ಯೋಗಿ ಕ್ಷೇತ್ರದಿಂದ ಪ್ರಿಯಾಂಕಾ ಸ್ಪರ್ಧಿಸಲಿ... ಕಾರ್ಯಕರ್ತರ ಒತ್ತಾಯ
ಗೋರಖ್ಪುರ, ಜನವರಿ 28: ಒಂದು ಕಾಲದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವಾಗಿದ್ದ ಗೋರಖ್ಪುರದಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸಲಿ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಗೋರಖ್ಪುರದ ಹಲವೆಡೆ ಪ್ರಿಯಾಂಕಾ ಗಾಂಧಿ ಅವರೇ ನಮ್ಮ ಸಂಸದರು ಎಂಬ ಘೋಷಣೆಯುಳ್ಳ ಪೋಸ್ಟರ್ ಗಳು ಕಾಣಸಿಗುತ್ತಿವೆ.
ಅಷ್ಟೇ ಅಲ್ಲ ಕೆಲವು ಪೋಸ್ಟರ್ ಗಳಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಝಾನ್ಸಿ ರಾಣಿ ಎಂಬಂತೆಯೂ ಚಿತ್ರಿಸಲಾಗಿದೆ. ಬಿಳಿ ಕುದುರೆಯ ಮೇಲೆ ಕುಳಿತು, ಯುದ್ಧಕ್ಕೆ ಹೊರಟ ಲಕ್ಷ್ಮಿ ಬಾಯಿಯಂತೆಯೇ ಪ್ರಿಯಾಂಕಾ ಗಾಂಧಿ ಅವರನ್ನು ಚಿತ್ರಿಸಲಾಗಿದೆ.

ಗೋರಖ್ಪುರ ಕ್ಷೇತ್ರದಲ್ಲಿ ಒಟ್ಟು ನಾಲ್ಕು ಬಾರಿ ಯೋಗಿ ಆದಿತ್ಯನಾಥ್ ಅವರ ಸಂಸದರಾಗಿದ್ದರು. ಆದರೆ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತ್ತು. ಸಮಾಜವಾದಿ ಪಕ್ಷದ ಪ್ರವೀಣ್ ಕುಮಾರ್ ನಿಶಾದ್ ಜಯಗಳಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಬುಧವಾರ ಎಐಸಿಸಿ(ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ ಕಾಂಗ್ರೆಸ್ ಅವರನ್ನು ಸಕ್ರಿಯ ರಾಜಕಾರಣಕ್ಕೆ ಆಹ್ವಾನಿಸಿದೆ.












Click it and Unblock the Notifications