ಹೈಕೋರ್ಟ್ ಅಣತಿಯಂತೆ ನಡೆಯಲಿದೆ ಯುವಜೋಡಿಯ ವಿವಾದಗ್ರಸ್ತ ಮದುವೆ
ಲಖನೌ, ಜುಲೈ 13 : ನನಗೆ ಮತ್ತು ನನ್ನ ಸಂಗಾತಿಗೆ ಹೆಚ್ಚೂಕಡಿಮೆಯಾದರೆ ಅದಕ್ಕೆ ನನ್ನ ಅಪ್ಪನೇ ಕಾರಣ ಎಂದು ಹೇಳಿಕೆ ನೀಡಿದ್ದ, ಸಾಕ್ಷಿ ಮಿಶ್ರಾ (ಉತ್ತರ ಪ್ರದೇಶದ ಎಂಎಲ್ಎ ಮಗಳು) ಮತ್ತು ಆಕೆಯ ಗಂಡ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದು, ಅವರ ಮದುವೆ ಮತ್ತೊಮ್ಮೆ ಕೋರ್ಟ್ ನಿರ್ದೇಶನದಲ್ಲಿಯೇ ನಡೆಯುವ ನಿರೀಕ್ಷೆಯಿದೆ.
ಬ್ರಾಹ್ಮಣ ಕುಟುಂಬದವಳಾದ ಸಾಕ್ಷಿ ಮಿಶ್ರಾ (23) ಮತ್ತು ದಲಿತ ವರ್ಗಕ್ಕೆ ಸೇರಿದ ಅಜಿತೇಶ್ ಕುಮಾರ್ (29) ಅವರು ಮನೆಯಿಂದ ಓಡಿಹೋಗಿ ಮದುವೆಯಾಗಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಮದುವೆಯನ್ನು ಮೇಲ್ಜಾತಿಗೆ ಸೇರಿದ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಅವರ ಕುಟುಂಬ ಒಪ್ಪುತ್ತಿಲ್ಲ. ಮಿಶ್ರಾ ಕುಟುಂಬದಲ್ಲಿ ಯುವಜೋಡಿಗಳು ಭಾರೀ ಪ್ರತಿರೋಧ ಎದುರಿಸುತ್ತಿದ್ದಾರೆ.
ಈ ಕಾರಣಕ್ಕಾಗಿಯೇ ಕೆಲ ದಿನಗಳ ಹಿಂದೆ ವಿಡಿಯೋವೊಂದನ್ನು ಮಾಡಿದ್ದ ಸಾಕ್ಷಿ ಮಿಶ್ರಾ, ನಾನು ಮದುವೆಯಾಗುತ್ತಿರುವ ಅಜಿತೇಶ್ ಕುಮಾರ್ ಕುಟುಂಬದವರ ಹಿನ್ನೆಲೆ ಚೆನ್ನಾಗಿದೆ. ನಾನು ಅಜಿತೇಶ್ ಅವರನ್ನು ಮದುವೆಯಾಗಿ ಸುಖದಿಂದಿರುತ್ತೇನೆ ಎಂಬ ವಿಶ್ವಾಸವಿದೆ. ದಯವಿಟ್ಟು ನಮ್ಮನ್ನು ಅಗಲಿಸಲು ಯತ್ನಿಸಬೇಡಿ. ನಮಗೇನಾದರೂ ಹೆಚ್ಚೂಕಡಿಮೆಯಾದರೆ ಅದಕ್ಕೆ ನೀವೇ ಹೊಣೆಯಾಗುತ್ತೀರಿ ಪಪ್ಪಾ ಎಂದು ಹೇಳಿದ್ದರು.

ಅಂತರ್ಜಾತೀಯ ವಿವಾಹದ ಬಿರುಗಾಳಿ ಎಬ್ಬಿಸಿರುವ ಈ ಹೈ ಪ್ರೊಫೈಲ್ ಕುಟುಂಬದ ಮದುವೆ ಇದೀಗ ಅಲಹಾಬಾದ್ ಕೋರ್ಟ್ ಮೆಟ್ಟಿಲೇರಿದೆ. ಜೋಡಿಗಳಿಬ್ಬರೂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಜುಲೈ 15ರಂದು, ಸೋಮವಾರ ನ್ಯಾಯಾಲಯದ ಮುಂದೆ ನ್ಯಾಯ ಬೇಡಿ ನಿಲ್ಲಲಿದ್ದಾರೆ. ಅದರಂತೆ, ಅವರಿಬ್ಬರೂ ಮತ್ತೊಮ್ಮೆ ಜುಲೈ 16ರಂದು ರಿಜಿಸ್ಟರ್ಡ್ ಮದುವೆಯಾಗುವ ಸಾಧ್ಯತೆಯಿದೆ.
ಮತ್ತೊಮ್ಮೆ ಏಕೆಂದರೆ, ಅವರಿಬ್ಬರೂ ಪ್ರಯಾಗ್ ರಾಜ್ ನಲ್ಲಿರುವ ರಾಮ ಜಾನಕಿ ಮಂದಿರದಲ್ಲಿ ಮದುವೆಯಾಗಿದ್ದರು. ಆದರೆ, ದೇವರು ಕೊಟ್ಟರೂ ಪೂಜಾರಿ ಕೊಡ ಎಂಬ ಗಾದೆಯಂತೆ, ದೇವರು ಅವರಿಬ್ಬರಿಗೂ ಆಶೀರ್ವಾದ ಮಾಡಿದ್ದರೂ, ದೇವಸ್ಥಾನದ ಅರ್ಚಕ ಅವರ ಮದುವೆ ಮಂದಿರದಲ್ಲಿ ನಡೆದಿಲ್ಲ, ಅವರ ಬಳಿಯಿದ್ದ ಸರ್ಟಿಫಿಕೇಟ್ ಕೂಡ ನಕಲಿ ಎಂದು ಹೇಳಿಕೆ ನೀಡಿದ್ದಾರೆ.
ಜುಲೈ 3ರಂದೇ ಮನೆಯಿಂದ ಹೊರಬಿದ್ದಿರುವ ಸಾಕ್ಷಿ ಮತ್ತು ಅಜಿತೇಶ್ ಅವರು ಶುಕ್ರವಾರ ಸುದ್ದಿ ವಾಹಿನಿಯೊಂದರಲ್ಲಿ ಕಾಣಿಸಿಕೊಂಡು, ಬರೇಲಿಯ ಶಾಸಕ ರಾಜೇಶ್ ಮಿಶ್ರಾ ಅವರು ವಿರುದ್ಧ ಆರೋಪ ಹೊರಿಸಿದ್ದಾರೆ. ತಮ್ಮದು ಪ್ರತ್ಯೇಕ ಜಾತಿ ಇರುವುದರಿಂದಲೇ ಅವರು ಮದುವೆಯನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ದಂಪತಿಗಳು ಮಾತ್ರವಲ್ಲದೆ, ಹುಡುಗನ ಕುಟುಂಬದವರು ಕೂಡ ಯುವ ಜೋಡಿಗೆ ಪೊಲೀಸ್ ಭದ್ರತೆ ನೀಡಬೇಕೆಂದು ಆಗ್ರಹಿಸಿದ್ದಾರೆ.












Click it and Unblock the Notifications