ಜ್ಞಾನವಾಪಿ ಮಸೀದಿ ವಿವಾದ: ವೀಡಿಯೋಗ್ರಫಿ ಸಮೀಕ್ಷೆಗೆ ಮುಸ್ಲಿಮರು ವಿರೋಧ, ಪ್ರತಿಭಟನೆ
ವಾರಣಾಸಿ ಮೇ 7: ವಾರಣಾಸಿಯ ಕಾಶಿ ವಿಶ್ವನಾಥ್-ಜ್ಞಾನವಾಪಿ ಸಂಕೀರ್ಣದಲ್ಲಿರುವ ಮಾ ಶೃಂಗಾರ್ ಗೌರಿ ಸ್ಥಳದ ವಿಡಿಯೊಗ್ರಫಿ ಸಮೀಕ್ಷೆ ಮತ್ತು ಪರಿಶೀಲನೆಯನ್ನು ವಿರೋಧಿಸಿ ಶುಕ್ರವಾರ ನೂರಾರು ಮುಸ್ಲಿಮರು ಪ್ರತಿಭಟನೆ ನಡೆಸಿದ ನಂತರ ವಾರಣಾಸಿಯಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ನಿನ್ನೆ ಮಧ್ಯಾಹ್ನದ ವೇಳೆಗೆ ಸ್ಥಳಕ್ಕಾಗಮಿಸಿದ ನ್ಯಾಯಾಲಯದ ನಿಯೋಜಿತ ತಂಡ ಸಮೀಕ್ಷೆಗಾಗಿ ಮುಸಲ್ಮಾನರ ಪ್ರತಿಭಟನೆ ಎದುರಿಸಬೇಕಾಯಿತು ಎಂದು ಮೂಲಗಳು ತಿಳಿಸಿವೆ. ಆದರೂ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಸಮೀಕ್ಷಾ ತಂಡ ತನ್ನ ಕೆಲಸವನ್ನು ಆರಂಭಿಸಿತು. ಇಂದು ಸಮೀಕ್ಷೆ ಮುಕ್ತಾಯವಾಗಲಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಆಡಳಿತ ಕೂಡ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಪ್ರಮುಖವಾಗಿ, ಮಸೀದಿಯ ಆಡಳಿತ ಅಂಜುಮನ್ ಇಂತೇಜಾಮಿಯಾ ಮಸೀದಿ, ಸ್ಥಳೀಯ ನ್ಯಾಯಾಲಯದ ಆದೇಶವನ್ನು ವಿರೋಧಿಸುವುದಾಗಿ ಮತ್ತು ಯಾರನ್ನೂ ಮಸೀದಿಗೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಘೋಷಿಸಿತು. "ವೀಡಿಯೋಗ್ರಫಿ ಮತ್ತು ಸಮೀಕ್ಷೆಗಾಗಿ ನಾವು ಯಾರಿಗೂ ಮಸೀದಿಗೆ ಪ್ರವೇಶಿಸಲು ಬಿಡುವುದಿಲ್ಲ. ನ್ಯಾಯಾಲಯದ ಈ ನಿರ್ಧಾರವನ್ನು ಜ್ಞಾನವಾಪಿ ಮಸೀದಿಯ ಆಡಳಿತ ಸಮಿತಿಯು ವಿರೋಧಿಸುತ್ತದೆ. ಈ ನಿರ್ಧಾರವನ್ನು ಸಾಂವಿಧಾನಿಕವಾಗಿ ವಿರೋಧಿಸಲಾಗುವುದು" ಎಂದು ಅಂಜುಮನ್ ಇಂತೇಜಾಮಿಯಾ ಮಸೀದಿ ವ್ಯವಸ್ಥಾಪಕ ಸಮಿತಿಯ ಜಂಟಿ ಕಾರ್ಯದರ್ಶಿ ಎಸ್.ಎಂ.ಯಾಸಿನ್ ಹೇಳಿದ್ದರು. ಜ್ಞಾನವಾಪಿ ಮಸೀದಿಯು ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದೊಂದಿಗೆ ಗಡಿ ಗೋಡೆಯನ್ನು ಹಂಚಿಕೊಂಡಿದೆ.
ಮಾ ಶೃಂಗಾರ್ ಗೌರಿ ಸ್ಥಳದಲ್ಲಿ ದೈನಂದಿನ ದರ್ಶನ ಮತ್ತು ಪೂಜೆಗೆ ಅನುಮತಿ ಕೋರಿ ಆಗಸ್ಟ್ 2021 ರಲ್ಲಿ ವಾರಣಾಸಿಯ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಲಾಯಿತು. ವಾರಣಾಸಿಯ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯವು ಈ ವರ್ಷ ಏಪ್ರಿಲ್ 26 ರಂದು ಈದ್ ನಂತರ ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣ ಮತ್ತು ಇತರ ಸ್ಥಳಗಳಲ್ಲಿ ದೇವಸ್ಥಾನದ ವಕೀಲ ಕಮಿಷನರ್ ಮೂಲಕ ವೀಡಿಯೊಗ್ರಫಿಗೆ ಆದೇಶಿಸಿತ್ತು.

ಸರ್ವೆ ಮತ್ತು ಪರಿಶೀಲನೆ ನಡೆಸಲು ವಕೀಲ ಅಜಯ್ ಕುಮಾರ್ ಅವರನ್ನು ನ್ಯಾಯಾಲಯ ನೇಮಿಸಿತ್ತು. ಮೇ 10ರಂದು ಮುಂದಿನ ವಿಚಾರಣೆಗೆ ಮುನ್ನ ವರದಿ ಸಲ್ಲಿಸುವಂತೆ ವಕೀಲ ಕಮಿಷನರ್ಗೆ ನ್ಯಾಯಾಲಯ ಸೂಚಿಸಿತ್ತು.
ನ್ಯಾಯಾಲಯದ ನಿರ್ದೇಶನದ ಪ್ರಕಾರ, ಮೇ 6 ಮತ್ತು 7 ರಂದು ಮಸೀದಿ ಆವರಣದೊಳಗೆ ವೀಡಿಯೊಗ್ರಫಿ ಮತ್ತು ಸಮೀಕ್ಷೆ ನಡೆಸಲಾಗುವುದು. ವಕೀಲ ಕಮಿಷನರ್ ಮತ್ತು ಕಕ್ಷಿದಾರರಲ್ಲದೆ, ಒಬ್ಬ ಸಹಚರರು ವಿಚಾರಣೆಯ ಸಮಯದಲ್ಲಿ ಹಾಜರಾಗಬಹುದು ಎಂದು ನ್ಯಾಯಾಲಯ ಹೇಳಿದೆ.

ಇದೇ ವೇಳೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ), ಜ್ಞಾನವಾಪಿ ಮಸೀದಿ ವ್ಯವಸ್ಥಾಪನಾ ಸಮಿತಿಯು ತನ್ನ ಆವರಣದಲ್ಲಿ ಯಾವುದೇ ವೀಡಿಯೊಗ್ರಫಿ ಮತ್ತು ಸಮೀಕ್ಷೆಗೆ ಅವಕಾಶ ನೀಡದಿರುವ ನಿರ್ಧಾರವನ್ನು ಟೀಕಿಸಿದೆ. ಸಮಿತಿಯು ಏನು ಮರೆಮಾಚುತ್ತಿದೆ ಎಂದು ಅದು ಕೇಳಿದೆ.
"ಇದು ನ್ಯಾಯಾಲಯದ ನಿಂದನೆಯಾಗಿದೆ. ನ್ಯಾಯಾಲಯದ ಆದೇಶವನ್ನು ಅನುಸರಿಸಲು ಅವರು ಹೇಗೆ ನಿರಾಕರಿಸುತ್ತಾರೆ ಮತ್ತು ನ್ಯಾಯಾಲಯದಿಂದ ನೇಮಿಸಲ್ಪಟ್ಟ ಆಯುಕ್ತರಿಗೆ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ವೀಡಿಯೊಗ್ರಫಿ ಮತ್ತು ಸಮೀಕ್ಷೆ ನಡೆಸಲು (ನಿರಾಕರಿಸಲು) ಹೇಗೆ ಅವಕಾಶ ನೀಡುವುದಿಲ್ಲ. ನೀವು (ಮಸೀದಿ ಆಡಳಿತ ಸಮಿತಿ) ಏನು ಬಯಸುತ್ತೀರಿ? ಇದು (ಜ್ಞಾನವಾಪಿ ಮಸೀದಿ) ನ್ಯಾಯಾಲಯಕ್ಕೆ ನಿರ್ಬಂಧಿತ ಪ್ರದೇಶವಲ್ಲ" ಎಂದು ವಿಎಚ್ಪಿಯ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ.












Click it and Unblock the Notifications