ಸ್ವಚ್ಛಗಂಗೆಯಲ್ಲಿ ಪ್ರಿಯಾಂಕಾ ಗಾಂಧಿ ದೋಣಿ ವಿಹಾರ: ಯೋಗಿ ವ್ಯಂಗ್ಯ!
ಲಕ್ನೋ, ಮಾರ್ಚ್ 19: "ಪ್ರಿಯಾಂಕಾ ಜೀ, ಸ್ವಚ್ಛಗಂಗೆಯಲ್ಲಿ ದೋಣಿ ವಿಹಾರ ಮಾಡಿದ್ದಾರೆ, ಒಳ್ಳೆಯದು. ಅವರು ಪ್ರಯಾಗರಾಜದಿಂದ ವಾರಣಾಸಿಗೆ ಬೋಟ್ ರೈಡ್ ಮೂಲಕವೇ ಹೋಗಿದ್ದು ಹೇಳಿದ್ದೆ. ಒಳ್ಳೆಯದಾಯಿತು. ಗಂಗೆಯನ್ನು ಸ್ವಚ್ಛಗೊಳಿಸುವ ನರೇಂದ್ರ ಮೋದಿ ಅವರ ಯೋಜನೆ ಎಷ್ಟು ಸಾಕಾರಗೊಂಡಿದೆ ಎಂಬುದು ಅವರಿಗೆ ಈಗ ಅರ್ಥವಾಗಿರಬೇಕು" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತ್ಯುತ್ತರ ನೀಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮೂರು ದಿನಗಳ ದೋಣಿ ವಿಹಾರ ಮಾಡುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸಿದ್ದರು. "ರಿಪೋರ್ಟ್ ಕಾರ್ಡ್, ಪ್ರೊಮೋಶನ್ ಗಳನ್ನು ನೋಡಿದರೆ ಯೋಗಿ ಸರ್ಕಾರ ಚೆನ್ನಾಗಿ ಕಾಣಬಹುದು. ಆದರೆ ವಾಸ್ತವ ಬೇರೆ. ನಾನು ಪ್ರತಿದಿನವೂ ಜನರನ್ನು ಭೇಟಿ ಮಾಡುತ್ತೇನೆ. ಇಲ್ಲಿನ ಜನರು ಸರ್ಕಾರದ ಬಗ್ಗೆ ಆಕ್ರೋಶ ಹೊಂದಿದ್ದಾರೆ, ಅವರ ಮನಸ್ಸಿನಲ್ಲಿ ವಿಷಾದವಿದೆ" ಎಂದಿದ್ದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಯೋಗಿ ಆದಿತ್ಯನಾಥ್, ಪ್ರಿಯಾಂಕಾ ಗಾಂಧಿ ಅವರು ಸ್ವಚ್ಛ ಗಂಗೆಯಲ್ಲಿ ಬೋಟ್ ರೈಡ್ ಮಾಡಿದ್ದಾರೆ. ಉತ್ತರ ಪ್ರದೇಶವನ್ನು ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸೇ ಹೆಚ್ಚು ಬಾರಿ ಆಳಿದ್ದರೂ, ಅವರಿಗೆ 70 ವರ್ಷಗಳಿಂದ ಸಾಧ್ಯವಾಗದ್ದನ್ನು ಐದು ವರ್ಷಗಳಲ್ಲಿ ಮೋದಿ ಮಾಡಿದ್ದಾರೆ ಎಂದು ಯೋಗಿ ಟಾಂಗ್ ನೀಡಿದರು.

ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿದ್ದು, 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 70 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ ದಾಖಲೆ ಬರೆದಿತ್ತು. ಕಾಂಗ್ರೆಸ್ ಅಮೇಥಿ(ರಾಹುಲ್ ಗಾಂಧಿ) ಮತ್ತು ರಾಯ್ ಬರೇಲಿ(ಸೋನಿಯಾ ಗಾಂಧಿ)ಯಲ್ಲಿ ಮಾತ್ರವೇ ಜಯ ಸಾಧಿಸಿತ್ತು.
ಮೂರು ದಿನಗಳ ಪ್ರಯಾಗ್ ರಾಜ್ ಪ್ರವಾಸದಲ್ಲಿರುವ ಪ್ರಿಯಾಂಕಾ ಗಾಂಧಿ, ದೋಣಿ, ಕಾಲ್ನಡಿಗೆ ಮತ್ತು ಕಾರಿನ ಮೂಲಕ ಒಟ್ಟು 140 ಕಿ.ಮೀ. ಸಾಗಲಿದ್ದಾರೆ.
"ಪ್ರಿಯಾಂಕಾ ಗಾಂಧಿ ಅವರು ಎಷ್ಟು ಬಾರಿ ಬೇಕಾದರೂ ದೋಣಿ ವಿಹಾರ ಮಾಡಬಹುದು. ಎಷ್ಟು ದೇವಾಲಯಗಳನ್ನು ಬೇಕಾದರೂ ಸುತ್ತಬಹುದು. ಆದರೆ ಆಕೆಗೆ ಒಂದು ವಿಷಯ ಗೊತ್ತಿರಲಿ. ಉತ್ತರ ಪ್ರದೇಶದ ಜನರು ಯಾರನ್ನು ಗೆಲ್ಲಿಸಬೇಕು ಎಂದು ಈಗಾಗಲೇ ತೀರ್ಮಾನಿಸಿದ್ದಾರೆ" ಎಂದು ಎಂದು ಇತ್ತೀಚೆಗಷ್ಟೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದರು.












Click it and Unblock the Notifications