ಕರಾಳ ಕ್ಷಣ: ಜೀವ ಉಳಿಸಿಕೊಳ್ಳಲು ಹೆಣಗಳ ಮೇಲೆ ಹತ್ತುತ್ತಿದ್ದರು!
ಆಗ್ರಾ, ಜುಲೈ 09: "ಬಸ್ಸಿನಿಂದ ಹೊರಬಂದು ಜೀವ ಉಳಿಸಿಕೊಳ್ಳುವ ಸಲುವಾಗಿ ಕೆಲವರು ಹೆಣಗಳ ಮೇಲೆ ಹತ್ತುತ್ತಿದ್ದರು" ಎಂದು ಯಮುನಾ ಎಕ್ಸ್ ಪ್ರೆಸ್ ವೇ ದುರಂತದ ಕರಾಳ ಕ್ಷಣಗಳನ್ನು ಪ್ರತ್ಯಕ್ಷದರ್ಶಿ, ಗಾಯಾಳುವೊಬ್ಬರು ಹಂಚಿಕೊಂಡಿದ್ದಾರೆ.
ಜುಲೈ 09 ರಂದು ಲಕ್ನೋದಿಂದ ದೆಹಲಿಗೆ ಹೊರಟಿದ್ದ ಡಬಲ್ ಡೆಕ್ಕರ್ ಬಸ್ಸೊಂದು ಯಮುನಾ ಎಕ್ಸ್ ಪ್ರೆಸ್ ವೇಲ್ಲಿ ತೆರಳುತ್ತಿದ್ದಾಗ ನಲವತ್ತು ಅಡಿ ಆಳದ ಪ್ರಪಾತಕ್ಕೆ ಬಿದ್ದಿತ್ತು. ಈ ಘಟನೆಯಲ್ಲಿ ಬಸ್ಸಿನಲ್ಲಿದ್ದ 53 ಜನರಲ್ಲಿ 29 ಮಂದಿ ಪ್ರಾಣ ಕಳೆದುಕೊಂಡಿದ್ದರು. ಮಿಕ್ಕವರೆಲ್ಲರೂ ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆಯ ಬಗ್ಗೆ ರಿಷಿ ಯಾದವ್ ಎಂಬ ಗಾಯಾಳುವೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. "ಬೆಳಗ್ಗಿನ ಜಾವವಾಗಿದ್ದರಿಂದ ನಾವೆಲ್ಲರೂ ಗಾಢ ನಿದ್ದೆಯಲ್ಲಿದ್ದೆವು. ಇದ್ದಕ್ಕಿದ್ದಂತೇ ಬಸ್ಸು ದೊಡ್ಡ ಸಪ್ಪಳದೊಂದಿಗೆ ಕೆಳಗೆ ಬಿತ್ತು. ಒಂದು ನಿಮಿಷ ಆಕ್ರಂದನ ಮುಗಿಲುಮುಟ್ಟಿತ್ತು. ನಂತರ ಎಲ್ಲವೂ ಸ್ತಬ್ಧವಾಗಿತ್ತು. ಹೋದವರು ಹೋದರು, ಆದರೆ ಜೀವ ಇದ್ದವರು ಹೇಗಾದರು ಮಾಡಿ ಬಸ್ಸಿನಿಂದ ಹೊರಬರಬೇಕಲ್ಲ, ಹಲವರು ಹೆಣಗಳ ಮೇಲೆಯೇ ಹತ್ತಿಬಂದು ಜೀವ ಉಳಿಸಿಕೊಂಡರು. ಅವರಿಗೆ ಬೇರೆ ದಾರಿಯೂ ಇರಲಿಲ್ಲ" ಎಂದು ರಿಷಿ ಆ ದುರಂತವನ್ನು ನೆನಪಿಸಿಕೊಂಡರು.

"ಬಸ್ಸು ತುಂಬಾ ವೇಗವಾಗಿ ಚಲಿಸುತ್ತಿತ್ತು ಎನ್ನಿಸುತ್ತದೆ. ಆದರೆ ಚಾಲಕನಿಗೆ ಮಂಪರು ಹತ್ತಿರಬೇಕು. ಆದ್ದರಿಂದ ನಿಯಂತ್ರಣ ತಪ್ಪಿ ಬಸ್ಸು ಕೆಳಗೆ ಬಿದ್ದಿದೆ" ಎಂದು ರಿಷಿ ಹೇಳಿದ್ದಾರೆ.
ಸೋಮವಾರ ಬೆಳಗ್ಗಿನ ಜಾವ ಸುಮಾರು 4:15 ರ ಸಮಯದಲ್ಲಿ ಘಟನೆ ನಡೆದಿದ್ದು, ಇದುವರೆಗೂ ಮೃತರಲ್ಲಿ ಹಲವರ ಗುರುತನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಗಾಯಗೊಂಡವರಲ್ಲಿ ಇಬ್ಬರು ಕೋಮಾ ಸ್ಥಿತಿಯಲ್ಲಿದ್ದಾರೆ.
ಇನ್ನು ಅರಿಬಾ ಖಾನ್ ಎಂಬ ಮೃತ ಯುವತಿಯ ತಾಯಿ ಈ ಕರಾಳ ಘಟನೆಯ ಬಗ್ಗೆ ಮಾತನಾಡಿದ್ದು, "ತಂದೆಗೆ ಹೃದಯಾಘಾತವಾಗಿದ್ದರಿಂದ ಮನೆಗೆ ಬಂದು ಮುಂಬೈಗೆ ವಾಪಸ್ಸಾಗುತ್ತಿದ್ದಳು.ಈ ಸಂದರ್ಭದಲ್ಲಿ ಅಪಘಾತವಾಗಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾಳೆ . ನಮ್ಮ ಕುಟುಂಬದಲ್ಲಿ ಆದಾಯ ಗಳಿಸುತ್ತಿದ್ದ ಏಕೈಕ ಸದಸ್ಯೆ ಆಕೆ. ಮುಂದೆ ನಮ್ಮ ಗತಿ ಏನು?" ಎಂದು ಕಣ್ಣೀರು ಇಡುತ್ತಾರೆ ಅವರ ತಾಯಿ.
ತಮ್ಮ ಗೃಹಪ್ರವೇಶಕ್ಕೆಂದು ಲಕ್ನೋಕ್ಕೆ ಬಂದಿದ್ದ ಅವಿನಾಶ್ ಅವಸ್ಥಿ ಸೋಮವಾರ ಆಫೀಸಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆಯಲ್ಲಿ ಮೃತರಾಗಿದ್ದಾರೆ.
ಈ ಕರಾಳ ಘಟಣೆಯ ಹಿಂದೆ ಕರುಳುಕಿವುಚುವ ಇಂಥ ಹಲವು ಕಥೆಗಳಿದ್ದು, ಮೃತರ ಗುರುತನ್ನು ಪತ್ತೆ ಮಾಡುವುದೇ ಹರಸಾಹಸವೆನ್ನಿಸಿದೆ.












Click it and Unblock the Notifications