ಯುಪಿಯಲ್ಲಿ ಬಿಜೆಪಿ ಗೆದ್ದರೆ ಯೋಗಿಯೇ ಪಿಎಂ ಅಭ್ಯರ್ಥಿ; ಏನಿದು ಅಖಿಲೇಶ್ ಮಾತಿನ ಮರ್ಮ?
ಲಕ್ನೋ, ಜನವರಿ 11: "ಉತ್ತರ ಪ್ರದೇಶದಲ್ಲಿ ಈ ಬಾರಿ ಯೋಗಿ ಆದಿತ್ಯನಾಥ್ ಗೆದ್ದರೆ, ಮುಂದಿನ ಬಾರಿ ಅವರೇ ಪ್ರಧಾನಮಂತ್ರಿ ಅಭ್ಯರ್ಥಿ ಆಗಬಹುದು," ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಲಕ್ನೋದಲ್ಲಿ ನಡೆದ ಪಂಚಾಯತ್ ಆಜ್ ತಕ್ ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, ತಕ್ಷಣ ತಮ್ಮ ಹೇಳಿಕೆಗೆ ಮತ್ತೊಂದು ಸಾಲನ್ನೂ ಸೇರಿಸಿದ್ದಾರೆ. ಯೋಗಿ ಆದಿತ್ಯನಾಥ್, ಪ್ರಧಾನಿ ಅಭ್ಯರ್ಥಿಯೇ ಆಗಬಹುದು, ಆದರೆ ಈ ಬಗ್ಗೆ ಬಿಜೆಪಿಯವರು ಯೋಚಿಸಬೇಕು ಎಂದಿದ್ದಾರೆ.
ಎಬಿಪಿ-ಸಿ ವೋಟರ್ ಸಮೀಕ್ಷೆ: ಯುಪಿಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ
ಒಂದು ವೇಳೆ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆಯೇ ಎಂಬ ಪ್ರಶ್ನೆಗೆ ಅಖಿಲೇಶ್ ಯಾದವ್ ಉತ್ತರಿಸಿದರು. ಫೆಬ್ರವರಿ 10ರಿಂದ ರಾಜ್ಯದಲ್ಲಿ ನಡೆಯಲಿರುವ ಏಳು ಹಂತಗಳ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆಯಿಲ್ಲ:
ಉತ್ತರ ಪ್ರದೇಶದಲ್ಲಿ ನಡೆದ ಹತ್ರಾಸ್ ಮತ್ತು ಉನ್ನಾವೋ ಅತ್ಯಾಚಾರ ಪ್ರಕರಣಗಳನ್ನು ಉಲ್ಲೇಖಿಸಿದ ಅಖಿಲೇಶ್ ಯಾದವ್, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ ಎಂದು ಆರೋಪಿಸಿದರು. "ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಅತಿಹೆಚ್ಚು ರಕ್ಷಣೆಯಿಲ್ಲದಂತಾಗಿದೆ. ಹತ್ರಾಸ್ ಮತ್ತು ಉನ್ನಾವೋ ಪ್ರಕರಣಗಳನ್ನು ನಾವು ಮರೆಯುವುದಕ್ಕೆ ಸಾಧ್ಯವೇ?, NCRB ಅಂಕಿ-ಅಂಶಗಳನ್ನು ಒಮ್ಮೆ ನೋಡಿ. ಈ ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳೇ ತಲೆಮರೆಸಿಕೊಂಡಿದ್ದಾರೆ. ರಾಜ್ಯದಲ್ಲಿ ಗಲಭೆ, ಹಿಂಸಾಚಾರ, ಅತ್ಯಾಚಾರ ಮತ್ತು ಟೀಸಿಂಗ್ ಘಟನೆಗಳು ಅತಿಹೆಚ್ಚಾಗಿ ವರದಿಯಾಗುತ್ತಿವೆ," ಎಂದು ಅಖಿಲೇಶ್ ಯಾದವ್ ಹೇಳಿದರು.
ಏಳು ಹಂತಗಳಲ್ಲಿ ಮತದಾನ:
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಶನಿವಾರ ಪ್ರಕಟಿಸಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಉತ್ತರ ಪ್ರದೇಶದಲ್ಲಿ 80 V/s 20ರ ಲೆಕ್ಕ ಹೇಳಿದ ಯೋಗಿ:
ರಾಜ್ಯದಲ್ಲಿ ಸಿಎಂ ಯೋಗಿ ಆದಿತ್ಯನಾಥ್ 80 ವಿರುದ್ಧ 20 ಎಂಬುದು ಒಂದು ವಾಸ್ತವ ಎಂದಿದ್ದಾರೆ. ಈ ಚುನಾವಣೆಯು ಶೇಕಡಾ 80ರಷ್ಟು ಮತ್ತು ಶೇಕಡಾ 20 ರಷ್ಟು ಆಗಿದೆ. ಮಾರ್ಚ್ 10 ರಂದು ಫಲಿತಾಂಶ ಬರಲಿ, ಬಿಜೆಪಿ ಭಾರಿ ಜನಾದೇಶದೊಂದಿಗೆ ಸರ್ಕಾರ ರಚಿಸಲಿದೆ. ಮತ್ತೊಂದೆಡೆ ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಉಳಿದ ಶೇ.20ರಷ್ಟು ಪಕ್ಷಗಳು ಹೋರಾಟ ನಡೆಸಲಿವೆ. ಈ ಶೇಕಡಾ 20ರಷ್ಟು ಮಂದಿ ರಾಮಜನ್ಮಭೂಮಿ, ಕಾಶಿ ವಿಶ್ವನಾಥ ಧಾಮ, ಮಥುರಾ-ವೃಂದಾವನದ ಭವ್ಯ ಅಭಿವೃದ್ಧಿಯನ್ನು ವಿರೋಧಿಸುವವರು. ಅಪರಾಧಿಗಳು, ಮಾಫಿಯಾ ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವವರು. ನಾನು ನಿರ್ದಿಷ್ಟ ಸಮುದಾಯದ ಬಗ್ಗೆ ಮಾತನಾಡುತ್ತಿಲ್ಲ. ಹಿಂದೂ ವಿರೋಧಿಗಳು ದೇಶ ವಿರೋಧಿಗಳು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಗದ್ದುಗೆ:
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.