ಪುಷ್ಪರಾಜ್ ಜೈನ್ ಮೇಲೆ ಐಟಿ ದಾಳಿ: ಬಿಜೆಪಿ ವಿರುದ್ಧ ಅಖಿಲೇಶ್ ಗರಂ
ಕನೌಜ್ ಡಿಸೆಂಬರ್ 31: 'ದ್ವೇಷವನ್ನು ಹರಡುವವರು ಹೇಗೆ ಸಾಮರಸ್ಯದ ಸುಗಂಧವನ್ನು ಹರಡುತ್ತಾರೆ' ಎಂದು ಕನೌಜ್ನಲ್ಲಿ ನಡೆದ ಐಟಿ ದಾಳಿ ವಿರುದ್ಧ ಎಸ್ಪಿ ಅಧ್ಯಕ್ಷ ಮತ್ತು ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಕಿಡಿ ಕಾರಿದ್ದಾರೆ. ಸಮಾಜವಾದಿ ಪಕ್ಷದ ಎಂಎಲ್ಸಿ ಪುಷ್ಪರಾಜ್ ಜೈನ್ ಅಲಿಯಾಸ್ ಪಂಪಿ ಜೈನ್ ಅವರ ಮನೆ ಮತ್ತು ಸ್ಥಳಗಳಲ್ಲಿ ಡಿಜಿಜಿಐ ಮತ್ತು ಆದಾಯ ತೆರಿಗೆ ಜಂಟಿ ದಾಳಿ ಬಗ್ಗೆ ಅಖಿಲೇಶ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದೀಗ ದಾಳಿಯಿಂದ ರಾಜ್ಯದಲ್ಲಿ ರಾಜಕೀಯ ಬಿಸಿ ಏರಿದೆ. ಶುಕ್ರವಾರ ಕನೌಜ್ಗೆ ಆಗಮಿಸಿದ ಅಖಿಲೇಶ್ ಯಾದವ್ ಭಾರತೀಯ ಜನತಾ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಮೇಲೆ ದಾಳಿ ನಡೆಯುತ್ತದೆ ಎಂಬುದು ಮೊದಲೇ ಗೊತ್ತಿತ್ತು ಎಂದು ಅಖಿಲೇಶ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಬಿಜೆಪಿಯನ್ನು ಗುರಿಯಾಗಿಸಿಕೊಂಡು ಹರಿಹಾಯ್ದಿದ್ದಾರೆ. ದ್ವೇಷದ ವಾಸನೆಯನ್ನು ಹರಡುವ (ಬಿಜೆಪಿ) ಪರಿಮಳವನ್ನು ಜನರು ಹೇಗೆ ಇಷ್ಟಪಡುತ್ತಾರೆ ಎಂದು ಕಿಡಿಕಾರಿದ್ದಾರೆ. ಆಡಳಿತ ಪಕ್ಷದವರು ಸುಗಂಧ ದ್ರವ್ಯ ತಯಾರಕ ಪುಷ್ಪರಾಜ್ ಜೈನ್ ಅವರನ್ನು ಹುಡುಕಲು ಹೋಗಿದ್ದರು. ಆಗ ಅವರು (ಬಿಜೆಪಿ) ತಪ್ಪಾಗಿ ತಮ್ಮದೇ ಪಕ್ಷದ ಆಪಾದಿತ ಸಹಚರ ಪಿಯೂಷ್ ಜೈನ್ ಅವರ ಮೇಲೆ ದಾಳಿ ಮಾಡಿದರು. ಈಗ ತಮ್ಮ ಸಿಟ್ಟನ್ನು ತಣಿಸಲು ಸುಗಂಧ ದ್ರವ್ಯ ತಯಾರಕ ಪುಷ್ಪರಾಜ್ ಜೈನ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಬಿಜೆಪಿಯವರು ನಾವು ನ್ಯಾಯಯುತರು ಎಂದು ತೋರಿಸಬೇಕು ಎಂಬ ಕಾರಣಕ್ಕೆ ಇನ್ನೂ ಅನೇಕರ ಮನೆ ಮೇಲೂ ದಾಳಿ ಮಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಜೊತೆಗೆ ಮುಂದುವರೆದು ಮಾತನಾಡಿದ ಅಖಿಲೇಶ್, ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಮಾಜವಾದಿ ಪಕ್ಷಕ್ಕೂ ಈ ಹಿಂದೆ ನಡೆದ ದಾಳಿಗೂ (ಪಿಯೂಷ್ ಜೈನ್) ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಕನೌಜ್ ಪರಿಮಳದ ರಾಜಧಾನಿ ಎಂದು ಅಖಿಲೇಶ್ ಹೇಳಿದರು. ವ್ಯಾಪಾರಿಗಳು ಮತ್ತು ರೈತರು ಇಬ್ಬರೂ ಸುಗಂಧ ದ್ರವ್ಯದ ವ್ಯಾಪಾರದೊಂದಿಗೆ ಸಂಬಂಧ ಹೊಂದಿದ್ದಾರೆ.

ಅನೇಕ ಇತರ ವ್ಯವಹಾರಗಳು ಸಹ ಇದರೊಂದಿಗೆ ಸಂಬಂಧ ಹೊಂದಿವೆ. ಆದರೆ ಲಕ್ನೋ ಮತ್ತು ದೆಹಲಿಯ ಕೇಂದ್ರ ಸರ್ಕಾರವು ಕನೌಜ್ಗೆ ಮಾನಹಾನಿ ಮಾಡುವಲ್ಲಿ ತೊಡಗಿದೆ. ಕನೌಜ್ನಲ್ಲಿ ಸುಗಂಧ ದ್ರವ್ಯ ವ್ಯಾಪಾರ ದೊಡ್ಡ ಉದ್ಯಮವಾಗಿದೆ. ಇದು ಅಧಿಕ ಜನರಿಗೆ ಉದ್ಯೋಗ ನೀಡುತ್ತದೆ ಎಂದು ಹೇಳಿದರು.
ಇಲ್ಲಿ ಸುಗಂಧ ದ್ರವ್ಯ ಪಾರ್ಕ್ ತಂದರೂ ಕಾಳಜಿ ವಹಿಸಿಲ್ಲ. ಲಕ್ನೋದಲ್ಲಿ ಪ್ಯಾರಾಮೆಡಿಕಲ್ ಕಾಲೇಜು ಪ್ರಾರಂಭವಾಗಬೇಕಿತ್ತು. ಆದರೆ ಕೆಲಸ ನಿಂತುಹೋಯಿತು. ಈ ಸಂದರ್ಭದಲ್ಲಿ, ಎಸ್ಪಿ ಸರ್ಕಾರದ ಕಾಮಗಾರಿಗಳನ್ನು ಬಿಜೆಪಿ ನಿಲ್ಲಿಸಿದೆ ಎಂದು ಅಖಿಲೇಶ್ ಆರೋಪಿಸಿದರು. ಬಿಜೆಪಿಯವರು ಈ ರೀತಿ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಇದೇ ಕೆಲಸ ಮಾಡಿದ್ದರು ಎಂದು ಅವರು ನೆನಪಿಸಿದರು.
ಕನೌಜ್ನಲ್ಲಿ ಕಳೆದ ವಾರ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿತ್ತು. ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. 197 ಕೋಟಿಗೂ ಹೆಚ್ಚು ನಗದು, 23 ಕೆಜಿ ಚಿನ್ನ ಮತ್ತು 6 ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ಕಾನ್ಪುರ ಮತ್ತು ಕನೌಜ್ನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಈ ದಾಳಿ ಉತ್ತರಪ್ರದೇಶದಲ್ಲಿ ರಾಜಕೀಯ ಕದನಕ್ಕೆ ಕಾರಣವಾಗಿದೆ. ಪಿಯೂಷ್ ಜೈನ್ ಗೂ ಅಖೀಲೇಶ್ ಯಾದವ್ಗೂ ಸಂಬಂಧ ಕಲ್ಪಿಸಲಾಗಿದೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿದ ಅಖಿಲೇಶ್ ಯಾದವ್ ಬಿಜೆಪಿ ತಮ್ಮ ಪಕ್ಷದವರ ಮೇಲೆ ತಪ್ಪಾಗಿ ದಾಳಿ ಮಾಡಿದೆ ಎಂದು ವಾಗ್ದಾಳಿ ಮಾಡಿದ್ದರು.












Click it and Unblock the Notifications