7 ಬಂಡಾಯ ಶಾಸಕರ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಗೆ ಬೆಂಬಲ ಘೋಷಿಸಿದ ಮಾಯಾವತಿ
ಲಕ್ನೋ, ಅಕ್ಟೋಬರ್ 29: ಸಮಾಜವಾದಿ ಪಕ್ಷದ ಜತೆಗೆ ಕೈಜೋಡಿಸಲು ಮುಂದಾದ ಏಳು ಮಂದಿ ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ಬಿಎಸ್ಪಿ ನಾಯಕಿ ಮಾಯಾವತಿ, ಮುಂಬರುವ ಉತ್ತರ ಪ್ರದೇಶ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ರಾಜ್ಯಸಭೆ ಚುನಾವಣೆಗೆ ತನ್ನ ಅಧಿಕೃತ ಅಭ್ಯರ್ಥಿಯಾಗಿ ರಾಮ್ಜಿ ಗೌತಮ್ ಅವರ ನಾಮನಿರ್ದೇಶನ ಮಾಡಿರುವುದನ್ನು ವಿರೋಧಿ ಬಹುಜನ ಸಮಾಜಪಕ್ಷದ ಏಳು ಮಂದಿ ಶಾಸಕರು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರು. ಚೌಧರಿ ಅಸ್ಲಾಂ ಅಲಿ, ಹಕೀಮ್ ಲಾಲ್ ಬಿಂದ್, ಮೊಹಮ್ಮದ್ ಮುಜ್ತಾಬಾ ಸಿದ್ದಿಕಿ, ಅಸ್ಲಾಂ ರೈನಿ, ಸುಷ್ಮಾ ಪಟೇಲ್, ಹರಗೋವಿಂದ್ ಭಾರ್ಗವ ಮತ್ತು ಬಂದನಾ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದ ಬಂಡಾಯ ಶಾಸಕರು, ಎಸ್ಪಿ ಸೇರ್ಪಡೆಯ ಸುಳಿವು ನೀಡಿದ್ದರು. ಬಿಎಸ್ಪಿ ರಾಷ್ಟ್ರೀಯ ಸಂಚಾಲಕ ಮತ್ತು ಬಿಹಾರ ಉಸ್ತುವಾರಿ ರಾಮ್ಜಿ ಗೌತಮ್ ಅವರ ರಾಜ್ಯಸಭೆ ಚುನಾವಣೆಯ ನಾಮನಿರ್ದೇಶನ ಬೆಂಬಲಿಸಿ ಹಾಕಿರುವ ತಮ್ಮ ಸಹಿಯು ನಕಲು ಮಾಡಲಾಗಿದೆ ಎಂದು ನಾಲ್ವರು ಶಾಸಕರು ಅಫಿಡವಿಟ್ ಸಲ್ಲಿಸಿದ್ದಾರೆ. ಆದರೆ ನವೆಂಬರ್ 9ರಂದು ಉತ್ತರ ಪ್ರದೇಶದಲ್ಲಿ ನಡೆಯುವ ಹತ್ತು ಸೀಟುಗಳ ಚುನಾವಣೆಗೆ ಬಿಎಸ್ಪಿ ಅಭ್ಯರ್ಥಿಯಾಗಿ ರಾಮ್ಜಿ ನಾಮಪತ್ರವನ್ನು ಚುನಾವಣಾ ಅಧಿಕಾರಿ ಅಂಗೀಕರಿಸಿದ್ದಾರೆ.

'ಸಮಾಜವಾದಿ ಪಕ್ಷದ ಎರಡನೆಯ ಅಭ್ಯರ್ಥಿಯ ವಿರುದ್ಧ ಪ್ರಾಬಲ್ಯ ಮೆರೆಯುವ ಯಾವುದೇ ಪಕ್ಷದ ಅಭ್ಯರ್ಥಿಯು ಬಿಎಸ್ಪಿ ಶಾಸಕರ ಮತ ಪಡೆದುಕೊಳ್ಳಲಿದ್ದಾರೆ' ಎಂದು ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಮಾಯಾವತಿ ಪರೋಕ್ಷವಾಗಿ ತಿಳಿಸಿದ್ದಾರೆ.












Click it and Unblock the Notifications