ಸಾಲ ವಾಪಸ್ ನೀಡದ ಕಾರಣಕ್ಕೆ ಹೆಣ್ಣುಮಗುವನ್ನು ಕೊಂದ ಕಿರಾತಕರು
ಲಖನೌ (ಉತ್ತರಪ್ರದೇಶ), ಜೂನ್ 6: ಕ್ರೌರ್ಯದ ಪರಾಕಾಷ್ಠೆ ಎಂಬಂಥ ಘಟನೆಯೊಂದು ಉತ್ತರಪ್ರದೇಶದ ತಪ್ಪಲ್ ನಲ್ಲಿ ವರದಿ ಆಗಿದೆ. ಪೋಷಕರು ಹತ್ತು ಸಾವಿರ ರುಪಾಯಿ ಸಾಲ ಮರುಪಾವತಿಸಲಿಲ್ಲ ಎಂಬ ಕಾರಣಕ್ಕೆ ಅವರ ಎರಡೂವರೆ ವರ್ಷದ ಹೆಣ್ಣುಮಗುವಿನ ಪ್ರಾಣ ತೆಗೆದಿದ್ದು, ಕಣ್ಣು ಕಿತ್ತು ಬಂದಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆ ಬಾಲಕಿ ನಾಪತ್ತೆಯಾದ ಮೂರು ದಿನಗಳ ನಂತರ, ಜೂನ್ ಎರಡನೇ ತಾರೀಕು ದೇಹವು ಮನೆಯ ಬಳಿಯ ಕಸ ಹಾಕುವ ಸ್ಥಳದಲ್ಲಿ ದೊರೆತಿತ್ತು. ತುಂಡುತುಂಡಾಗಿದ್ದ ದೇಹವನ್ನು ಬೀದಿ ನಾಯಿಗಳು ಎಳೆದಾಡುವಾಗ ಮನುಷ್ಯ ದೇಹದ ಭಾಗಗಳಂತೆ ಕಂಡುಬಂದಾಗ ಜಾಗೃತರಾಗಿದ್ದಾರೆ. ಅರೋಪಿಗಳನ್ನು ಬಾಲಕಿಯ ನೆರೆಮನೆ ವಾಸಿಗಳೇ ಆದ ಜಾಹೀದ್ ಮತ್ತು ಅಸ್ಲಾಂ ಎಂದು ಗುರುತಿಸಲಾಗಿದೆ.
ಹಣಕಾಸು ವಿಚಾರಕ್ಕೆ ಸಂಬಂಧಿಸಿದ ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ತನಿಖೆ ವೇಳೆ ಗೊತ್ತಾಗಿದೆ. ಹಣಕಾಸು ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಕೊಲೆಯ ತನಕ ಹೋಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೇ ಮೂವತ್ತೊಂದನೇ ತಾರೀಕು ಅಪಹರಣದ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಇದು ವೈಯಕ್ತಿಕ ದ್ವೇಷದ ಕಾರಣಕ್ಕೆ ಮಾಡಿದ ಕೊಲೆ. ಅತ್ಯಾಚಾರ ನಡೆದಿಲ್ಲ. ಬಾಲಕಿಯ ಕೊಲೆ ಮಾಡಲಾಗಿದ್ದು, ಕಣ್ಣು ಕಿತ್ತುಬಂದಿತ್ತು. ಆರೋಪಿಗಳು ಈಗ ಜೈಲಿನಲ್ಲಿ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications