ಹತ್ರಾಸ್ ಅತ್ಯಾಚಾರ: ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ಪರಿಹಾರ, ಉದ್ಯೋಗ ಪ್ರಕಟಿಸಿದ ಯೋಗಿ
ಲಕ್ನೋ, ಸೆಪ್ಟೆಂಬರ್ 30: ಹತ್ರಾಸ್ನಲ್ಲಿ ಯುವತಿಯ ಮೇಲಿನ ಅಮಾನುಷ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವುದರ ಹಿಂದೆ ಕೌಟುಂಬಿಕ ದ್ವೇಷದ ಕಾರಣವಿದೆ ಎಂದು ಆರೋಪಿಯೊಬ್ಬನ ಕುಟುಂಬ ಆರೋಪಿಸಿದೆ.
ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಪ್ಪಾಗಿ ಆರೋಪ ಹೊರಿಸಲಾಗಿದೆ. ಇದರ ಹಿಂದೆ ಹಳೆಯ ದ್ವೇಷವಿದೆ. ಎರಡೂ ಕುಟುಂಬಗಳ ನಡುವೆ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ದ್ವೇಷವಿತ್ತು. ಕುಟುಂಬದ ಇಬ್ಬರು ಸದಸ್ಯರು ಈ ಹಿಂದೆಯೂ ಎಸ್ಸಿ/ಎಸ್ಟಿ ಕಾಯ್ದೆಯಡಿ ಹೊರಿಸಲಾದ ಆರೋಪದಲ್ಲಿ ಜೈಲಿಗೆ ಹೋಗಿದ್ದರು ಎಂದು ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ರಾಮು ಎಂಬಾತನ ತಾಯಿ ರಾಜ್ವತಿ ದೇವಿ ಹೇಳಿದ್ದಾರೆ.
'ಸಂದೀಪ್ ತಂದೆ ನರೇಂದ್ರ ಮತ್ತು ಆರೋಪಿ ರವಿ ಇಬ್ಬರನ್ನೂ 2001ರಲ್ಲಿ ಅತ್ಯಾಚಾರಕ್ಕೆ ಬಲಿಯಾದ ಯುವತಿಯ ಅಜ್ಜನ ಮೇಲೆ ಹಲ್ಲೆ ನಡೆಸಿದ್ದ ಆರೋಪಕ್ಕೆ ಒಳಗಾಗಿದ್ದರು. ಆಗ ರವಿಗೆ 13 ವರ್ಷ. ತಮ್ಮ ಕುಟುಂಬದ ಸದಸ್ಯರಿಗೆ ಕಿರುಕುಳ ನೀಡಿದ್ದರು ಎಂದು ಅವರ ಮೇಳೆ ಸುಳ್ಳು ಆಪಾದನೆ ಮಾಡಲಾಗಿತ್ತು. ನಮ್ಮ ಕುಟುಂಬದವರನ್ನು ಜೈಲಿಗೆ ಕಳುಹಿಸುವ ಸಲುವಾಗಿ ಆ ಯುವತಿಯ ಅಜ್ಜ ತನಗೆ ತಾನೇ ಗಾಯಮಾಡಿಕೊಂಡಿದ್ದ. ನರೇಂದ್ರ ಮತ್ತು ರವಿ ಇಬ್ಬರೂ 20 ದಿನ ಜೈಲಿನಲ್ಲಿದ್ದರು' ಎಂದು ದೇವಿ ಹೇಳಿದ್ದಾರೆ. ಮುಂದೆ ಓದಿ...

ಮಗ ಕೆಲಸಕ್ಕೆ ಹೋಗಿದ್ದ
ಆದರೆ ಆ ಗಲಾಟೆ ಪ್ರಕರಣದ ಬಳಿಕ ಎರಡೂ ಕುಟುಂಬಗಳ ಮಧ್ಯೆ ವೈಷಮ್ಯದ ಘಟನೆಗಳು ನಡೆದಿರಲಿಲ್ಲ ಎಂದಿರುವ ಆಕೆ, ಈ ಪ್ರಕರಣದಲ್ಲಿ ಪೊಲೀಸರು ತಪ್ಪಾಗಿ ತನ್ನ ಮಗನನ್ನು ಆರೋಪಿಯನ್ನಾಗಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
'ಘಟನೆ ನಡೆದ ಸಮಯದಲ್ಲಿ ನನ್ನ ಮಗ ರಾಮು ತನ್ನ ಡೈರಿ ಕೆಲಸದಲ್ಲಿ ತೊಡಗಿದ್ದ. ಯಾರು ಬೇಕಾದರೂ ಹಾಜರಾತಿ ಪುಸ್ತಕ ನೀಡಬಹುದು ಅಥವಾ ಮ್ಯಾನೇಜರ್ ಬಳಿ ಮಾತನಾಡಬಹುದು. ಅವನು ಅಲ್ಲಿಯೇ ಇದ್ದ ಎಂದು ಅವರು ಖಚಿತಪಡಿಸುತ್ತಾರೆ. ಬೆಳಿಗ್ಗೆ 7.30ಕ್ಕೆ ಕೆಲಸಕ್ಕೆ ಹೋದರೆ ಮಧ್ಯಾಹ್ನ 12.30ಕ್ಕೆ ವಾಪಸಾಗುತ್ತಾನೆ' ಎಂದು ಆಕೆ ಹೇಳಿದ್ದಾರೆ.

ಪೂರ್ವನಿಯೋಜಿತ ಸಂಚು
ನಾಲ್ವರು ಆರೋಪಿಗಳ ಪೈಕಿ ರಾಮು, ಸಂದೀಪ್ ಮತ್ತು ರವಿ ಮೂವರೂ ಸಂಬಂಧಿಕರಾಗಿದ್ದಾರೆ. ಅತ್ಯಾಚಾರಕ್ಕೆ ಬಲಿಯಾದ ಯುವತಿಯ ಮನೆಯಿಂದ 100 ಮೀಟರ್ ಸಮೀಪದಲ್ಲಿಯೇ ವಾಸಿಸುತ್ತಿದ್ದಾರೆ. ಈ ಘಟನೆಗೂ ಹಳೆಯ ಕೌಟುಂಬಿಕ ದ್ವೇಷಕ್ಕೂ ಯಾವುದೇ ಸಂಬಂಧವಿಲ್ಲ. ಸೆ. 14ರಂದು ನಡೆದ ಕೃತ್ಯ ಪೂರ್ವ ನಿಯೋಜಿತ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.

25 ಲಕ್ಷ ಪರಿಹಾರ
ಅತ್ಯಾಚಾರ ಪ್ರಕರಣದಲ್ಲಿ ಕಠಿಣ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಮಧ್ಯೆ ಸಂತ್ರಸ್ತೆಯ ತಂದೆ ಹಾಗೂ ಸಹೋದರ ಜತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಕಿರಿಯ ಸಹಾಯಕರ ಉದ್ಯೋಗ ನೀಡಲು ಸರ್ಕಾರ ಸೂಚನೆ ನೀಡಿದೆ. ಜತೆಗೆ ಸರ್ಕಾರದ ನಗರಾಭಿವೃದ್ಧಿ ಸಂಸ್ಥೆಯ ಮೂಲಕ ಹತ್ರಾಸ್ನಲ್ಲಿ ಮನೆ ಮಂಜೂರು ಮಾಡಲಾಗಿದೆ.

ಎನ್ಕೌಂಟರ್ ಕ್ರಮ?
ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅತ್ಯಾಚಾರ ಪ್ರಕರಣದ ತನಿಖೆಗೆ ಮೂವರು ಸದಸ್ಯರ ಎಸ್ಐಟಿ ತಂಡ ರಚಿಸಿದ್ದಾರೆ. ಏಳು ದಿನಗಳಲ್ಲಿ ಈ ತಂಡ ವರದಿ ನೀಡಬೇಕಿದೆ. ಅತ್ಯಾಚಾರ ಆರೋಪಿಗಳನ್ನು ಎನ್ಕೌಂಟರ್ ಮಾಡಲಾಗುತ್ತದೆ ಎಂಬ ಸುದ್ದಿ ಹರಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರ ಹೇಳಿಕೆ ಅದರ ಸುಳಿವು ನೀಡಿದೆ.












Click it and Unblock the Notifications