ಬಿಜೆಪಿ ಭಿನ್ನಾಭಿಪ್ರಾಯ: ಯುಪಿ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಪ್ರಧಾನಿ ಸಹಾಯಕ
ಲಕ್ನೋ, ಜೂ. 04: ಉತ್ತರಪ್ರದೇಶದಲ್ಲಿ ನಾಯಕತ್ವದ ಯಾವುದೇ ಬದಲಾವಣೆಯನ್ನು ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸರ್ಕಾರದ ಕೋವಿಡ್ ನಿರ್ವಹಣೆಗೆ ತೊಂದರೆಯಾಗಬಹುದು ಎಂಬ ಊಹಾಪೋಹಗಳನ್ನು ಬಿಜೆಪಿಯು ತಳ್ಳಿಹಾಕಿದೆ. ಆದರೆ ಯುಪಿ ಚುನಾವಣೆಗೂ ಒಂದು ವರ್ಷಕ್ಕಿಂತ ಮುನ್ನವೇ ಸಂಪುಟ ಪುನರ್ ರಚನೆ ಸಾಧ್ಯವಿದೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಆಪ್ತ ಸಹಾಯಕರಲ್ಲಿ ಒಬ್ಬರಾದ ಮಾಜಿ ಅಧಿಕಾರಿ ಎ.ಕೆ.ಶರ್ಮಾ ಮುಂದಿನ ಉತ್ತರಪ್ರದೇಶ ಸರ್ಕಾರದಲ್ಲಿ ಪ್ರಮುಖ ಪಾತ್ರ ನೀಡಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಅಧ್ಯಕ್ಷರಾಗಿ ಸ್ವತಂತ್ರ ದೇವ್ ಸಿಂಗ್ ನೇತೃತ್ವದ ಲ್ಲಿ ಬಿಜೆಪಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಮೂಲಗಳು ತಿಳಿಸಿದೆ. ಯುಪಿ ರಾಜಧಾನಿ ಲಕ್ನೋದಲ್ಲಿ ರಾಷ್ಟ್ರೀಯ ಬಿಜೆಪಿ ನಾಯಕರು ಈ ವಾರ ಎರಡು ದಿನಗಳ ಪರಿಶೀಲನಾ ಸಭೆ ನಡೆಸಿ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶ ಸಂಪುಟ ವಿಸ್ತರಣೆ ಸಾಧ್ಯತೆ
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಬಿಜೆಪಿಯ ಸ್ಟಾರ್ ಪ್ರಚಾರಕ, ಉನ್ನತ ನಾಯಕ ಯೋಗಿ ಆದಿತ್ಯನಾಥ್ ಬದಲಾವಣೆ ಸಾಧ್ಯತೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಈ ತಿಂಗಳು ಸಂಪುಟ ವಿಸ್ತರಣೆಯ ಸಾಧ್ಯತೆಯಿದೆ. ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಮಂತ್ರಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಬಿಜೆಪಿ ಮುಖಂಡರ ನಿರ್ಧಾರ
ಬಿಜೆಪಿಯ ಹಿರಿಯ ಮುಖಂಡರಾದ ಬಿ.ಎಲ್.ಸಂತೋಷ್ ಮತ್ತು ರಾಧಾ ಮೋಹನ್ ಸಿಂಗ್ರ ಪರಿಶೀಲನೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಹಿರಿಯ ಮುಖಂಡರ ತಂಡವು ಉತ್ತರಪ್ರದೇಶದಲ್ಲಿ ಹಲವು ಬಾರಿ ಸಭೆಗಳನ್ನು ನಡೆಸಿದ್ದವು. ಹಾಗೆಯೇ ತಂಡವು ಮುಖ್ಯಮಂತ್ರಿ, ಪಕ್ಷದ ಹಿರಿಯ ಮುಖಂಡರು, ಮಂತ್ರಿಗಳು ಮತ್ತು ಶಾಸಕರನ್ನು ಭೇಟಿ ಮಾಡಿ ಪ್ರತಿಕ್ರಿಯೆಯನ್ನು ಕೇಳಿದ್ದವು.

ಕೋವಿಡ್ ನಿರ್ವಹಣೆ, ಪಂಚಾಯತ್ ಚುನಾವಣೆ ಬಗ್ಗೆ ಚರ್ಚೆ
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಗಳಲ್ಲಿ ಏನು ತಪ್ಪುಗಳು ನಡೆದಿದೆ ಎಂದು ತಂಡವು ಸಭೆ ನಡೆಸಿ ನಿರ್ಣಯಿಸಿದೆ. ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ತನ್ನ ಭದ್ರಕೋಟೆಗಳಲ್ಲಿ ದೊಡ್ಡ ನಷ್ಟವಾಗಿತ್ತು. ಈ ಹಿನ್ನೆಲೆ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಕೋವಿಡ್ ನಿರ್ವಹಣೆ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಗಳ ವಿಚಾರದಲ್ಲಿ ಹಿರಿಯರ ಮುಖಂಡರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದ್ದರೂ, ಈ ಎಲ್ಲಾ ಸಭೆಗಳ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಬಿ.ಎಲ್. ಸಂತೋಷ್, ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಉತ್ತರಪ್ರದೇಶದ ಕೋವಿಡ್ ನಿರ್ವಹಣೆಯನ್ನು ಹಾಡಿ ಹೊಗಳಿದ್ದರು.

ಆರ್ಎಸ್ಎಸ್ ಆಜ್ಞೆ ಮೇರೆಗೆ ಉತ್ತರ ಪ್ರದೇಶಕ್ಕೆ ಧಾವಿಸಿದ ದೆಹಲಿ ನಾಯಕರು
ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಸಂಘ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ನ ಆಜ್ಞೆಯಂತೆ ದೆಹಲಿ ನಾಯಕರು ಉತ್ತರ ಪ್ರದೇಶಕ್ಕೆ ಧಾವಿಸಿದ್ದರು ಎಂದು ಹೇಳಲಾಗಿದೆ. ರಾಜ್ಯದಲ್ಲಿ ಚುನಾವಣೆಗೆ ಇನ್ನು ವರ್ಷವಿರುವಾಗಲೇ ಶಾಸಕರು ಸೇರಿದಂತೆ ಹಲವಾರು ಬಿಜೆಪಿ ನಾಯಕರು ಉತ್ತರಪ್ರದೇಶ ಸರ್ಕಾರದ ವಿರುದ್ದ ಮಾಡಿರುವ ಟೀಕೆ ಮುಂದಿನ ಚುನಾವಣೆಗೆ ಪರಿಣಾಮ ಬೀರುವ ಆತಂಕ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ಆರ್ಎಸ್ಎಸ್ ನಾಯಕರು ಕೂಡಾ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ವರದಿಯಾಗಿದೆ.

ಉತ್ತರಪ್ರದೇಶ ಸರ್ಕಾರದಲ್ಲಿ ಮೋದಿ ಆಪ್ತ ಸಹಾಯಕರ ಪ್ರಮುಖ ಪಾತ್ರ
ಈಗಾಗಲೇ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬಂತೆ ಸೂಚಿಸುವ ಹೇಳಿಕೆಗಳನ್ನು ಬಿಜೆಪಿಯ ಹಿರಿಯ ನಾಯಕರುಗಳು ನೀಡಿದ್ದಾರೆ. ಹಾಗೆಯೇ ಕೋವಿಡ್ ನಿರ್ವಹಣೆ ವಿಚಾರದಲ್ಲಿ ಉತ್ತರಪ್ರದೇಶ ಬಿಜೆಪಿ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ. ಆದರೆ ಇವೆಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಆಪ್ತ ಸಹಾಯಕರಲ್ಲಿ ಒಬ್ಬರಾದ ಮಾಜಿ ಅಧಿಕಾರಿ ಎ.ಕೆ.ಶರ್ಮಾ ಮುಂದಿನ ಉತ್ತರಪ್ರದೇಶ ಸರ್ಕಾರದಲ್ಲಿ ಪ್ರಮುಖ ಪಾತ್ರ ನೀಡಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications