ಆಳ್ವಾರ್ ಮಹಿಳೆಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ : ನರೇಂದ್ರ ಮೋದಿ ಕಿಡಿ
ಘಾಜಿಪುರ (ಉತ್ತರ ಪ್ರದೇಶ), ಮೇ 11 : ಎರಡು ವಾರಗಳ ಹಿಂದೆ ಕಾಂಗ್ರೆಸ್ ಅಧಿಕಾರವಿರುವ ಆಳ್ವಾರ್ ನಲ್ಲಿ ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಆ ಹೆಣ್ಣುಮಗಳಿಗೆ ಕಾಂಗ್ರೆಸ್ ಸರಕಾರ ನ್ಯಾಯ ದೊರಕಿಸಿಕೊಡುವ ಬದಲು ಚುನಾವಣೆ ಮುಗಿಯಲೆಂದು ಕಾಯುತ್ತಿದೆ. ಇದೇ ಕಾಂಗ್ರೆಸ್ ನ್ಯಾಯದಲ್ಲಿರುವ ಸತ್ಯ ಎಂದು ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ನಾನು ಅವಾರ್ಡ್ ವಾಪಸಿ (ಪ್ರಶಸ್ತಿ ವಾಪಸ್) ಗ್ಯಾಂಗಿಗೆ ಒಂದು ಪ್ರಶ್ನೆ ಕೇಳಬಯಸುತ್ತೇನೆ. ಅಳ್ವಾರ್ ದಲ್ಲಿ ಮಹಿಳೆಯ ಮೇಲೆ ಐದಾರು ಜನರು ಸಾಮೂಹಿಕ ಅತ್ಯಾಚಾರ ನಡೆಸಿದ್ದರೂ ನಿಮ್ಮ ಗ್ಯಾಂಗ್ ಯಾಕೆ ಸುಮ್ಮನಿದೆ? ಇಷ್ಟೊಂದು ದೊಡ್ಡ ದುರಂತ ನಡೆದಿದ್ದರೂ ಅದನ್ನು ದಮನ ಮಾಡಲಾಗುತ್ತಿದೆ ಮತ್ತು ಮೊಂಬತ್ತಿ ಹಿಡಿದು ಪ್ರತಿಭಟನೆ ಮಾಡುವವರ ಮೊಂಬತ್ತಿಯಿಂದ ಹೊಗೆ ಬರುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.
ಅಲ್ಲಿನ ಪೊಲೀಸರು ಮತ್ತು ಅಲ್ಲಿನ ಕಾಂಗ್ರೆಸ್ ಸರಕಾರ ಅತ್ಯಾಚಾರಿಗಳನ್ನು ಬಂಧಿಸುವ ಬದಲು, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದೆ. ನಮ್ಮ ಸರಕಾರ ಇಂಥ ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ನೀಡುವವರೆಗೆ ಕಾನೂನನ್ನು ಬಿಗಿಗೊಳಿಸಿದೆ. ಮಹಿಳೆಯರ ಸುರಕ್ಷೆ ಮತ್ತು ಹಿತಕ್ಕಾಗಿ ನಮ್ಮ ಸರಕಾರ ಅತ್ಯಂತ ಸಂವೇದನಶೀಲತೆಯಿಂದ ವರ್ತಿಸಿದೆ ಎಂದು ಶನಿವಾರ ವಾಗ್ದಾಳಿ ನಡೆಸಿದರು.

ದಲಿತ ಮಹಿಳೆಯ ಅತ್ಯಾಚಾರದ ಸುದ್ದಿ ಬಹಿರಂಗವಾದರೆ ಎಲ್ಲಿ ಮತಗಳ ಮೇಲೆ ಎಲ್ಲಿ ಪರಿಣಾಮ ಬೀರುವುದೋ ಎಂದು ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಸರಕಾರ ಬಾಯಿ ಮುಚ್ಚಿ ಕುಳಿತಿತ್ತು, ಕೇಸನ್ನು ದಾಖಲಿಸಿಕೊಳ್ಳದೆ ಹತ್ತಿಕ್ಕಿ ಹಾಕಲು ಯತ್ನಿಸಿತ್ತು. ಈ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ನರೇಂದ್ರ ಮೋದಿ ಅವರು ಟೀಕಾ ಪ್ರಹಾರ ಮಾಡಿದರು.
ನಾನು ಗುಜರಾತ್ ನಲ್ಲಿ ಅತ್ಯಂತ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದೆ, ಕಳೆದ 5 ವರ್ಷಗಳಿಂದ ಭಾರತದ ಪ್ರಧಾನಿಯಾಗಿದ್ದೇನೆ. ನನ್ನ ಬ್ಯಾಂಕ್ ಬ್ಯಾಲನ್ಸ್ ನೋಡಿ. ನನ್ನ ಹೆಸರಲ್ಲಿ ಯಾವುದಾದರೂ ಬಂಗ್ಲೆ ಇದೆಯಾ? ನಾನು ನನಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ಏನನ್ನೂ ಉಳಿಸಿಲ್ಲ. ನಾನೇನು ಮಾಡಿದ್ದರೂ ಅದು ಇಡೀ ದೇಶಕ್ಕಾಗಿ ಮತ್ತು ಇಲ್ಲಿನ ಜನತೆಗಾಗಿ ಎಂದು ಅವರು ನುಡಿದರು.
'ಹುವಾ ತೋ ಹುವಾ' (ಆಗಿದ್ದು ಆಗಿ ಹೋಯಿತು) - ಇದೇ ಮೂರು ಪದಗಳ ಮಂತ್ರವನ್ನು ಜಪಿಸುತ್ತಲೇ ಕಾಂಗ್ರೆಸ್ ಮತ್ತು ಅದರ ಮಿಲಾವಟಿ (ಕಲಸುಮೇಲೋಗರ) ಸ್ನೇಹಿತರು ಈ ದೇಶವನ್ನು ಆಳಿದ್ದಾರೆ. ವಿಕಾಸ ಮತ್ತು ರಾಷ್ಟ್ರದ ದೃಷ್ಟಿಯಿಂದ ನಮ್ಮ ಭಾವನೆ ಅತ್ಯಂತ ಬಲಿಷ್ಠವಾಗಿದೆ. ಈ ಕಾರಣದಿಂದಾಗಿಯೇ ದೆಹಲಿಯಲ್ಲಿ ಮತ್ತೊಮ್ಮೆ ಅತ್ಯಂತ ಮಜಬೂತಾದ ಸರಕಾರವನ್ನು ರಚಿಸಬೇಕಾಗಿದೆ. ಎಲ್ಲ ಬೂತ್ ಗಳಲ್ಲಿ ಕಮಲ ಅರಳಬೇಕು ಎಂದು ಅವರು ಸಾರ್ವಜನಿಕ ಸಭೆಯಲ್ಲಿ ಜನತೆಗೆ ಕರೆ ನೀಡಿದರು.
ಈ ಸ್ವಾರ್ಥಿಗಳ ಮನದಲ್ಲೇನಿದೆ ಎಂದು ಇಡೀ ದೇಶದ ಜನ ಈಗಾಗಲೆ ಗುರುತಿಸಿದ್ದಾರೆ. ಅವರ ಬಳಿ ಇರುವುದು ದೇಶದ ಪ್ರಧಾನಿಯಾಗಬೇಕೆಂಬ ಕನಸು ಮಾತ್ರ. ದೇಶದ ಅಭಿವೃದ್ಧಿಗಾಗಿ ಅವರ ಬಳಿ ಯಾವುದೇ ದೃಷ್ಟಿಕೋನವೇ ಇಲ್ಲ. ಇವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್, ಸಪ ಮತ್ತು ಬಸಪ ಪಕ್ಷಗಳು ಬರೀ ತಮ್ಮ ಕುಟುಂಬಗಳ ವಿಕಾರದಲ್ಲಿ ತೊಡಗಿದ್ದಾರೆ ಎಂದು ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದರು.
ಇವರು ನನ್ನ ಮೇಲೆ ಎಷ್ಟಾದರೂ ಕೆಟ್ಟ ಪದಗಳನ್ನು ಬಳಸಿ ಬೈಯಲಿ, ನನ್ನ ಧ್ಯಾನ ಮಾತ್ರ ದೇಶದ ಅಭಿವೃದ್ಧಿಯ ಮೇಲೆಯೇ ಇರುತ್ತದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ನನ್ನ ಜಾತಿ ಹಿಡಿದುಕೊಂಡು ಹಲ್ಲೆ ಮಾಡುತ್ತಿದ್ದಾರೆ. ನಾನು ಹಿಂದುಳಿದ ಜಾತಿಯಲ್ಲೇ ಹುಟ್ಟಿರಲಿ, ಆದರೆ, ದೇಶದ ಎಲ್ಲ ಹಿಂದುಳಿದ ಜಾತಿ, ಬಡವರನ್ನು ಮೇಲೆತ್ತಲು ದಿನರಾತ್ರಿ ಕೆಲಸ ಮಾಡುತ್ತಲೇ ಇರುತ್ತೇನೆ. ದೇಶದ ಸ್ವಾತಂತ್ರ್ಯದ ನಂತರ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗಾಗಿ ಒಂದು ಸರಕಾರ ಇಷ್ಟೊಂದು ಯೋಜನೆಗಳನ್ನು ನೀಡಿದೆ.












Click it and Unblock the Notifications