ಯುಪಿ: ಆನೆ ಮೇಲೆ ಹೊರಟವರು ಎಲ್ಲಿಯಾದರೂ ತಲುಪಬಹುದು ಎಂದ ಅಖಿಲೇಶ್ ಯಾದವ್
ಲಕ್ನೋ, ಫೆಬ್ರವರಿ 22: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಂತರದಲ್ಲಿ ಬಹುಜನ ಸಮಾಜವಾದಿ ಪಕ್ಷವು ಭಾರತೀಯ ಜನತಾ ಪಕ್ಷದ ಕಡೆಗೆ ಹೊರಳಿಕೊಳ್ಳಬಹುದು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಸಾಂದಿಲಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣೆ ನಂತರ ಬಿಜೆಪಿ ಮತ್ತು ಬಿಎಸ್ಪಿ ಒಂದಾಗುವ ಸಾಧ್ಯತೆಗಳಿದ್ದು ಸಾರ್ವಜನಿಕರು ತಮ್ಮ ಮತಗಳನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದು ಕರೆ ನೀಡಿದ್ದಾರೆ.
2022ರ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಅಖಿಲೇಶ್ ಯಾದವ್ ಅವರು, ಬಹುಜನ ಸಮಾಜವಾದಿ ಪಕ್ಷವು ಚುನಾವಣೆಯ ನಂತರ ಕೇಸರಿ ಪಡೆಯ ಪರವಾಗಿರಬಹುದು ಎಂದು ಹೇಳಿದ್ದಾರೆ.

ಆನೆ ಮೇಲೆ ಹೊರಟವರು ಎಲ್ಲಿ ಬೇಕಾದರೂ ಹೋಗಬಹುದು:
ಬಹುಜನ ಸಮಾಜವಾದಿ ಪಕ್ಷವನ್ನು ಪರೋಕ್ಷವಾಗಿ ಉಲ್ಲೇಖಿಸಿ ಅಖಿಲೇಶ್ ಯಾದವ್, "ಆನೆಯ ಮೇಲೆ ಸವಾರಿ ಮಾಡುವವರು ಎಲ್ಲಿ ಬೇಕಾದರೂ ಹೋಗಬಹುದು. ಅದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸುತ್ತೇವೆ. ಅವರ ಆಪ್ತರು ಈಗಾಗಲೇ ಬಿಜೆಪಿಯಲ್ಲಿದ್ದಾರೆ. ಎಸ್ಪಿ ಮೈತ್ರಿಕೂಟವು ಈ ಬಾರಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಎಸ್ಪಿ ಸ್ಪದ್ಧೆಯಲ್ಲೇ ಇಲ್ಲ:
"ಉತ್ತರ ಪ್ರದೇಶ ಚುನಾವಣೆ ಅಖಾಡದಲ್ಲಿ ಈ ಬಾರಿ ಬಹುಜನ ಸಮಾಜವಾದಿ ಪಕ್ಷವು ಸ್ಪರ್ಧೆಯಲ್ಲಿದೆ ಎಂಬುದೇ ಗೊತ್ತಾಗುತ್ತಿಲ್ಲ. ಇನ್ನು ಸರ್ಕಾರ ರಚಿಸುವುದು ದೂರದ ಮಾತಾಗುತ್ತದೆ. ಕಾಂಗ್ರೆಸ್ ಪರಿಸ್ಥಿತಿಯೂ ಬಹುಪಾಲು ಅದೇ ರೀತಿಯಾಗಿದೆ. ಇಲ್ಲಿ ಹೋರಾಟ ನೇರವಾಗಿ ಮತ್ತು ಸ್ಪಷ್ಟವಾಗಿದೆ. ಜನರ ಜೊತೆಗೆ ಸಮಾಜವಾದಿ ಪಕ್ಷವಿದೆ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.












Click it and Unblock the Notifications