ಹತ್ರಾಸ್ ಅತ್ಯಾಚಾರ: ಸರ್ಕಾರ, ಪೊಲೀಸರಿಗೆ ಹೈಕೋರ್ಟ್ ಸಮನ್
ಲಕ್ನೋ, ಅಕ್ಟೋಬರ್ 1: ಹತ್ರಾಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಮತ್ತು ರಾಜ್ಯ ಪೊಲೀಸರಿಗೆ ಅಲಹಾಬಾದ್ ಹೈಕೋರ್ಟ್ ಸಮನ್ ನೀಡಿದೆ. ಘಟನೆ ದೇಶದಾದ್ಯಂತ ಕಿಡಿ ಹೊಚ್ಚಿಸಿರುವುದನ್ನು ಗಮನಿಸಿರುವ ಹೈಕೋರ್ಟ್, ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಅ. 12ರಂದು ತಮ್ಮ ಮುಂದೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅತ್ಯಾಚಾರ ಸಂತ್ರಸ್ತೆಯ ಮೃತದೇಹವನ್ನು ಮಧ್ಯರಾತ್ರಿ ಅಂತ್ಯ ಸಂಸ್ಕಾರಕ್ಕೆ ಒಳಪಡಿಸಿರುವುದು 'ನಮ್ಮ ಆತ್ಮಸಾಕ್ಷಿಗೆ ಆಘಾತ ಉಂಟುಮಾಡಿದೆ' ಎಂದು ಹೈಕೋರ್ಟ್ ಹೇಳಿದೆ. ಯುವತಿಯ ಅತ್ಯಾಚಾರ ಮತ್ತು ತರಾತುರಿಯ ಅಂತ್ಯಸಂಸ್ಕಾರದ ಘಟನೆಯ ಕುರಿತು 11 ಪುಟಗಳ ಆದೇಶ ನೀಡಿರುವ ಕೋರ್ಟ್, ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಿರುವುದಾಗಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಜಸ್ಪ್ರೀತ್ ಸಿಂಗ್ ಮತ್ತು ರಾಜನ್ ರಾಯ್ ಅವರು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ದಲಿತ ಯುವತಿಯ ಕುಟುಂಬದ ಸದಸ್ಯರಿಗೆ ಕೂಡ ಸಮನ್ ನೀಡಿದೆ. ಕುಟುಂಬದ ಸದಸ್ಯರ ಮೇಲೆ ಯಾವುದೇ ರೀತಿಯಲ್ಲಿ ಮತ್ತು ಯಾರಿಂದಲೂ ದಬ್ಬಾಳಿಕೆ, ಒತ್ತಡ ಅಥವಾ ಪ್ರಭಾವ ಬೀರುವ ಕೆಲಸ ನಡೆಯದಂತೆ ಸರ್ಕಾರ ಖಾತರಿಪಡಿಸಬೇಕು ಎಂದು ಸೂಚನೆ ನೀಡಿದೆ.

ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳದೆ ಮೃತಪಟ್ಟ ಯುವತಿಯ ಅಂತ್ಯಸಂಸ್ಕಾರವನ್ನು ಕುಟುಂಬದವ ಅನುಮತಿ ಪಡೆಯದೆಯೇ ಮಧ್ಯರಾತ್ರಿ ನಡೆಸಿದ್ದರ ಬಗ್ಗೆ ವಿವಿಧ ಮಾಧ್ಯಮ ವರದಿಯನ್ನು ಉಲ್ಲೇಖಿಸಿದ ನ್ಯಾಯಾಲಯ, ಮೃತ ವ್ಯಕ್ತಿಗೆ ಸರ್ಕಾರ ಸೂಕ್ತ ಗೌರವ ನೀಡಬೇಕು ಎಂದು ಹೇಳಿತು.












Click it and Unblock the Notifications