ವಿದ್ಯಾರ್ಥಿನಿ ನಾಪತ್ತೆ: ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಬಿಜೆಪಿ ನಾಯಕನ ವಿರುದ್ಧ ಎಫ್ಐಆರ್
ಲಖನೌ, ಆಗಸ್ಟ್ 28: ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಾನೂನು ವಿದ್ಯಾರ್ಥಿನಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ.
ಎಸ್ಎಸ್ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿರುವ ಯುವತಿ, ಕಾಲೇಜಿನ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ಅವರು ಅನೇಕ ಯುವತಿಯರ ಬದುಕು ಹಾಳುಮಾಡಿದ್ದಾರೆ ಎಂದು ಆರೋಪಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಕಳೆದ ವಾರ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದ ಯುವತಿ, ಸ್ವಾಮಿ ಚಿನ್ಮಯಾನಂದ ಅವರ ವಿರುದ್ಧ ತಮ್ಮ ಬಳಿ ಕೆಲವು ಪುರಾವೆಗಳಿವೆ. ಈ ಕಾರಣಕ್ಕಾಗಿಯೇ ಅವರು ತನ್ನನ್ನು ಹಾಗೂ ತನ್ನ ಕುಟುಂಬವನ್ನು ನಾಶಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.
ಆಗಸ್ಟ್ 23ರಂದು ವಿಡಿಯೋ ಹಂಚಿಕೊಂಡಿದ್ದ ಯುವತಿ, ತಮಗೆ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ ಮಾಡಿದ್ದರು. ಆದರೆ, ಮರುದಿನದಿಂದಲೇ ಯುವತಿ ನಾಪತ್ತೆಯಾಗಿದ್ದಾರೆ.

ಯುವತಿಯರ ಬಾಳು ಹಾಳುಮಾಡಿದ್ದಾರೆ
'ನಾನು ಷಹಜಾನ್ಪುರದವಳು. ಎಸ್ಎಸ್ ಕಾಲೇಜಿನಲ್ಲಿ ಎಲ್ಎಲ್ಎಂ ಓದುತ್ತಿದ್ದೇನೆ. ಅನೇಕ ಯುವತಿಯರ ಬದುಕನ್ನು ಹಾಳುಮಾಡಿದ ಸಮಾಜದಲ್ಲಿ ಸಂತನಂತೆ ಮುಖವಾಡ ತೊಟ್ಟಿರುವರೊಬ್ಬರು ನನ್ನ ಬದುಕಿಗೂ ಬೆದರಿಕೆ ಒಡ್ಡುತ್ತಿದ್ದಾರೆ. ಅವರ ವಿರುದ್ಧ ನನ್ನ ಬಳಿ ಎಲ್ಲ ಸಾಕ್ಷ್ಯಗಳಿವೆ. ನನಗೆ ಮೋದಿಜಿ ಮತ್ತು ಯೋಗಿಜಿ ಸಹಾಯ ಮಾಡುವಂತೆ ಕೋರುತ್ತೇನೆ. ಅವರು ನನ್ನ ಕುಟುಂಬದವರನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ' ಎಂದು ಅಳಲು ತೋಡಿಕೊಂಡಿದ್ದಾರೆ.

ನ್ಯಾಯ ಒದಗಿಸಿ ಮೋದಿಜಿ
'ನಾನು ಯಾವ ರೀತಿ ಹೋಗುತ್ತಿದ್ದೇನೆ ಎನ್ನುವುದು ನನಗೆ ಮಾತ್ರ ತಿಳಿದಿದೆ. ಮೋದಿಜಿ ದಯವಿಟ್ಟು ಸಹಾಯ ಮಾಡಿ. ಅವರೊಬ್ಬ ಸನ್ಯಾಸಿ ಮತ್ತು ಪೊಲೀಸರು, ಜಿಲ್ಲಾ ನ್ಯಾಯಾಧೀಶರು ಹಾಗೂ ಎಲ್ಲರೂ ತಮ್ಮ ಬಳಿಯೇ ಇದ್ದು, ತಮ್ಮನ್ನು ಯಾರಿಗೂ ಏನನ್ನೂ ಮಾಡಲೂ ಸಾಧ್ಯವಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ. ನನಗೆ ನ್ಯಾಯ ಒದಗಿಸುವಂತೆ ಕೋರುತ್ತೇನೆ' ಎಂದು ಆಕೆ ಹೇಳಿದ್ದಾರೆ.

ಹಾಸ್ಟೆಲ್ನಿಂದ ಯುವತಿ ನಾಪತ್ತೆ
ಈ ವಿಡಿಯೋವನ್ನು ಆಕೆ ಹಾಸ್ಟೆಲ್ನಿಂದ ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದರು. ಇದು ತಮ್ಮ ಸಂಬಂಧಿಕರ ಮೂಲಕ ತಿಳಿಯಿತು. ಬಳಿಕವೇ ಇಡೀ ಘಟನೆಯ ಕುರಿತು ಗೊತ್ತಾಗಿದ್ದು. ಯುವತಿಯ ತಾಯಿ ಹಾಸ್ಟೆಲ್ಗೆ ಹೋಗಿ ವಿಚಾರಿಸಿದಾಗ ಆಕೆ ನಾಪತ್ತೆಯಾಗಿರುವುದು ತಿಳಿದುಬಂತು. ಆಕೆಯ ಎರಡೂ ಫೋನ್ಗಳು ಸ್ವಿಚ್ ಆಫ್ ಆಗಿವೆ ಎಂದು ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಬೆಂಬಲಿಗರಿಂದ ಪ್ರತಿ ದೂರು
ಯುವತಿಯ ತಂದೆ ನೀಡಿದ ದೂರನ್ನು ಆಧರಿಸಿ ಎಫ್ಐಆರ್ ದಾಖಲಿಸುವಂತೆ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಓಪಿ ಸಿಂಗ್ ಆದೇಶ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಚಿನ್ಮಯಾನಂದ ಅವರ ಬೆಂಬಲಿಗರು ಪ್ರತಿದೂರು ಸಲ್ಲಿಸಿದ್ದಾರೆ. ತಮಗೆ ಐದು ಕೋಟಿ ರೂಪಾಯಿ ಕೊಡುವಂತೆ ಚಿನ್ಮಯಾನಂದ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿತ್ತು ಎಂದು ಅವರು ಆರೋಪಿಸಿದ್ದಾರೆ.

ವಾಜಪೇಯಿ ಸರ್ಕಾರದಲ್ಲಿ ಸಚಿವ
ಸ್ವಾಮಿ ಚಿನ್ಮಯಾನಂದ ಅವರು 1999-2004ರ ಅವಧಿಯಲ್ಲಿ ಅಟಲ್ ವಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. ಹರಿದ್ವಾರದಲ್ಲಿರುವ ಚಿನ್ಮಯಾನಂದ ಆಶ್ರಮದಲ್ಲಿ ಹಲವು ವರ್ಷ ಕಳೆದಿದ್ದ ಯುವತಿಯೊಬ್ಬರು, ಚಿನ್ಮಯಾನಂದರ ವಿರುದ್ಧ 2011ರ ನವೆಂಬರ್ನಲ್ಲಿ ಅತ್ಯಾಚಾರ ದೂರು ನೀಡಿದ್ದರು. ಈ ಪ್ರಕರಣವನ್ನು ಆದಿತ್ಯನಾಥ ಸರ್ಕಾರ ಕಳೆದ ವರ್ಷ ಕೈಬಿಟ್ಟಿತ್ತು.












Click it and Unblock the Notifications