ಇದಪ್ಪಾ ಉತ್ತರ: ಸಿಎಂ ಯೋಗಿ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆಯೇ ಇಲ್ಲವಂತೆ!
ಲಕ್ನೋ, ಡಿಸೆಂಬರ್ 17: ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಆಮ್ಲಜನಕ ಕೊರತೆಯಿಂದ ಒಂದೇ ಒಂದು ಸಾವಿನ ಪ್ರಕರಣವೂ ವರದಿಯಾಗಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಹೇಳಿಕೊಂಡಿದೆ.
ರಾಜ್ಯ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಕೊವಿಡ್-19 ಸೋಂಕಿನಿಂದ ಇದುವರೆಗೂ ಉತ್ತರ ಪ್ರದೇಶದಲ್ಲಿ 22,915 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಈ ಪೈಕಿ ಒಬ್ಬರೇ ಒಬ್ಬರು ಆಮ್ಲಜನಕ ಕೊರತೆಯಿಂದ ಮೃತಪಟ್ಟಿಲ್ಲ ಎಂದು ತಿಳಿಸಿದೆ. ಸರ್ಕಾರ ನೀಡುವ ಮರಣ ಪ್ರಮಾಣದಲ್ಲಿ ಆಮ್ಲಜನಕ ಕೊರತೆಯು ಸಾವಿಗೆ ಕಾರಣವಾಯಿತು ಎಂಬ ಬಗ್ಗೆ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ.
ಓಮಿಕ್ರಾನ್ ಭೀತಿ: ಮಹಾರಾಷ್ಟ್ರದಲ್ಲಿ ಹೊಸ ವರ್ಷ, ಕ್ರಿಸ್ಮಸ್ ಆಚರಣೆಗೆ ನಿರ್ಬಂಧ
ಕೊವಿಡ್-19 ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ನಲ್ಲಿ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಉತ್ತರ ನೀಡಿದರು. "ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಒಂದೂ ಸಾವಿನ ಪ್ರಕರಣ ವರದಿಯಾಗಿಲ್ಲ," ಎಂದು ಅವರು ಹೇಳಿದ್ದಾರೆ.
ಯಾರು ಪ್ರಶ್ನೆ ಕೇಳಿದ್ದು?
ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಕೊರತೆಯಿಂದಲೇ ಹಲವರು ಪ್ರಾಣ ಬಿಟ್ಟಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ಕಾಂಗ್ರೆಸ್ ಎಂಎಲ್ ಸಿ ದೀಪಕ್ ಸಿಂಗ್ ವಿಧಾನ ಪರಿಷತ್ ನಲ್ಲಿ ಆರೋಗ್ಯ ಸಚಿವರಿಗೆ ಪ್ರಶ್ನೆ ಕೇಳಿದರು. ಅವರಿಗೆ ಉತ್ತರಿಸಿದ ಆರೋಗ್ಯ ಸಚಿವ ಜೈ ಪ್ರಕಾಶ್ ಸಿಂಗ್, ನಂತರ ಪೂರಕ ಪ್ರಶ್ನೆಯೊಂದರಲ್ಲಿ ತಮ್ಮದೇ ಸಚಿವರನ್ನು ಉಲ್ಲೇಖಿಸಿ ಇದೇ ರೀತಿಯ ಪ್ರಕರಣಗಳ ಬಗ್ಗೆ ಸರ್ಕಾರದ ಬಳಿ ವಿವರಗಳಿವೆಯೇ ಎಂದು ಕೇಳಿದರು.
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಬಗ್ಗೆ ದೂರಿನ ಪತ್ರ
ರಾಜ್ಯದಲ್ಲಿ ಈ ಹಿಂದೆ ಕೊವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಆಕ್ಸಿಜನ್ ಕೊರತೆಯಾಗುತ್ತಿದೆ ಎಂದು ಹಲವು ಶಾಸಕರು ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದರು. ಸಂಸದರು ಸಹ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಈ ಮಧ್ಯೆ ಸೂಕ್ತ ಸಮಯಕ್ಕೆ ಆಕ್ಸಿಜನ್ ಸಿಗದೇ ಪ್ರಾಣ ಬಿಟ್ಟಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದವು. ರಾಜ್ಯಾದ್ಯಂತ ಇಂಥ ಸಾವಿನ ಪ್ರಕರಣಗಳ ಕುರಿತು ಸರ್ಕಾರದ ಬಳಿ ಅಂಕಿ ಅಂಶಗಳಿವೆಯೇ?, ಆಮ್ಲಜನಕ ಸಿಗದೇ ಪ್ರಾಣ ಬಿಟ್ಟ ಹಲವರ ಮೃತದೇಹಗಳನ್ನು ಗಂಗಾ ನದಿಯಲ್ಲಿ ತೇಲಿ ಬಿಟ್ಟ ಪ್ರಕರಣಗಳು ನಡೆದಿದ್ದವು," ಎಂದು ಸರ್ಕಾರವನ್ನು ಮೇಲ್ಮನೆಯ ಸದಸ್ಯ ದೀಪಕ್ ಸಿಂಗ್ ಪ್ರಶ್ನೆ ಮಾಡಿದ್ದರು.
ಆರೋಗ್ಯ ಸಚಿವರು ನೀಡಿದ ಉತ್ತರದಲ್ಲಿ ಏನಿದೆ?
ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾದ ಕೊವಿಡ್-19 ರೋಗಿಯು ಮೃತಪಟ್ಟ ನಂತರದಲ್ಲಿ ಅವರಿಗೆ ನೀಡುವ ಮರಣ ಪ್ರಮಾಣಪತ್ರದಲ್ಲಿ ನಿಜವಾದ ಕಾರಣವನ್ನು ಉಲ್ಲೇಖಿಸದಿರುವುದು ವೈದ್ಯರ ದೋಷವಾಗಿದೆ. ಈವೆರೆಗೆ ಉತ್ತರ ಪ್ರದೇಶದಲ್ಲಿ 22,915 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಮರಣ ಪ್ರಮಾಣಪತ್ರವನ್ನು ನೀಡಲಾಗಿದೆ. ಆದರೆ ಈ ಪೈಕಿ ಒಬ್ಬರ ಪ್ರಮಾಣ ಪತ್ರದಲ್ಲೂ ಆಕ್ಸಿಜನ್ ಕೊರತೆಯ ಕಾರಣವನ್ನು ಉಲ್ಲೇಖಿಸಿಲ್ಲ ಎಂದು ಆರೋಗ್ಯ ಸಚಿವ ಜೈ ಪ್ರಕಾಶ್ ಸಿಂಗ್ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು
ಉತ್ತರ ಪ್ರದೇಶದಲ್ಲಿ ಡಿಸೆಂಬರ್ 16ರ ಅಂಕಿ-ಅಂಶಗಳ ಪ್ರಕಾರ, ಒಟ್ಟು 17,10,158 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೂ 16,87,151 ಸೋಂಕಿತರು ಗುಣಮುಖರಾಗಿದ್ದು, ಕೇವಲ 107 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಇದುವರೆಗೂ 22,900 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Recommended Video