ಗೋರಖನಾಥ ದೇಗುಲದ ಮೇಲೆ ದಾಳಿ ಆರೋಪಿಗೆ ಐಸಿಸ್ ಉಗ್ರರ ನಂಟು: ಯುಪಿ ಪೊಲೀಸ್ ಅಧಿಕಾರಿ
ಲಕ್ನೋ, ಮೇ 1 : ಗೋರಖನಾಥ ದೇವಾಲಯದ ದಾಳಿ ಪ್ರಕರಣದ ಪ್ರಮುಖ ಆರೋಪಿ ಅಹ್ಮದ್ ಮುರ್ತಾಜಾ ಅಬ್ಬಾಸಿ ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಐಸಿಸ್) ನ ಹೋರಾಟಗಾರರು ಮತ್ತು ಅವರ ಸಂಪರ್ಕ ಹೊಂದಿರುವವರ ಸಂಪರ್ಕ ಹೊಂದಿದ್ದ ಎಂದು ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಏಪ್ರಿಲ್ 3 ರಂದು ಪ್ರಕರಣ ಆರೋಪಿ ಅಹ್ಮದ್ ಮುರ್ತಾಜಾ ಅಬ್ಬಾಸಿ ಗೋರಖನಾಥ ದೇಗುಲಕ್ಕೆ ನುಗ್ಗಿದ್ದಲ್ಲದೆ ದೇವಸ್ಥಾನದಲ್ಲಿದ್ದ ಕರ್ತವ್ಯ ನಿರತ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದ್ದ. ಅಲ್ಲದೆ ಪೊಲೀಸರ ಬಳಿ ಇದ್ದ ರೈಫೆಲ್ನ ಕಸಿದುಕೊಂಡ ದೇವಸ್ತಾನದಲ್ಲಿ ದಾಂಧಲೆ ಸೃಷ್ಟಿಸಲು ಮುಂದಾಗಿದ್ದ. ಈ ವೇಳೆ ಪೊಲೀಸರು ಹರಸಾಹಸ ಪಟ್ಟು ಆರೋಪಿಯ ಕೈಯಲ್ಲಿದ್ದ ಮಾರಕಾಸ್ತ್ರವನ್ನ ವಶಕ್ಕೆ ಪಡೆದುಕೊಂಡು ಆತನನ್ನು ಬಂಧಿಸಿದ್ದರು.
ಸದ್ಯ ಆರೋಪಿಯನ್ನ ಬಂಧಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಆರೋಪಿ ಬಳಸುತ್ತಿದ್ದ ಜಿಮೇಲ್, ಟ್ವಿಟರ್, ಫೇಸ್ಬುಕ್ ಮತ್ತು ಇ ವ್ಯಾಲೆಟ್ಗಳಂತಹ ವಿವಿಧ ಸಾಮಾಜಿಕ ಜಾಲತಣವನ್ನೇಲ್ಲಾ ಪೊಲೀಸರು ಜಾಲಾಡಿ ಡೇಟಾ ವಿಶ್ಲೇಷಣೆ ನಡೆಸಲಾಯಿತು ಈ ಸಂದರ್ಭದಲ್ಲಿ ಆರೋಪಿಗೆ ಐಸಿಸ್ ಉಗ್ರರ ನಂಟಿದೆ ಎಂಬುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದಿಷ್ಟೇ ಅಲ್ಲದೆ ಆರೋಪಿಯು ತನ್ನ ಬ್ಯಾಂಕ್ ಖಾತೆಗಳ ಮೂಲಕ, ಯೂರೋಪ್ ಮತ್ತು ಅಮೆರಿಕದ ವಿವಿಧ ದೇಶಗಳಲ್ಲಿ ಐಸಿಸ್ ಉಗ್ರರಿಗೆ ಸಂಬಂಧಿಸಿದ ಸಂಸ್ಥೆಗಳ ಮೂಲಕ ಐಸಿಸ್ ಭಯೋತ್ಪಾದಕ ಚಟುವಟಿಕೆಗಳನ್ನ ಬೆಂಬಲಿಸಲು ಸುಮಾರು 8.5 ಲಕ್ಷ ಹಣ ಹಾಗೂ ಭಯೋತ್ಪಾದನೆಗೆ ಬೇಕಾದ AK47, M4 ಕಾರ್ಬೈನ್ ಶಸ್ತ್ರಾಸ್ತ್ರಗಳನ್ನು ಸಹ ಕಳುಹಿಸಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಈ ಹಿಂದೆ ಐಸಿಸ್ ಪ್ರಚಾರ ಕಾರ್ಯಕರ್ತ ಮೆಹದಿ ಮಸ್ರೂರ್ ಬಿಸ್ವಾಸ್ನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ 2014 ರಲ್ಲಿ ಬೆಂಗಳೂರು ಪೊಲೀಸರು ಆರೋಪಿ ಅಬ್ಬಾಸಿಯನ್ನ ಬಂಧಿಸಿದ್ದರು.
ಆರೋಪಿಗೆ ಲಕ್ನೋದ ಎಟಿಎಸ್ ನ್ಯಾಯಲಯವು ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು. ಸದ್ಯ ವಿಚಾರಣೆ ಮುಗಿದ್ದಿದ್ದು, ಆರೋಪಿ ಅಬ್ಬಾಸಿಯನ್ನು ಲಕ್ನೋಗೆ ಸ್ಥಳಾಂತರ ಮಾಡಲಾಗಿದೆ.