ಅಂತರ್ಜಾತೀಯ ವಿವಾಹ:ಬಿಜೆಪಿ ಶಾಸಕನ ಪುತ್ರಿಯ ಪತಿ ಮೇಲೆ ಹಲ್ಲೆ
ಲಕ್ನೋ, ಜುಲೈ 15: ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಅವರ ಪುತ್ರಿ ಸಾಕ್ಷಿ ಮಿಶ್ರಾ ಅವರು ದಲಿತ ಯುವಕ ಅಜಿತೇಶ್ ಕುಮಾರ್ ಅವರನ್ನು ಮದುವೆಯಾದ ಪ್ರಕರಣ ನಾಟಕೀಯ ತಿರುವು ಪಡೆಯುತ್ತಿದೆ.
ಅಲಹಾಬಾದಿನ ಹೈ ಕೋರ್ಟ್ ಎದುರಲ್ಲೇ ಅಜಿತೇಶ್ ಕುಮಾರ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ. ದಂಪತಿಗಳು ಪೊಲಿಸ್ ಭದ್ರತೆಯಲ್ಲಿ ಇರುವ ಸಂದರ್ಭದಲ್ಲೇ ಈ ಘಟನೆ ನಡೆದಿದ್ದು, ಹಲ್ಲೆ ಮಾಡಿದವರು ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಕೇವಲ ಅಜಿತೇಶ್ ಕುಮಾರ್ ಅವರ ಮೇಲೆ ಮಾತ್ರವೇ ಹಲ್ಲೆ ನಡೆದಿದ್ದು, ಸಾಕ್ಷಿ ಮಿಶ್ರಾ ಅವರು ಜೊತೆಯಲ್ಲೇ ಇದ್ದರೂ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸದೇ ಇರುವುದರಿಂದ ಇದು ಸಾಕ್ಷಿ ಮಿಶ್ರಾ ಅವರ ಕುಟುಂಬಸ್ಥರಿಂದಲೇ ನಡೆದ ಹಲ್ಲೆ ಇರಬಹುದು ಎಂಬ ಅನುಮಾನ ಎದ್ದಿದೆ.

23 ವರ್ಷ ವಯಸ್ಸಿನ ಸಾಕ್ಷಿ ಮತ್ತು 29 ವರ್ಷ ವಯಸ್ಸಿನ ಅಜಿತೇಶ್ ಕುಮಾರ್ ಈ ತಿಂಗಳ ಅರಂಭದಲ್ಲಿ ಮನೆಯವರ ವಿರೋಧದ ಹೊರತಾಗಿಯೂ ಮದುವೆಯಾಗಿದ್ದರು. ತಮ್ಮಿಬ್ಬರ ಪ್ರಾಣಕ್ಕೂ ಅಪಾಯವಿದೆ, ತಮ್ಮ ಪ್ರಾಣಕ್ಕೇನಾದರೂ ಅಪಾಯವಾದರೆ ಅದಕ್ಕೆ ತಮ್ಮ ತಂದೆಯೇ ಕಾರಣ ಎಂದು ಈ ಮೊದಲೇ ಸಾಕ್ಷಿ ವಿಡಿಯೋ ಮುಖೇನ ತಿಳಿಸಿದ್ದರು. ಇವರಿಬ್ಬರ ಮದುವೆ ಸಿಂಧುವಾಗಿದೆ ಎಂದಿದ್ದ ಅಲಹಾಬಾದ್ ಹೈಕೋರ್ಟ್ ಅವರಿಗೆ ಪೊಲೀಸ್ ಭದ್ರತೆಯನ್ನು ನೀಡಲು ಆದೇಶಿಸಿತ್ತು.
ಪೊಲೀಸ್ ಭದ್ರತೆಯ ಹೊರತಾಗಿಯೂ ಅವರ ಮೇಲೆ ಹಲ್ಲೆ ನಡೆದಿದೆ.
ಮಗಳ ಆರೋಪಕ್ಕೆ ಪ್ರತಿಕ್ರಿಯ ನೀಡಿದ ತಂದೆ ರಾಜೇಶ್ ಮಿಶ್ರಾ, ಇದು ರಾಜಕೀಯ ಪಿತೂರಿಯಷ್ಟೆ. ನನ್ನ ಮಗಳು ಪ್ರಾಪ್ತ ವಯಸ್ಸಿನವಳು. ಆಕೆಗೆ ಇಷ್ಟಬಂದ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಆಕೆಗಿದೆ. ಜಾತಿಯ ಕಾರಣಕ್ಕಾಗಿ ನಾನು ಆಕೆಯ ಮದುವೆಗೆ ಅಸಮ್ಮತಿ ಸೂಚಿಸಿರಲಿಲ್ಲ. ಆದರೆ ಇಬ್ಬರ ನಡುವೆ ಹೆಚ್ಚಿನ ವಯಸ್ಸಿನ ಅಂತರವಿದೆ ಮತ್ತು ಆ ಹುಡುಗನಿಗೆ ಯಾವುದೇ ಸರಿಯಾದ ಉದ್ಯೋಗವಿಲ್ಲ ಎಂಬ ಕಾರಣಕ್ಕೆ ನಾನು ಮದುವೆಗೆ ಒಪ್ಪಿರಲಿಲ್ಲ ಎಂದಿದ್ದರು.
ಅಲಹಾಬಾದ್ ಹೈಕೋರ್ಟಿನ ಎದುರಲ್ಲೇ ನಡೆದ ಇನ್ನೊಂದು ನಾಟಕೀಯ ಬೆಳವಣಿಗೆಯಲ್ಲಿ ದಂಪತಿಯನ್ನು ಅಪರಿಚಿತರು ಅಪಹರಣ ಮಾಡಿದ ಘಟನೆ ನಡೆದಿದೆ. ರುಬಿ ಎಂಬ ಯುವತಿ ಶಮಿಮ್ ಎಂಬ ಯುವಕನನ್ನು ಮದುವೆಯಾಗಲು ನಿರ್ಧರಿಸಿದ್ದ ಸಂದರ್ಭದಲ್ಲಿ ಕೋರ್ಟಿನ ಆಅವರಣಕ್ಕೇ ಬಂದ ಕಾರೊಂದು ಈ ಜೋಡಿಯನ್ನು ಅಪಹರಿಸಿದ ಘಟನೆ ನಡೆದಿತ್ತು. ಆದರೆ ಕೆಲವೇ ಕ್ಷಣಗಳ ನಂತರ ಅವರು ಫತೇಪುರ ಜಿಲ್ಲೆಯ ಬಳಿ ಪತ್ತೆಯಾಗಿದ್ದರು!












Click it and Unblock the Notifications