಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
ಈ ಅರ್ಜಿಯನ್ನ ನೋಂದಾಯಿಸುವಂತೆ ಕಚೇರಿಗೆ ಸೂಚಿಸಿರುವ ನ್ಯಾಯಾಧೀಶ ಪಿ.ಕೆ. ರಾಯ್, ಸಂತ್ರಸ್ತರು ಮತ್ತು ಆರೋಪಿಗೆ ಅದರ ಪ್ರತಿಗಳನ್ನು ಒದಗಿಸುವಂತೆ ನಿರ್ದೇಶಿಸಿದರು. ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ನಿಗದಿಗೊಳಿಸಲಾಗಿದೆ.
ಚಿನ್ಮಯಾನಂದ ವಿರುದ್ಧ ಅವರ ಟ್ರಸ್ಟ್ ನಡೆಸುತ್ತಿರುವ ಶಹಜಾನ್ಪುರ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದ ಆಕೆ ನೀಡಿದ್ದ ದೂರಿನ ಅನ್ವಯ ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಚಿನ್ಮಯಾನಂದ ಅವರನ್ನು ಬಂಧಿಸಲಾಗಿತ್ತು. ಅಲಹಾಬಾದ್ ಹೈಕೋರ್ಟ್ ಫೆಬ್ರವರಿಯಲ್ಲಿ ಜಾಮೀನು ನೀಡಿತ್ತು.












Click it and Unblock the Notifications