Bengaluru Suburban Rail: 'ಕನಕ' ಕಾರಿಡಾರ್ ಶೇ.10ರಷ್ಟು ಪೂರ್ಣ: ಹೊಸ ನಿಲ್ದಾಣಗಳ ನಿರ್ಮಾಣಕ್ಕೆ K-RIDE ಸಿದ್ಧತೆ
ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ (BSRP) ನಾಲ್ಕು ಕಾರಿಡಾರ್ಗಳ ಪೈಕಿ ಎರಡು 'ಕನಕ' ಮತ್ತು 'ಮಲ್ಲಿಗೆ' ಕಾರಿಡಾರ್ಗಳ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದರಲ್ಲಿ ಹೀಲಲಿಗೆ-ರಾಜಾನುಕುಂಟೆವರೆಗಿನ (ಕನಕ) ರೈಲು ಮಾರ್ಗದಲ್ಲಿ ಎಲ್ಲ ನಿಲ್ದಾಣಗಳ ನಿರ್ಮಾಣ ಪ್ರಮಾಣ ಕೇವಲ ಶೇ.10ರಷ್ಟು ಮಾತ್ರವೇ ಪೂರ್ಣಗೊಂಡಿದೆ. ಗುರುವಾರ ಗುತ್ತಿಗೆ ಕಂಪನಿ ಹಾಗೂ ಕೆ-ರೈಡ್ ಅಧಿಕಾರಿಗಳು ಹೊಸ ನಿಲ್ದಾಣಗಳ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ನಿರ್ಮಾಣ ಕಾಮಗಾರಿಗೆ ವೇಗ ಸಿಗುವ ಸಾಧ್ಯತೆ ಇದೆ.
'ಕನಕ' ಮಾರ್ಗದಲ್ಲಿ ಒಟ್ಟು 19 ನಿಲ್ದಾಣಗಳು ಸ್ಥಾಪನೆಯಾಗಲಿವೆ. ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವರ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಈ ಮಾರ್ಗದಲ್ಲಿ ಶೇ.10ರಷ್ಟು ನಿಲ್ದಾಣ ನಿರ್ಮಾಣ ಕೆಲಸಗಳು ಆಗಿವೆ ಎಂದು ಮಾಹಿತಿ ನೀಡಿದ್ದರು. ಅದರ ಬೆನ್ನಲ್ಲೆ ಉಪನಗರ ರೈಲು ಯೋಜನೆಗಳ ಪ್ರಸ್ತುತ ಎರಡು ಕಾರಿಡಾರ್ಗಳ ಕಾಮಗಾರಿಗಳಿಗೆ ರೈಲ್ವೆ ಅಧಿಕಾರಿಗಳು ವೇಗ ನೀಡಿದ್ದಾರೆ. ಇನ್ನೂ ನಿಲ್ದಾಣಗಳ ನಿರ್ಮಾಣಕ್ಕೆ ಅಗತ್ಯ ಸಿದ್ಧತೆಗಳು ಸಹ ಆರಂಭವಾಗಿವೆ.

ಇನ್ನೂ ಕನಕ ಕಾರಿಡಾರ್ ವ್ಯಾಪ್ತಿಯಲ್ಲಿ ತಲೆ ಎತ್ತರಲಿರುವ ನಿಲ್ದಾಣಗಳ ನಿರ್ಮಾಣ ಪೈಕಿ 'ಚನ್ನಸಂದ್ರ, ಹೊರಮಾವು, ಥಣಿಸಂದ್ರ' ನಿಲ್ದಾಣಗಳ ಸ್ಥಳಕ್ಕೆ ಗುರುವಾರ (ಜುಲೈ 2) ಗುತ್ತಿಗೆದಾರರು, ಅಧಿಕಾರಿಗಳು ಭೇಟಿ ನೀಡಿ 'ಸುರಕ್ಷತೆ, ಆರೋಗ್ಯ ಮತ್ತು ಪರಿಸರ' (SHE) ವಾಕ್ಡೌನ್ ನಡೆಸಿತು. ಕಾಮಗಾರಿ ಆರಂಭಕ್ಕೂ ಮುನ್ನ ಅಗತ್ಯವಾದ ಅಂಶಗಳನ್ನು ಪರಿಶೀಲಿಸಿದ್ದಾರೆ ಎಂದು ಕರ್ನಾಟಕ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಮಾಹಿತಿ ನೀಡಿದೆ.
ಯೋಜನೆಯಲ್ಲಿ ಸುರಕ್ಷತಾ ಮಾನದಂಡಗಳಿಗೆ ಆದ್ಯತೆ
ಕರ್ನಾಟಕ-ರೈಲ್ವೆ ಸಚಿವಾಲಯದ ಜಂಟಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಪ್ಯಾಕೇಜ್ C4B ಗಾಗಿ 'ಚನ್ನಸಂದ್ರ, ಹೊರಮಾವು ಮತ್ತು ಥಣಿಸಂದ್ರ ಸೇರಿದಂತೆ ವಿವಿಧ ಸೈಟ್ ಗಳಲ್ಲಿ ಸುರಕ್ಷತಾ ತಪಾಸಣೆ, ನಿರ್ಮಾಣ ಪದ್ಧತಿಗಳು, ಸಲಕರಣೆಗಳ ಸುರಕ್ಷತೆ, ವಿದ್ಯುತ್ ಮಾನದಂಡಗಳು, ಕಾರ್ಮಿಕ ಶಿಬಿರಗಳು, ಮನೆಗೆಲಸ, ನಿರ್ಮಾಣ ಸ್ಥಳದಲ್ಲಿನ ಸಮಸ್ಯೆಗಳ ಕುರಿತು ಪರಿಶೀಲಿಸಿದ್ದಾರೆ. ತ್ವರಿತವಾಗಿ ಪರಿಹಾರ ಕ್ರಮ ಕೈಗೊಂಡು, ನಿಲ್ದಾಣ ನಿರ್ಮಾಣ ಆರಂಭಿಸುವಂತೆ ಗುತ್ತಿಗೆದಾರಿಗೆ ಸೂಚಿಸಲಾಗಿತು. ಈ ಸ್ಥಳ ಸುರಕ್ಷತಾ ಪರಿಶೀಲನೆಯು BSRP ಯೋಜನೆಯಲ್ಲಿ ಕೆ-ರೈಡ್ ಕೈಗೊಳ್ಳುವ ಸುರಕ್ಷತಾ ಮಾನದಂಡಗಳ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ಯೋಜನೆಯ ಬದ್ಧತೆ ಬಲಪಡಿಸುವುದರೊಂದಿಗೆ ಜವಾಬ್ದಾರಿಯುತ ಕೆಲಸದ ವಾತಾವರಣ ಕಾಪಾಡಿಕೊಳ್ಳುವ ಅನುವು ಮಾಡಿಕೊಡುತ್ತದೆ.
ಡೆಡ್ಲೈನ್ 2029ಕ್ಕೆ ಮುಂದೂಡಿಕೆ
ಕನಕ ಕಾರಿಡಾರ್ ಒಟ್ಟು 47 ಕಿಲೋ ಮೀಟರ್ ಉದ್ದವಿದ್ದು, ಪ್ಯಾಕೇಜ್ C4B ಅಡಿಯಲ್ಲಿ ಚನ್ನಸಂದ್ರ, ಹೊರಮಾವು, ಹೆಣ್ಣೂರು, ಥಣಿಸಂದ್ರ, ಆರ್.ಕೆ. ಹೆಗ್ಡೆನಗರ, ಜಕ್ಕೂರು, ಯಲಹಂಕ, ಮುದ್ದನಹಳ್ಳಿ ಮತ್ತು ರಾಜನಕುಂಟೆ ನಿಲ್ದಾಣಗಳ ನಿರ್ಮಾಣವನ್ನು ಎನ್ಸಿಸಿ ಕಂಪನಿಗೆ ವಹಿಸಲಾಗಿದೆ.
ಈ ಕಾರಿಡಾರ್ ಕಾಮಗಾರಿಯು 2027ರಲ್ಲಿ ಪೂರ್ಣಗೊಳಿಸುವಂತೆ ಗುಡುವು ನೀಡಲಾಗಿತ್ತು. ಆದರೆ ಕಾಮಗಾರಿ ವಿಳಂಬದಿಂದಾಗಿ ಡೆಡ್ಲೈನ್ 2029 ಜೂನ್ ಗೆ ವಿಸ್ತರಣೆ ಆಗಿದೆ. ಕಾಮಗಾರಿಗೂ ಮುನ್ನ ಕೆ-ರೈಡ್ ನಿರಂತರವಾಗಿ ಸುರಕ್ಷತಾ, ಆರೋಗ್ಯ ಮತ್ತು ಪರಿಸರ (SHE) ತಪಾಸಣೆಗಳನ್ನು ನಡೆಸುತ್ತದೆ. ಅದೇ ರೀತಿ ನೆನ್ನೆ ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆದಿದ್ದು, ಸಮಸ್ಯೆ ಸರಿಪಡಿಸಿ ಕೆಲಸ ಆರಂಭಿಸುವಂತೆ ಸೂಚನೆ ನೀಡಲಾಗಿದೆ.
ಬೆಂಗಳೂರು ಸಂಚಾರ ದಟ್ಟಣೆ ಕಡಿವಾಣಕ್ಕೆ ಹಾಗೂ ಹೊರ ವಲಯದ ಪ್ರಯಾಣಿಕರಿಗೂ ನಗರ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 50:50 ಅನುದಾನ ಹಂಚಿಕೆಯಡಿ ಬೆಂಗಳೂರು ಉಪನಗರ ರೈಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಯೋಜನೆಗೆ ಅಡಿಗಲ್ಲು ಹಾಕಿದಾಗ 40 ತಿಂಗಳಲ್ಲಿ ಕಾಮಗಾರಿ ಮುಗಿಸುವ ಡೆಡ್ಲೈನ್ ನೀಡಲಾಗಿತ್ತು. ಭೂಸ್ವಾಧೀನ ಸಮಸ್ಯೆ, ಗುತ್ತಿಗೆದಾರರ ಬದಲಾವಣೆ, ಕೋವಿಡ್ ಇನ್ನಿತರ ಕಾರಣಗಳಿಂದ ಕಾಮಗಾರಿ ನಿಧಾನವಾಗಿದೆ.













Click it and Unblock the Notifications