'ಭಯೋತ್ಪಾದಕ ಅಜೆಂಡಾ ಹರಡಲು ಪ್ರಯತ್ನಿಸಿದ್ದ ಪತ್ರಕರ್ತ ಕಪ್ಪನ್ ': ಯುಪಿ ಪೊಲೀಸ್
ಲಕ್ನೋ, ಅಕ್ಟೋಬರ್ 01: ಕಳೆದ ವರ್ಷ ಹತ್ರಾಸ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸಾವನ್ನಪ್ಪಿದ ಯುವತಿಯ ಕುಟುಂಬಸ್ಥರನ್ನು ಭೇಟಿಯಾಗಲು ಹೋಗುತ್ತಿದ್ದ ಸಂದರ್ಭದಲ್ಲಿ ಬಂಧನಕ್ಕೆ ಒಳಗಾದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ವಿರುದ್ದ ಉತ್ತರ ಪ್ರದೇಶ ಪೊಲೀಸರು ಸುಮಾರು 5000 ಪುಟಗಳ ಚಾರ್ಜ್ ಶೀಟ್ ಅನ್ನು ಸಿದ್ದಪಡಿಸಿದೆ. ಈ ಚಾರ್ಜ್ಶೀಟ್ನಲ್ಲಿ ಪತ್ರಕರ್ತ ಸಿದ್ದಿಕ್ ಕಪ್ಪನ್ "ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನ ಮಾಡಿದ್ದ," ಎಂದು ಆರೋಪ ಮಾಡಿದ್ದಾರೆ.
ಕಳೆದ ಎಪ್ರಿಲ್ನಲ್ಲಿ ಯುಪಿ ಪೊಲೀಸರ ವಿಶೇಷ ಕಾರ್ಯಪಡೆ ಚಾರ್ಜ್ಶೀಟ್ ಅನ್ನು ಮಾಡಿದ್ದು ಅದನ್ನು ಮಥುರಾ ಕೋರ್ಟ್ನ ಮುಂದೆ ಹಾಜರುಪಡಿಸಿತ್ತು. ಆದರೆ "ಈವರೆಗೂ ಸಿದ್ದಿಕ್ ಕಪ್ಪನ್ ಆಗಲಿ, ಅವರ ಕಾನೂನು ಪ್ರತಿನಿಧಿ ಅಥವಾ ವಕೀಲರಿಗೆ ಆಗಲಿ ನೀಡಿಲ್ಲ," ಎಂದು ಸಿದ್ದಿಕ್ ಕಪ್ಪನ್ ಪರ ವಕೀಲರು ವಾದ ಮಾಡಿದ್ದಾರೆ.
ಸಿದ್ದಿಕ್ ಕಪ್ಪನ್ ಬರೆದಿರುವ ಸುಮಾರು 36 ಲೇಖನಗಳು ಯೋಗಿ ಸರ್ಕಾರ ಬ್ಯಾನ್ ಮಾಡಿದ ಪಿಎಫ್ಐ ಅಥವಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಲಿಂಕ್ ಅನ್ನು ಹೊಂದಿದೆ ಎಂದು ಕೂಡಾ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಈ ಪೈಕಿ 2019 ರಲ್ಲಿ ಸರ್ಕಾರ ಜಾರಿ ಮಾಡಿದ ಪೌರತ್ವ ಕಾನೂನಿನ ವಿರುದ್ದದ ಪ್ರತಿಭಟನೆಯದ್ದು ಆಗಿದೆ.

"ಶಾಹೀನ್ಬಾಗ್ನಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಹಿಂದೂ ವ್ಯಕ್ತಿ ಕಪಿಲ್ ಗುರ್ಜರ್ ಪ್ರತಿಭಟನಾಕಾರರ ಎಡೆಗೆ ಗುರಿಯಾಗಿ ಗುಂಡು ಹಾರಿಸಿ ಬಗ್ಗೆ ಈ ವರದಿಯಲ್ಲಿ ಈ ಉಲ್ಲೇಖ ಮಾಡಲಾಗಿದೆ. ಈ ಘಟನೆಯನ್ನು ಮಹಾತ್ಮಗಾಂಧಿಯ ಹತ್ಯೆಗೆ ಹೋಲಿಕೆ ಮಾಡಲಾಗಿದೆ. ಪ್ರತಿಭಟನೆಯನ್ನು ಪೊಲೀಸರು ನಿಭಾಯಿಸಿದ ರೀತಿಯನ್ನು ಕೂಡಾ ಈ ವರದಿಯಲ್ಲಿ ಟೀಕೆ ಮಾಡಲಾಗಿದೆ," ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ. ಇನ್ನು ದೆಹಲಿ ಗಲಭೆಯ ಬಗ್ಗೆ ಒಂದು ವರದಿಯು ಪ್ರಕಟವಾಗಿದ್ದು ಇದು ಕೋಮುವಾದದ ಭಾವನೆಗಳಿಗೆ ಪ್ರಚೋಧನೆ ನೀಡುತ್ತದೆ ಎಂದು ಕೂಡಾ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
"ಗಲಭೆಯ ಸಂದರ್ಭದಲ್ಲಿ ನೀವು ಒಂದು ಧರ್ಮವನ್ನು ಮಾತ್ರ ಉದ್ದೇಶಿಸಿ, ಆ ಧರ್ಮಕ್ಕೆ ಸಂಬಂಧಿಸಿದ ವಿಚಾರವನ್ನು ಬರೆದರೆ ಆ ಧರ್ಮದ ಜನರು ಮತ್ತಷ್ಟು ಉದ್ರೇಕಕ್ಕೆ ಒಳಗಾಗುತ್ತಾರೆ. ಜವಾಬ್ದಾರಿಯುತ ಪತ್ರಕರ್ತ ಈ ರೀತಿಯಾಗಿ ಕೋಮುವಾದದ ವರದಿಯನ್ನು ಮಾಡುವುದಿಲ್ಲ. ಆದರೆ ಸಿದ್ದಿಕ್ ಕಪ್ಪನಿ ಕೇವಲ ಮುಸ್ಲಿಮರನ್ನು ಪ್ರಚೋದಿಸುವಂತಹ ಲೇಖನವನ್ನೇ ಬರೆದಿದ್ದಾರೆ. ಹಾಗೆಯೇ ಪಿಎಫ್ಐ ಪರವಾಗಿ ಬರೆದಿದ್ದಾರೆ," ಎಂದು ಕೂಡಾ ಚಾರ್ಜ್ಶೀಟ್ನಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಇನ್ನು ಕೊರೊನಾ ವೈರಸ್ ಸಂದರ್ಭದಲ್ಲಿ ನಿಝಾಮುದ್ಧೀನ್ ಮರ್ಕಜ್ ಬಗ್ಗೆಯೂ ಸಿದ್ದಿಕ್ ಕಪ್ಪನ್ ವರದಿ ಮಾಡಿದ್ದು, ಇದು ಕೇಂದ್ರ ಸರ್ಕಾರ ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸಲು ಮಾಡಿರುವ ಕೃತ್ಯ ಎಂದು ದೂರಲಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ. "ಈ ವರದಿಗಳು ನಿಷೇಧಿತ ಆದ ಸಂಘಟನೆ ಭಾರತದ ವಿದ್ಯಾರ್ಥಿಗಳ ಇಸ್ಲಾಮಿಕ್ ಚಳುವಳಿ (ಎಸ್ಐಎಮ್ಐ) ನ ಸದಸ್ಯರೊಂದಿಗೆ ಸೇರಿ ಬರೆದಿದ್ದಾರೆ ಹಾಗೂ ಈ ನಿಷೇಧಿತ ಸಂಘಟನೆಯ ಅಜೆಂಡಾವನ್ನು ಹರಡುವ ಕಾರ್ಯ ಮಾಡಿದ್ದಾರೆ," ಎಂದು ಆರೋಪ ಮಾಡಲಾಗಿದೆ.
ಆದರೆ ಸಿದ್ದಿಕ್ ಕಪ್ಪನ್ ಪರ ವಕೀಲ ವಿಲ್ಸ್ ಮಾಥ್ಯಿವ್ ಇದು ಏಕಪಕ್ಷೀಯ ಆರೋಪ ಎಂದು ಹೇಳಿದ್ದಾರೆ. ಪೊಲೀಸರಿಗೆ ಸಿದ್ದಿಕ್ ಕಪ್ಪನ್ ವಿಚಾರದಲ್ಲಿ ಯಾವುದೇ ಆರೋಪಕ್ಕೆ ದಾರಿ ಸಿಗದೆ ಒಂದು ವರ್ಷ ಕಳೆದ ಬಳಿಕ ಚಾರ್ಜ್ಶೀಟ್ ಸಿದ್ದಪಡಿಸಿದ್ದಾರೆ ಎಂದು ಕೂಡಾ ದೂರಿದ್ದಾರೆ. "ಸಿದ್ದಿಕ್ ಕಪ್ಪನ್ ಬಳಿ ಯಾವುದೇ ಮುಚ್ಚಿಡುವ ವಿಚಾರಗಳು ಇಲ್ಲ. ಸಿದ್ದಿಕ್ ಕಪ್ಪನ್ರನ್ನು ಬಂಧನ ಮಾಡಿ ಒಂದು ವರ್ಷ ಕಳೆದರೂ ಚಾರ್ಜ್ಶೀಟ್ ಅನ್ನು ಕೋರ್ಟ್ಗೆ ಸಲ್ಲಿಕೆ ಮಾಡಲಾಗಿದೆ. ಇನ್ನು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿ ಆರು ತಿಂಗಳು ಆದರೂ ಕೂಡಾ ಇನ್ನೂ ನಮಗೆ ಚಾರ್ಜ್ಶೀಟ್ನ ಪ್ರತಿ ದೊರಕಿಲ್ಲ," ಎಂದು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications