ಯುಪಿ: ಅಖಿಲೇಶ್ ಸಮಾವೇಶದಲ್ಲಿ ಬ್ಯಾರಿಕೇಡ್ ಮತ್ತು ಕುರ್ಚಿಗಳು ಧ್ವಂಸ
ಬಲಿಯಾ, ಮಾರ್ಚ್ 2: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷ ಎಸ್ಪಿ ನಡುವೆ ನೇರ ಹಣಾಹಣಿ ನಡೆಯಲಿದೆ. ಅಖಿಲೇಶ್ ಅವರ ಸಾರ್ವಜನಿಕ ಸಭೆಗಳಲ್ಲಿ ಭಾರಿ ಜನಸ್ತೋಮ ಸೇರುತ್ತಿದ್ದು, ಈ ಕಾರಣದಿಂದಾಗಿ ಹಲವೆಡೆ ಕಾಲ್ತುಳಿತದಂತಹ ಘಟನೆಗಳು ನಡೆದಿವೆ.
ಅಖಿಲೇಶ್ ಯಾದವ್ ಫೆಫ್ನಾ ವಿಧಾನಸಭಾ ಕ್ಷೇತ್ರದ ಕಟಾರಿಯಾ ಗ್ರಾಮಕ್ಕೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ತೆರಳಿದ್ದರು. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮವೇ ನೆರೆದಿತ್ತು. ಜನಸಂದಣಿಯನ್ನು ನಿಯಂತ್ರಿಸಲಾಗಲಿಲ್ಲ. ಅಖಿಲೇಶ್ ಅವರ ವೇದಿಕೆಯನ್ನು ತಲುಪಲು ಜನರು ಬ್ಯಾರಿಕೇಡ್ಗಳನ್ನು ಮುರಿದರು. ಈ ಕಾಲ್ತುಳಿತದಲ್ಲಿ ಕುರ್ಚಿಗಳು ಮುರಿದು ಹೋಗಿವೆ. ಜನಸಂದಣಿಯನ್ನು ನಿಭಾಯಿಸುವಲ್ಲಿ ಪೊಲೀಸರು ಹೈರಾಣಾಗಿ ಹೋಗಿದ್ದಾರೆ. ಅನಿಯಂತ್ರಿತ ಜನಸಂದಣಿಯನ್ನು ಕಂಡ ಅಖಿಲೇಶ್ ಯಾದವ್ ಕಾರ್ಯಕ್ರಮದಿಂದ ಬೇಗ ಹೊರಡಬೇಕಾಯಿತು.
ಸಾರ್ವಜನಿಕ ಸಭೆಯಲ್ಲಿ ಬ್ಯಾರಿಕೇಡ್ ಮತ್ತು ಕುರ್ಚಿಗಳು ಧ್ವಂಸ
ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸಾರ್ವಜನಿಕ ಸಭೆಗಳಿಗಾಗಿ ಮಂಗಳವಾರ ಬಲಿಯಾಕ್ಕೆ ತೆರಳಿ, ಮಾತನಾಡಿದರು. ಫೆಫ್ನಾ ವಿಧಾನಸಭಾ ಕ್ಷೇತ್ರದ ಕಟಾರಿಯಾದಲ್ಲಿ ಸಾರ್ವಜನಿಕ ಸಭೆ ಕೈಗೊಳ್ಳಲಾಗಿತ್ತು. ಅಲ್ಲಿಗೆ ಅಖಿಲೆಶ್ ತಲುಪಿದರಾದರೂ ಅವರು ತಲುಪಿದ ತಕ್ಷಣ ವೇದಿಕೆಯ ಬಳಿ ತಲುಪಲು ಸಾಧ್ಯವಾಗಲಿಲ್ಲ. ಈ ವೇಳೆ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಜನರು ಬ್ಯಾರಿಕೇಡ್ಗಳನ್ನು ಮುರಿದು ವೇದಿಕೆಯತ್ತ ಹೋಗುವುದು ಕಂಡುಬಂತು. ಸ್ವಲ್ಪ ಹೊತ್ತಿನ ನಂತರ ಜನಸಮೂಹ ಶಾಂತವಾಯಿತು. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್ ಬಿಜೆಪಿ ಮತ್ತು ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಬಾರಿಯ ಯುಪಿ ಚುನಾವಣೆ ಬಲಿಯಾ ವರ್ಸಸ್ ಬಿಜೆಪಿ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಬಿಜೆಪಿಯನ್ನು ಸುಳ್ಳುಗಾರ ಎಂದು ಕರೆದಿರುವ ಅಖಿಲೇಶ್, ಬಿಜೆಪಿಯ ಜನರು ಸಾರ್ವಜನಿಕರಿಗೆ ಎಷ್ಟು ಮೋಸ ಮಾಡಿದ್ದಾರೆ ಎಂಬುದು ಬಲ್ಲಿಯಾ ಜನರಿಗೆ ತಿಳಿದಿದೆ ಎಂದು ಹೇಳಿದರು. ಬಿಜೆಪಿಯವರು ಎಷ್ಟು ಮೋಸ ಮಾಡಿದ್ದಾರೆ ಎಂದರೆ ಈಗ ಈ ಚುನಾವಣೆ ಬಲಿಯಾ ವರ್ಸಸ್ ಚೀಟರ್ ಆಗಿ ಮಾರ್ಪಟ್ಟಿದೆ. ಬಿಜೆಪಿ ಸರಕಾರ ಬಂದರೆ ರೈತರ ಸಂಖ್ಯೆಯನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತ್ತು ಆದರೆ ಬಿಜೆಪಿ ಸರಕಾರದಿಂದ ರೈತರಿಗೆ ಬೆಂಬಲ ಬೆಲೆಯಾಗಲಿ, ರಸಗೊಬ್ಬರವಾಗಲಿ ಸಿಕ್ಕಿಲ್ಲ ಎಂದು ಅಖಿಲೇಶ್ ಹೇಳಿದರು. ಬಿಜೆಪಿಯಲ್ಲಿ ನಾಯಕ ದೊಡ್ಡವನಾದಷ್ಟೂ ಸುಳ್ಳು ಹೇಳುತ್ತಿದ್ದಾನೆ. ಈ ಬಾರಿಯ ಯುಪಿ ಚುನಾವಣೆಯು ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಚುನಾವಣೆಯಾಗಿದೆ ಎಂದು ಹೇಳಿದರು.

ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರವನ್ನು ದ್ವಿಗುಣಗೊಳಿಸಿದೆ. ರೈತರ ಆದಾಯವನ್ನು ಅರ್ಧದಷ್ಟು ಕಡಿಮೆ ಮಾಡಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. "ಡಬಲ್ ಇಂಜಿನ್ ಸರ್ಕಾರವು ಕಳೆದ ಮೂರು ವರ್ಷಗಳಿಂದ ಸೇನಾ ನೇಮಕಾತಿಗಳನ್ನು ನಡೆಸಿಲ್ಲ ಮತ್ತು ನಿರುದ್ಯೋಗ ಹೆಚ್ಚಿಸುತ್ತಿದೆ' ಎಂದು ಆರೋಪಿಸಿದ್ದಾರೆ. ಇಂಧನ ಮತ್ತು ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ ಮತ್ತು ಈ ಆಡಳಿತದಲ್ಲಿಯೇ 400 ರೂ.ಗೆ ಬಂದ ಎಲ್ಪಿಜಿ ಸಿಲಿಂಡರ್ಗಳನ್ನು ಈಗ 1,000 ರೂ.ಗೆ ಮಾರಾಟ ಮಾಡಲಾಗುತ್ತಿದೆ.

"ಬ್ಯಾಂಕ್ಗಳಿಗೆ ನೂರಾರು ಕೋಟಿ ರೂಪಾಯಿಗಳನ್ನು ವಂಚಿಸಿ ಉದ್ಯಮಿಗಳು ಒಬ್ಬರ ನಂತರ ಒಬ್ಬರು ದೇಶದಿಂದ ಪಲಾಯನ ಮಾಡುತ್ತಿದ್ದಾರೆ" ಎಂದು ಅಖಿಲೇಶ್ ಹೇಳಿದರು, ಇತ್ತೀಚಿನದು 23,000 ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆಯಾಗಿದೆ. 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ನೀರಾವರಿ, ರಸಗೊಬ್ಬರಕ್ಕೆ ಅಗತ್ಯವಿರುವ ವಿದ್ಯುತ್ ಮತ್ತು ಇಂಧನದ ಬೆಲೆ ಏರಿಕೆಯಿಂದಾಗಿ ಅವರ ಆದಾಯವು ಸುಮಾರು ಅರ್ಧಕ್ಕೆ ಇಳಿದಿದೆ. ಬಿಜೆಪಿ ಅಭ್ಯರ್ಥಿಗಳು ತಾವು ಹೀನಾಯ ಸೋಲಿನತ್ತ ಸಾಗುತ್ತಿರುವುದನ್ನು ಅರಿತು ಕಿವಿ ಹಿಂಡಿಕೊಂಡು ವೇದಿಕೆ ಮೇಲೆ ಧರಣಿ ಕುಳಿತಿದ್ದಾರೆ ಎಂದರು. ಈ ಹಿಂದೆ ಬಿಜೆಪಿ ಶಾಸಕ ಭೂಪೇಶ್ ಚೌಬೆ ತಮ್ಮ ಕುರ್ಚಿಯ ಮೇಲೆ ನಿಂತು, ತಮ್ಮ ಕಿವಿಗಳನ್ನು ಹಿಡಿದುಕೊಂಡು, ಕಳೆದ ಐದು ವರ್ಷಗಳಲ್ಲಿ ತಾವು ಏನಾದರೂ ತಪ್ಪು ಮಾಡಿದ್ದರೆ ಅದನ್ನು ಕ್ಷಮಿಸಿ ಎಂದು ವೇದಿಕೆಯ ಮೇಲೇ ಬಸ್ಕಿ ಹೊಡೆದಿದ್ದರು. ಇದನ್ನು ಅಖಿಲೇಶ್ ವ್ಯಂಗ್ಯವಾಡಿದ್ದಾರೆ.












Click it and Unblock the Notifications