ಲಖಿಂಪುರ ಖೇರಿ ಕೇಸ್: ಆಶಿಶ್ ಗುಂಡು ಹಾರಿಸಿದ್ದು ನಿಜ- ವಿಧಿವಿಜ್ಞಾನ ವರದಿ
ನವದೆಹಲಿ, ನವೆಂಬರ್ 10: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ರೈಫಲ್ನ ವಿಧಿವಿಜ್ಞಾನ ಪರೀಕ್ಷೆಯ ವರದಿ ಹೊರಬಂದಿದ್ದು ರೈಫಲ್ನಿಂದ ಗುಂಡು ಹಾರಿಸಿರುವುದು ದೃಢಪಟ್ಟಿದೆ ಎಂದು ಲಖಿಂಪುರ ಖೇರಿ ತನಿಖೆಗೆ ಸಂಬಂಧಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಸಂಜೆ ತಿಳಿಸಿದ್ದಾರೆ. ಅದಾಗ್ಯೂ ಗುಂಡನ್ನು ಯಾವಾಗ ಹಾರಿಸಲಾಯಿತು? ಹಿಂಸಾಚಾರ ಘಟನೆ ನಡೆದಾಗಲಾ? ಅಥವಾ ಬೇರೊಂದು ದಿನವಾ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದರು.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತನ ಹತ್ಯೆಯ ಆರೋಪ ಎದುರಿಸುತ್ತಿರುವ 13 ಆರೋಪಿಗಳಲ್ಲಿ ಆಶಿಶ್ ಮಿಶ್ರಾ ಅಲಿಯಾಸ್ ಮೋನು ಒಬ್ಬ.
ಕೇಂದ್ರ ಸಚಿವ ಅಜಯ್ ಮಿಶ್ರಾ ಒಡೆತನದ ಮಹೀಂದ್ರ ಥಾರ್ ಎಸ್ಯುವಿ ವಾಹನ ಪ್ರತಿಭಟನಾನಿರತ ರೈತರ ಮೇಲೆ ವೇಗವಾಗಿ ಹರಿದು ನಾಲ್ವರು ರೈತರು ಸೇರಿದಂತೆ ಓರ್ವ ಪತ್ರಕರ್ತರು ಸಾವನ್ನಪ್ಪಿದ್ದಾರೆ. ಇದರಿಂದ ಹಿಂಸಾಚಾರ ಭುಗಿಲೆದ್ದು ಮೂವರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಈ ವೇಳೆ ಆಶಿಶ್ ಮಿಶ್ರಾ ವಾಹನ ಚಲಾಯಿಸುತ್ತಿದ್ದರು ಎಂದು ರೈತರು ಆರೋಪಿಸಿದ್ದಾರೆ. ಜೊತೆಗೆ ಈ ವೇಳೆ ಗುಂಡು ಹಾರಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದಾಗ್ಯೂ, ಶವಪರೀಕ್ಷೆಗಳು ಐವರಲ್ಲಿ ಯಾರಿಗೂ ಅಥವಾ ಆ ದಿನದ ನಂತರದ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಇತರ ಮೂವರಿಗೆ ಗುಂಡೇಟಿನಿಂದ ಗಾಯವಾಗಿಲ್ಲ ಎಂದು ದೃಢಪಡಿಸಿದೆ.

ಘಟನೆಯ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ವಶಪಡಿಸಿಕೊಂಡಿರುವ ಜೈಲಿನಲ್ಲಿರುವ ಆರೋಪಿಗಳಿಗೆ ಸೇರಿದ ನಾಲ್ಕು ಶಸ್ತ್ರಾಸ್ತ್ರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಪರಿಶೀಲಿಸಿದೆ. ಇದರಲ್ಲಿ ಆಶಿಶ್, ಮಾಜಿ ಕೇಂದ್ರ ಸಚಿವ ಅಖಿಲೇಶ್ ದಾಸ್ ಅವರ ಸೋದರಳಿಯ ಅಂಕಿತ್ ದಾಸ್ ಅವರಿಗೆ ಸೇರಿದ ಪಿಸ್ತೂಲ್ ಮತ್ತು ದಾಸ್ ಅವರ ಅಂಗರಕ್ಷಕ ಲತೀಫ್ ಹೊತ್ತೊಯ್ದ ರಿಪೀಟರ್ ಗನ್ ಸೇರಿದೆ. ದಾಸ್ ಅವರ ಸಹವರ್ತಿ ಸತ್ಯ ಪ್ರಕಾಶ್ ಒಡೆತನದ ರಿವಾಲ್ವರ್ ನಾಲ್ಕನೇ ಆಯುಧದ ಫೊರೆನ್ಸಿಕ್ ಪರೀಕ್ಷೆಯ ವರದಿಯನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
"ಆಶಿಶ್ನ ರೈಫಲ್ ಅನ್ನು ಆತನ ಕುಟುಂಬದವರು ಎಸ್ಐಟಿಗೆ ಹಸ್ತಾಂತರಿಸಿದ್ದಾರೆ. ವಶಪಡಿಸಿಕೊಂಡ ಎಲ್ಲಾ ನಾಲ್ಕು ಶಸ್ತ್ರಾಸ್ತ್ರಗಳನ್ನು ಬ್ಯಾಲಿಸ್ಟಿಕ್ ಪರೀಕ್ಷೆಗಾಗಿ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಆಶಿಶ್, ಅಂಕಿತ್ ಮತ್ತು ಲತೀಫ್ ಎಂಬುವವರಿಗೆ ಸೇರಿದ ಮೂರು ಶಸ್ತ್ರಾಸ್ತ್ರಗಳಿಂದ ಗುಂಡುಗಳನ್ನು ಹಾರಿಸಲಾಗಿದೆ ಎಂಬ ವರದಿಯನ್ನು ನಾವು ಈಗ ಸ್ವೀಕರಿಸಿದ್ದೇವೆ. ವರದಿಯನ್ನು ಸಾಕ್ಷ್ಯವಾಗಿ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಎಫ್ಎಸ್ಎಲ್ ವರದಿಯಲ್ಲಿ ಬುಲೆಟ್ಗಳು ಯಾವಾಗ ಹಾರಿದವು ಎಂದು ಹೇಳದಿದ್ದರೂ, ಆರೋಪಿಗಳು ಅಕ್ಟೋಬರ್ 3 ರಂದು ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೋ ಇಲ್ವೋ ಎನ್ನುವ ಪುರಾವೆಗಳನ್ನು ಒದಗಿಸಬೇಕು ಎಂದು ಅಧಿಕಾರಿ ಹೇಳಿದರು.
ಆಯುಧದ ಫೊರೆನ್ಸಿಕ್ ಪರೀಕ್ಷೆಯು ಗುಂಡು ಹಾರಿಸಿದ ನಂತರವೇ ಗನ್ ಪೌಡರ್ ಇರುವಿಕೆಯನ್ನು ಖಚಿತಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ, ಘಟನೆ ನಡೆದ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿದೆ ಎಂಬ ರೈತರ ಆರೋಪವನ್ನು ವರದಿ ಬಲಗೊಳಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಫ್ಐಆರ್ನಲ್ಲಿ, ಆಶಿಶ್ ಮಿಶ್ರಾ ಅವರು ಮೂರು ನಾಲ್ಕು ಚಕ್ರಗಳ ವಾಹನಗಳ ಬೆಂಗಾವಲು ಪಡೆಯಲ್ಲಿ ಸ್ಥಳಕ್ಕೆ ಬಂದಿದ್ದಾರೆ ಎಂದು ದೂರುದಾರ ಜಗಜಿತ್ ಸಿಂಗ್ ಆರೋಪಿಸಿದ್ದಾರೆ. ಟಿಕೋನಿಯಾದಲ್ಲಿ, ಅತಿವೇಗದಲ್ಲಿ ಚಲಿಸುತ್ತಿದ್ದ ವಾಹನಗಳು ಪ್ರತಿಭಟನೆಯಿಂದ ಹಿಂದಿರುಗುತ್ತಿದ್ದ ರೈತರ ಗುಂಪಿನ ಮೇಲೆ ನುಗ್ಗಿದವು. ಥಾರ್ನಲ್ಲಿ ಎಡಭಾಗದಲ್ಲಿ ಕುಳಿತಿದ್ದ ಆಶಿಶ್, ಸಂತ್ರಸ್ತರ ಮೇಲೆ ವಾಹನ ಓಡುತ್ತಿದ್ದಂತೆ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಅಕ್ಟೋಬರ್ 10 ರಂದು ಬಂಧನಕ್ಕೊಳಗಾಗಿದ್ದ ಆಶಿಶ್ ಆರೋಪವನ್ನು ನಿರಾಕರಿಸಿದ್ದಾರೆ. ಘಟನೆಯ ಸಮಯದಲ್ಲಿ ಅವರು ಸುಮಾರು 2 ಕಿಮೀ ದೂರದಲ್ಲಿರುವ ತಮ್ಮ ಪೂರ್ವಜರ ಗ್ರಾಮ ಬನ್ವೀರ್ಪುರದಲ್ಲಿ ಕುಸ್ತಿ ಕಾರ್ಯಕ್ರಮದಲ್ಲಿದ್ದರು ಎಂದು ಅವರು ಹೇಳಿದ್ದಾರೆ. ಸದ್ಯ ಆಶಿಶ್ ಮತ್ತು ಆತನ ಸಹ ಆರೋಪಿಗಳನ್ನು ಲಖಿಂಪುರ ಖೇರಿಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ.
ಘಟನೆಯ ನಂತರ ಕೆರಳಿದ ಜನಸಮೂಹವು ಸಚಿವರ ಥಾರ್ ಮತ್ತು ಅಂಕಿತ್ ದಾಸ್ ಒಡೆತನದ ಟೊಯೊಟಾ ಫಾರ್ಚೂನರ್ಗೆ ಬೆಂಕಿ ಹಚ್ಚಿತು. ಥಾರ್ ಚಾಲಕ ಮತ್ತು ಇಬ್ಬರು ಸ್ಥಳೀಯ ಬಿಜೆಪಿ ಮುಖಂಡರನ್ನು ಹೊಡೆದು ಕೊಂದಿದೆ. ಬೆಂಗಾವಲು ಪಡೆಯಲ್ಲಿ ಮೂರನೇ ಎಸ್ಯುವಿ ಮಹೀಂದ್ರಾ ಸ್ಕಾರ್ಪಿಯೋ ಚಾಲಕ ತನ್ನ ವಾಹನದೊಂದಿಗೆ ಪರಾರಿಯಾಗಿದ್ದಾನೆ. ಇನ್ನೂ ಥಾರ್ ಚಾಲಕ ಹರಿ ಓಂ ಮಿಶ್ರಾ ಮತ್ತು ಇಬ್ಬರು ಬಿಜೆಪಿ ನಾಯಕರಾದ ಶುಭಂ ಮಿಶ್ರಾ ಮತ್ತು ಶ್ಯಾಮ್ ಸುಂದರ್ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರನ್ನು ಎಸ್ಐಟಿ ಬಂಧಿಸಿದೆ.
ಲಖಿಂಪುರ ಖೇರಿಯ ನ್ಯಾಯಾಲಯವು ಮಂಗಳವಾರ ಬಂಧಿತ ನಾಲ್ವರಲ್ಲಿ ರಂಜಿತ್ ಸಿಂಗ್ ಮತ್ತು ಅವತಾರ್ ಸಿಂಗ್ ಅವರನ್ನು ಬುಧವಾರದಿಂದ ಮೂರು ದಿನಗಳ ಪೊಲೀಸ್ ಕಸ್ಟಡಿಗೆ (ಪಿಸಿಆರ್) ಕಳುಹಿಸಿದೆ. ಆರೋಪಿಗಳನ್ನು ಪ್ರಶ್ನಿಸಲು ಮತ್ತು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಸ್ಥಳಕ್ಕೆ ಕರೆದೊಯ್ಯಲು ಎಸ್ಐಟಿ ರಿಮಾಂಡ್ ಕೇಳಿತ್ತು. ಪೊಲೀಸರು ಪ್ರಸಾರ ಮಾಡಿದ ಚಿತ್ರಗಳಿಂದ ರಂಜಿತ್ ಮತ್ತು ಅವತಾರ್ ಅವರನ್ನು ಗುರುತಿಸಲಾಗಿದ್ದು, ಅವರು ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ ಜನರ ಹತ್ತಿರ ನಿಂತಿದ್ದಾರೆ. ರಂಜಿತ್, ಅವತಾರ್ ಅವರೊಂದಿಗೆ ಬಂಧಿತರಾದ ಇತರ ಇಬ್ಬರು ವಿಚಿತ್ರಾ ಸಿಂಗ್ ಮತ್ತು ಗುರ್ವಿಂದರ್ ಸಿಂಗ್ ಎಲ್ಲರೂ ಲಖಿಂಪುರ ಖೇರಿ ನಿವಾಸಿಗಳಾಗಿದ್ದಾರೆ.












Click it and Unblock the Notifications