ಕೊವಿಡ್ ನಿಯಮ ಹರೋಹರ: ಕೇಂದ್ರ ಹೇಳುವುದು ಒಂದು, ಯುಪಿಯಲ್ಲಿ ಮಾಡುವುದು ಇನ್ನೊಂದು!
ಲಕ್ನೋ, ಡಿಸೆಂಬರ್ 28: ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ಹೊರತಾಗಿಯೂ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ನಿಯಮಗಳ ಸ್ಪಷ್ಟ ಉಲ್ಲಂಘನೆ ಆಗುತ್ತಿರುವುದು ಕಂಡು ಬರುತ್ತಿದೆ. ರಾಜಕೀಯ ಪಕ್ಷಗಳು ನಡೆಸುವ ಪ್ರಚಾರ ಸಭೆಗಳಲ್ಲಿ ಮಾರ್ಗಸೂಚಿಗಳ ಪಾಲನೆ ಆಗದಿರುವುದು ಗೋಚರಿಸುತ್ತಿದೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಆಗಲಿ, ಭಾರತೀಯ ಜನತಾ ಪಕ್ಷವಾಗಲಿ ಅಥವಾ ಸಮಾಜವಾದಿ ಪಕ್ಷವಾಗಲಿ, ಎಲ್ಲ ಪಕ್ಷಗಳು ನಡೆಸುವ ಪ್ರಚಾರದ ರ್ಯಾಲಿಗಳಲ್ಲಿ ಸಾಮಾಜಿಕ ಅಂತರ ಕಣ್ಮರೆಯಾಗಿದೆ. ನೂರಾರು ಸಂಖ್ಯೆಯಲ್ಲಿ ಸೇರುವ ಸಾರ್ವಜನಿಕರು ಮಾಸ್ಕ್ ಹೊರತಾಗಿ ಯಾವುದೇ ಅಂತರವಿಲ್ಲದೇ ನೆರೆದಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿವೆ.
ಕೊವಿಡ್-19 ಪರೀಕ್ಷೆಗೂ ಮೊದಲು ಅಖಿಲೇಶ್ ಯಾದವ್ ಪ್ರಚಾರದಿಂದ ಆತಂಕ!?
ಭಾನುವಾರ ನಡೆದ ಕಾಂಗ್ರೆಸ್ ಮಹಿಳಾ ಮ್ಯಾರಥಾನ್, ಉನ್ನಾವೊದಲ್ಲಿ ಅಖಿಲೇಶ್ ಯಾದವ್ ರ್ಯಾಲಿ ಅಥವಾ ಹರ್ದೋಯ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ಶೋದಲ್ಲಿ ಜನರು ಕೊವಿಡ್-19 ಸುರಕ್ಷತಾ ನಿಯಮಗಳ ಬಗ್ಗೆ ಲಕ್ಷ್ಯ ವಹಿಸದಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇದರಿಂದ ಕೊವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸುವ ಆತಂಕವನ್ನು ಹುಟ್ಟು ಹಾಕುತ್ತಿದೆ.
ಎರಡನೇ ಅಲೆ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಯುಪಿ
ಉತ್ತರ ಪ್ರದೇಶದಲ್ಲಿ ಜನಸಂಖ್ಯೆಯಲ್ಲಿ ಶೇಕಡಾ 30ಕ್ಕಿಂತ ಕಡಿಮೆ ಜನರು ಕೊವಿಡ್-19 ಲಸಿಕೆಯ ಎರಡೂ ಡೋಸ್ ಅನ್ನು ಪಡೆದುಕೊಂಡಿದ್ದಾರೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಸಂದರ್ಭದಲ್ಲಿ ಡೆಲ್ಟಾ ರೂಪಾಂತರದಿಂದ ಅತಿಹೆಚ್ಚು ಸಮಸ್ಯೆ ಎದುರಿಸಿದ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶವು ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. ಡೆಲ್ಟಾ ರೂಪಾಂತರಿಂದ ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಜನರು ಪ್ರಾಣ ಬಿಟ್ಟಿರುವುದು ವರದಿಯಾಗಿತ್ತು. ಇನ್ನೊಂದು ಕಡೆಯಲ್ಲಿ ಗಂಗಾ ನದಿಯ ಮರಳಿನ ದಡದಲ್ಲಿ ಹೂತಿರುವ ಸಾವಿರಾರು ಶವಗಳು ನದಿಯಲ್ಲಿ ತೇಲುತ್ತಿರುವ ಚಿತ್ರಗಳು ವಿದೇಶಿ ಮಾಧ್ಯಮಗಳಲ್ಲಿಯೂ ಸುದ್ದಿ ಮಾಡಿದ್ದವು.
ರಾಜ್ಯ ವಿಧಾನಸಭೆ ಚುನಾವಣೆ ಮುಂದೂಡಲು ಹೈಕೋರ್ಟ್ ಸಲಹೆ
ಕೊರೊನಾವೈರಸ್ ರೂಪಾಂತರಿ ಓಮಿಕ್ರಾನ್ ಭೀತಿ ನಡುವೆ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಸುವುದು ಬೇಡ ಎಂದು ಅಲಹಾಬಾದ್ ಹೈಕೋರ್ಟ್ ಸಲಹೆ ನೀಡಿತ್ತು. ರಾಜ್ಯ ವಿಧಾನಸಭೆ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳ ಅವಧಿಗೆ ಮುಂದೂಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ ಒತ್ತಾಯಿಸಿತ್ತು. ರಾಜ್ಯದಲ್ಲಿ ಚುನಾವಣಾ ಪ್ರಚಾರದ ಮೆರವಣಿಗೆಗಳನ್ನು ನಿಷೇಧಿಸುವಂತೆ ಕೋರ್ಟ್ ಸಲಹೆ ನೀಡಿತ್ತು. ಈ ಬಗ್ಗೆ ಯಾವುದೇ ಪ್ರಕರಣದ ನಂಟು ಹೊಂದಿಲ್ಲದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಅಲಹಾಬಾದ್ ಉಚ್ಛ ನ್ಯಾಯಾಲಯವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಿಲ್ಲಿಸದಿದ್ದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಲ್ಲಿ ಎದುರಿಸಿದ ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿಯನ್ನು ನೋಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಎಚ್ಚರಿಸಿದ್ದಾರೆ.
ಕೊವಿಡ್-19 ನಿಯಮಗಳ ಉಲ್ಲಂಘನೆ ನಿಯಂತ್ರಣ ಸಾಧ್ಯವಿಲ್ಲ
ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ರ್ಯಾಲಿಗಳು ಮತ್ತು ಸಭೆಗಳನ್ನು ಆಯೋಜಿಸುತ್ತಿವೆ. ಅಂತಹ ಸಭೆ, ಸಮಾರಂಭ ಮತ್ತು ಕಾರ್ಯಕ್ರಮಗಳಲ್ಲಿ ಕೊವಿಡ್-19 ಶಿಷ್ಟಾಚಾರ ಅನುಸರಿಸುವುದು ಕಷ್ಟಸಾಧ್ಯವಾಗುತ್ತದೆ ಎಂದು ಕೋರ್ಟ್ ಹೇಳಿತ್ತು.
ಯುಪಿ ಚುನಾವಣೆ ಮುಂದೂಡಿಕೆ ಬಹುತೇಕ ಅನುಮಾನ
ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನ ಹಿನ್ನೆಲೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ನಿಗದಿತ ಸಮಯಕ್ಕಿಂತ ಮೊದಲೇ ನಡೆಸಬೇಕು. ಇಲ್ಲವೇ ಚುನಾವಣೆ ಅನ್ನು ಮುಂದೂಡಿಕೆ ಮಾಡಬೇಕು ಎಂಬುದರ ಕುರಿತು ಹರದಾಡುತ್ತಿರುವ ಊಹಾಪೋಹಗಳ ನಡುವೆ ಕೇಂದ್ರೀಯ ಚುನಾವಣಾ ಆಯೋಗವು ಲಕ್ನೋ ಪ್ರವಾಸವನ್ನು ಆರಂಭಿಸಿದೆ. ಈ ಬೆಳವಣಿಗೆಯಿಂದ ರಾಜ್ಯದಲ್ಲಿ ಚುನಾವಣೆ ಮುಂದೂಡಿಕೆ ಆಗುವುದು ಬಹುತೇಕ ಅನುಮಾನವಾಗಿದೆ.
Recommended Video