ವಾರಣಾಸಿಯಲ್ಲಿ ಕೊನೇ ಕ್ಷಣದ ಆಘಾತ? ಅಡಕತ್ತರಿಯಲ್ಲಿ ಮೋದಿ?
Recommended Video
ವಾರಣಾಸಿ, ಏಪ್ರಿಲ್ 25: ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿ ಕೇವಲ ವಾರಣಾಸಿಯಿಂದ ಮಾತ್ರವೇ ಸ್ಪರ್ಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆ ವಿಶ್ವಾಸವೇ ಮುಳುವಾಗಬಹುದಾ? ವಾರಣಾಸಿಯಲ್ಲಿ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ರೋಚಕ ಟ್ವಿಸ್ಟ್ ನೀಡಲು ತಯಾರಿ ನಡೆಸುತ್ತಿದೆಯಾ ಎಂಬ ಅನುಮಾನವೊಂದು ರಾಜಕೀಯ ವಲಯದಲ್ಲಿ ಎದ್ದಿದೆ.
'ಅಭಿನವ ಇಂದಿರಾ ಗಾಂಧಿ' ಎಂದೇ ಅಭಿಮಾನಿಗಳಿಂದ ಹೊಗಳಿಕೆ ಪಡೆಯುತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಅನಿರೀಕ್ಷಿತ ರಾಜಕೀಯ ಪ್ರವೇಶದಷ್ಟೇ ಅಚ್ಚರಿಯ ಸುದ್ದಿಯನ್ನು ವಾರಣಾಸಿಯಲ್ಲೂ ಕಾಂಗ್ರೆಸ್ ನೀಡುವ ಸಾಧ್ಯತೆ ಇದೆ. ವಾರಣಾಸಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೊದಿ ಅವರ ವಿರುದ್ಧ ಸ್ಪರ್ಧೆಗೆ ನಿಲ್ಲಬಹುದು ಎಂಬ ವದಂತಿಗೆ ಪೂರಕವೆಂಬಂತೆ, ಅದಕ್ಕೆ 'ತಾನು ಸಿದ್ಧ' ಎಂದು ಸ್ವತಃ ಪ್ರಿಯಾಂಕಾ ಹೇಳಿಬಿಟ್ಟಿದ್ದಾರೆ.
"ಅಗತ್ಯ ಬಂದರೆ" ತಂಗಿ ಪ್ರಿಯಾಂಕಾ ಅವರನ್ನೂ ಕಣಕ್ಕಿಳಿಸುವ ಬಗ್ಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಸುಳಿವು ನೀಡಿದ್ದಾರೆ. ಇದರೊಟ್ಟಿಗೆ ಉತ್ತರ ಪ್ರದೇಶ ಪೂರ್ವ ಕ್ಷೇತ್ರಗಳಿಗೇ ಪ್ರಿಯಾಂಕಾ ಗಾಂಧಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಕಾಂಗ್ರೆಸ್ ನೇಮಿಸಿದೆ. ಅದೂ ಸಾಲದೆಂಬಂತೆ ಅವರು ಉತ್ತರ ಪ್ರದೇಶದಲ್ಲಿ ಒಂದರ ಹಿಂದೊಂದರಂತೆ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಜನರೊಂದಿಗೆ ಬೆರೆಯುತ್ತಿದ್ದಾರೆ. ಗಂಗೆಯ ನೀರು ಕುಡಿದಿದ್ದಾರೆ, ದೋಣಿ ವಿಹಾರ ಮಾಡಿದ್ದಾರೆ, ಬಡವರನ್ನು ಅಪ್ಪಿದ್ದಾರೆ... ಈ ಎಲ್ಲವೂ ಯಾವುದೋ ದೊಡ್ಡ ನಿರ್ಧಾರದ ಸೂಚನೆಯಾಗಿ ಕಾಣಿಸುವುದು ಸ್ಪಷ್ಟ.
ಆದರೂ... ವಾರಣಾಸಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಅಭ್ಯರ್ಥಿ ಎಂದು ರಾಜಾರೋಷವಾಗಿ ಘೋಷಿಸಿಬಿಡುವುದಕ್ಕೆ ಕಾಂಗ್ರೆಸ್ ಹಿಂದೇಟು ಹಾಕುತ್ತಿರುವುದೇಕೆ? ಅಲ್ಲೇ ಇರುವುದು ಟ್ವಿಸ್ಟ್!
ನಾಮಪತ್ರ ಸಲ್ಲಿಕೆಗೆ ಇನ್ನು ಕೆಲವೇ ಕ್ಷಣ ಬಾಕಿ ಇರುವಾಗ ಪ್ರಿಯಾಂಕಾ ಗಾಂಧಿ ಅವರು ಬಂದು ನಾಮಪತ್ರ ಸಲ್ಲಿಸಿದರೆ, ಅದೇ ಕೊನೆಯ ಹಂತವಾಗಿರುದರಿಂದ ಮೋದಿ ಅವರು ಮತ್ತೆಲ್ಲೂ ಸ್ಪರ್ಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇದು ಕಾಂಗ್ರೆಸ್ ನ ಲೆಕ್ಕಾಚಾರವುದ್ದೀತು!
ಈಗಾಗಲೇ ಕಾಂಗ್ರೆಸ್ ಈ ಕ್ಷೇತ್ರಕ್ಕೆ ಅಜಯ್ ರೈ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಆದರೆ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ವಾರಣಾಸಿಯಲ್ಲಿ ಮಾತ್ರ ಮೋದಿ ಸ್ಪರ್ಧೆ
ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ವಾರಣಾಸಿಯಲ್ಲಲ್ಲದೆ ಬೇರೆಲ್ಲೂ ಸ್ಪರ್ಧಿಸಿಲ್ಲ. 2014 ರ ಲೋಕಸಭಾ ಚುನಾವಣೆಯಲ್ಲಿ ಅವರು ಗುಜರಾತಿನ ವಡೋದರ ಕ್ಷೇತ್ರದೊಂದಿಗೆ ವಾರಣಾಸಿಯಲ್ಲೂ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರದಲ್ಲೂ ಗೆದ್ದಿದ್ದರು. ದೆಹಲಿಯಿಂದ ಆಚೆ ಹೆಚ್ಚೇನೂ ಜನಪ್ರಿಯತೆ ಗಳಿಸದಿದ್ದ ಕೇಜ್ರಿವಾಲ್ ಅವರು ಪ್ರತಿಸ್ಪರ್ಧಿಯಾದ್ದರಿಂದ ಮೋದಿ ಅವರು ಗೆಲುವು ಸಾಧಿಸಿದ್ದರು. 581,022 ಮತ ಗಳಿಸಿದ್ದರೆ, ಅವರ ಪ್ರತಿಸ್ಪರ್ಧಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಗಳಿಸಿದ್ದು 209,238 ಮತಗಳು.371,784 ಮತಗಳ ಭಾರೀ ಅಂತರದಿಂದ ಮೋದಿ ಗೆಲುವು ಸಾಧಿಸಿದ್ದರು.

ಪ್ರಿಯಾಂಕಾ ಪ್ರತಿಸ್ಪರ್ಧಿಯಾದರೆ ಗೆಲುವು ಸುಲಭವೇ?
ಈಗಲೂ ಮೋದಿ ಜನಪ್ರಿಯತೆ ಸಾಕಷ್ಟಿದ್ದರೂ, ವಾರಣಾಸಿಯಲ್ಲಿ ಮೋದಿ ಹಲವು ಪ್ರಗತಿ ಕಾರ್ಯಗಳನ್ನು ಮಾಡಿದ್ದರೂ, ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಅಭ್ಯರ್ಥಿಯಾದರೆ ಸ್ಪರ್ಧೆ ಸುಲಭವಿಲ್ಲ. ಇಂದಿಗೂ ಜನರಲ್ಲಿ 'ಇಂದಿರಮ್ಮ'ನ ಬಗ್ಗೆ ಒಂದು 'ಮೆಚ್ಚುಗೆ' ಇದೆ. ಆ ಮೆಚ್ಚುಗೆಯನ್ನು ಆಕೆಯ ತದ್ರೂಪಿಯಂತೆ ಕಾಣುವ ಪ್ರಿಯಾಂಕಾ ಸಹ ಪಡೆದರೆ ಅಚ್ಚರಿಯಿಲ್ಲ! ವಾರಣಾಸಿಗೆ ಏನೂ ಆಲ್ಲದ ಒಬ್ಬ ಕೇಜ್ರಿವಾಲ್ 209,238 ಮತ ಗಳಿಸಬಹುದಾದರೆ, 'ಕಾಂಗ್ರೆಸ್' ಎಂಬ ಲೇಬಲ್ ಇಟ್ಟುಕೊಂಡು ಪ್ರಿಯಾಂಕಾ ಅದಕ್ಕಿಂತ ಹೆಚ್ಚು ಮತ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಅಲ್ಲಗಳೆಯುವುದು ಹೇಗೆ?

ಕೊನೇ ಕ್ಷಣದಲ್ಲಿ ಟ್ವಿಸ್ಟ್
ವಾರಣಾಸಿಯಲ್ಲಿ ಕೊನೆಯ ಹಂತದಲ್ಲಿ ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 29 ಕೊನೇ ದಿನ. ಆ ದಿನ ನಾಮಪತ್ರ ಸಲ್ಲಿಕೆಗೆ ಇನ್ನೇನು ಕೆಲವೇ ಕ್ಷಣ ಬಾಕಿ ಇದೆ ಎನ್ನುವಾಗ ಕಾಂಗ್ರೆಸ್ ಪ್ರಿಯಾಂಕಾ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿಬಿಟ್ಟರೆ, ನರೇಂದ್ರ ಮೋದಿ ಅವರಿಗೆ ಬೇರೆ ಎಲ್ಲಿಂದಲೂ ಸ್ಪರ್ಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅದೇ ಕಾರಣಕ್ಕಾಗಿಯೇ ಕಾಂಗ್ರೆಸ್ ಕಾದುನೋಡುವ ತಂತ್ರದ ಮೊರೆಹೋಗಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಹಾಗೆ ಹೇಳುವುದಕ್ಕೆ ಹೋದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಿಯಾಂಕಾ ಸ್ಪರ್ಧೆಯಿಂದ ಭಯ ಪಡುವ ಅಗತ್ಯವೇನೂ ಇಲ್ಲದಿರಬಹುದು. ಸೋಲುವ ಸಾಧ್ಯತೆಗಳು ತೀರಾ ಕಡಿಮೆಯೂ ಇದ್ದಿರಬಹುದು. ಆದರೆ ತೀರಾ ಹಗುರವಾಗಿ ಪರಿಗಣಿಸುವಂತಿಲ್ಲ ಎಂಬುದೂ ಅಷ್ಟೇ ಸತ್ಯ!

ಇತಿಹಾಸ ನೆನೆದರೆ...
1984 ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಕಾಂಗ್ರೆಸ್ನ ಮಾಧವ್ ರಾವ್ ಸಿಂದಿಯಾ ಅವರ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸೋಲು ಕಂಡಿದ್ದರು! ಆಗ ಇಂದಿರಾ ಹತ್ಯೆಯ ಅನುಕಂಪದ ಅಲೆ ಇತ್ತು ಎಂಬುದು ಬೇರೆ ಮಾತು!
1984 ರಲ್ಲಿ ಪಶ್ಚಿಮ ಬಂಗಾಳದ ಜಾದವಪುರದಲ್ಲಿ ಕಮ್ಯುನಿಸ್ಟ್ ಪಕ್ಷದ ಸೋಮನಾಥ ಚಟರ್ಜಿ ಅವರನ್ನು ಆಗ ಕಾಂಗ್ರೆಸ್ ನಲ್ಲಿದ್ದ ಮಮತಾ ಬ್ಯಾನರ್ಜಿ ಸೋಲಿಸಿದ್ದರು!
2004 ರಲ್ಲಿ ಮೊಟ್ಟ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ(ಬಿಜೆಪಿ ಅಭ್ಯರ್ಥಿಯಾಗಿ) ಎಚ್ ಟಿ ಸಾಂಗ್ಲಿಯಾನ, ಕಾಂಗ್ರೆಸ್ ನ ನುರಿತ ರಾಜಕಾರಣಿ ಸಿಕೆ ಜಾಫರ್ ಷರೀಫ್ ಅವರನ್ನುಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಸೋಲಿಸಿದ್ದರು! 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಮರೀಂದರ್ ಸಿಂಗ್ ಅವರ ವಿರುದ್ಧ ಅಮೃತಸರದಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಸೋತಿದ್ದರು!
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications