ಲಕ್ನೋದಲ್ಲಿ ಕಾಶ್ಮೀರಿಗಳ ಮೇಲೆ ಹೀನಾಯ ಹಲ್ಲೆ, ವಿಡಿಯೋ ವೈರಲ್
ಲಕ್ನೋ, ಮಾರ್ಚ್ 07 : ಭಾರತದಲ್ಲಿ ಹರಡಿಕೊಂಡಿರುವ ಕಾಶ್ಮೀರದ ಜನರನ್ನು ಸರಕಾರ ರಕ್ಷಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದ್ದರೂ, ಅವರ ಮೇಲೆ ಆಗುತ್ತಿರುವ ಹಲ್ಲೆ ನಿಂತಿಲ್ಲ. ಇತ್ತೀಚೆಗೆ ಪುಣೆಯಲ್ಲಿ ಕಾಶ್ಮೀರಿಯನ್ನು ಥಳಿಸಲಾಗಿದ್ದರೆ, ಇದೀಗ ಉತ್ತರ ಪ್ರದೇಶದ ರಾಜಧಾನಿಯಲ್ಲಿ ಇಬ್ಬರ ಮೇಲೆ ಹಲ್ಲೆ ಮಾಡಲಾಗಿದೆ.
ಲಕ್ನೋದ ಬೀದಿಯಲ್ಲಿ ಒಣಹಣ್ಣು ಮಾರುತ್ತಿದ್ದ ಇಬ್ಬರು ಕಾಶ್ಮೀರಿಗಳನ್ನು ಬೆತ್ತದಿಂದ ಹೀನಾಯವಾಗಿ ಥಳಿಸಲಾಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅವರಿಗೆ ಆಧಾರ್ ಕಾರ್ಡ್ ತೋರಿಸೆಂದು ಪೀಡಿಸಲಾಗಿದ್ದು, ಅವರನ್ನು 'ಭಯೋತ್ಪಾದಕ'ರೆಂದು ಹೀಯಾಳಿಸಲಾಗಿದೆ.
ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಆತ್ಮಾಹುತಿ ದಾಳಿಯಾಗಿ 40ಕ್ಕೂ ಹೆಚ್ಚು ಸಿಆರ್ಪಿಎಫ್ ಜವಾನರು ಹತ್ಯೆಗೀಡಾದ ಮೇಲೆ, ದೇಶದೆಲ್ಲೆಡೆ ಕಾಶ್ಮೀರಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಕಾಶ್ಮೀರಿಗಳ ಮೇಲೆ ನಡೆಯುತ್ತಿದ್ದ ಹಲ್ಲೆಯ ವಿಡಿಯೋ ಎಲ್ಲೆಡೆ ಹರಡಿಕೊಳ್ಳುತ್ತಿದ್ದಂತೆ, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಕೇಸರಿ ದಿರಿಸು ಧರಿಸಿದ್ದ ಕೆಲ ಪುರುಷರು ಕಾಶ್ಮೀರಿಗಳ ಮೇಲೆ ತಮ್ಮ ಪೌರುಷ ತೋರಿಸಿದ್ದಾರೆ. ಒಬ್ಬ ವಿಡಿಯೋ ಶೂಟ್ ಮಾಡುತ್ತಿದ್ದರೆ ಉಳಿದವರು ಅವರನ್ನು ಥಳಿಸಿದ್ದಾರೆ. ಅವರು ಮುಖ ತಗ್ಗಿಸಿ ಥಳಿಸಬೇಡಿರೆಂದು ಬೇಡಿಕೊಳ್ಳುತ್ತಿದ್ದರೂ ಬಿಡದೆ ಅವರನ್ನು ಥಳಿಸಲಾಗಿದೆ. ಅವರಲ್ಲೊಬ್ಬ ನೀವು ಕಾಶ್ಮೀರಿಗಳಾಗಿದ್ದರಿಂದಲೇ ಬಡಿದಿದ್ದೇವೆ ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಅವರನ್ನು ಸ್ಥಳೀಯರೇ ಮಧ್ಯ ಪ್ರವೇಶಿಸಿ ಪಾರು ಮಾಡಿದ್ದಾರೆ. ಥಳಿಸುತ್ತಿದ್ದವರಿಗೆ, ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಬುದ್ಧಿ ಹೇಳಿ ಅವರನ್ನು ಸಾಗಹಾಕಿದ್ದಾರೆ. ಈ ಕಾಶ್ಮೀರಿ ಯುವಕರು ಹಲವಾರು ವರ್ಷಗಳಿಂದ ಇಲ್ಲಿ ಒಣಹಣ್ಣು ಮಾರಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಅವರ ಮೇಲೆ ಈ ಪರಿ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡುತ್ತಿರುವವರನ್ನು ವಿಶ್ವ ಹಿಂದೂ ದಳದವರು ಎಂದು ಗುರುತಿಸಲಾಗಿದೆ.
ವಿಶ್ವ ಹಿಂದೂ ದಳದ ಅಧ್ಯಕ್ಷ ಹಿಮಾಂಶು ಅವಾಸ್ಥಿ ಎಂಬಾತ ಆ ವಿಡಿಯೋಗಳನ್ನು ಫೇಸ್ ಬುಕ್ಕಿನಲ್ಲಿ ಹಾಕಿ, ತಾನೇ ಮಾಡಿದ್ದಾಗಿ ಹೇಳಿಕೊಂಡಿದ್ದ. ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಆ ವಿಡಿಯೋಗಳನ್ನು ಅಲ್ಲಿಂದ ತೆಗೆದುಹಾಕಲಾಗಿದೆ.
SHOCKING: Some goons in saffron kurtas throttle, assault a Kashmiri dry fruit seller in Lucknow. Passersby come to rescue of the Kashmiri. Case yet to be registered.
— Prashant Kumar (@scribe_prashant) March 6, 2019
Hope @Uppolice @Igrangelucknow @lkopolice register an FIR and jab these goondas at the earliest. pic.twitter.com/zXjI3Anh2n
ಇದು ನಿಜಕ್ಕೂ ದುರಾದೃಷ್ಟಕರ. ಇಂಥ ಘಟನೆ ಎಂದೂ ಆಗಬಾರದು. ಹೀಗೆ ಹಲ್ಲೆ ಮಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾರೂ ಕಾನೂನಿಗಿಂತ ದೊಡ್ಡವರಲ್ಲ, ಅಮಾಯಕ ನಾಗರಿಕರ ಮೇಲೆ ಯಾರೂ ಹಲ್ಲೆ ಮಾಡಬಾರದು. ಅಮಾಯಕ ಕಾಶ್ಮೀರಿಗಳ ಮೇಲೆ ಹಲ್ಲೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮಫ್ತಿ ಅವರು ಈ ಘಟನೆಯನ್ನೂ ತೀವ್ರವಾಗಿ ಖಂಡಿಸಿದ್ದಾರೆ. ಈ ರೀತಿ ಹಲ್ಲೆ ಮಾಡಿ ವಿಡಿಯೋ ಹರಿಯಬಿಡುವುದರಿಂದ ಭಾರತಕ್ಕೆ ಮತ್ತಷ್ಟು ಆಘಾತವಾಗುತ್ತದೆ ಎಂದು ಓಮರ್ ಅಬ್ದುಲ್ಲಾ ಟೀಕಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಅಸಾದುದ್ದಿನ್ ಓವೈಸಿ ಕೂಡ ಕಾಶ್ಮೀರಿಗಳ ಮೇಲಾಗಿರುವ ಹಲ್ಲೆಯನ್ನು ಖಂಡಿಸಿದ್ದಾರೆ.












Click it and Unblock the Notifications