ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಮುಖಂಡ ಮತ್ತು ಸಂಬಂಧಿಯ ಬರ್ಬರ ಹತ್ಯೆ
ಬಿಜ್ನೋರ್, ಮೇ 29: ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಬಹುಜನ ಸಮಾಜ ಪಕ್ಷದ ನಾಯಕ ಮತ್ತು ಆತನ ಸೋದರ ಸಂಬಂಧಿಯನ್ನು ಗುಂಡಿಕ್ಕಿ ಕೊಲೆಗೈದ ಘಟನೆ ನಡೆದಿದೆ.
55 ವರ್ಷ ವಯಸ್ಸಿನ ಬಿಎಸ್ಪಿ ನಾಯಕ ಹಾಜಿ ಆಶಾನ್ ಮತ್ತು ಆತನ ಸೋದರ ಸಂಬಂಧಿ ಶಬಾದ್ ಎಂಬುವವರು ತಮ್ಮ ಕಚೇರಿಯಲ್ಲಿದ್ದ ಸಮಯದಲ್ಲಿ ಕಚೇರಿಗೆ ನುಗ್ಗಿದ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ತೀವ್ರ ರಕ್ತಸ್ರಾವದಿಂದಾಗಿ ಇಬ್ಬರೂ ಸ್ಥಳದಲ್ಲೇ ಮೃತರಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಇದರಲ್ಲಿ ಯಾವುದೇ ರೀತಿಯ ವೈಯಕ್ತಿಕ ದ್ವೇಷದ ಕುರಿತು ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ. ರಾಜಕೀಯ ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದ್ದು, ಆರೋಪಿಗಳನ್ನು ಇದುವರೆಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಮೇ 23 ರಂದು ಚುನಾವಣಾ ಫಲಿತಾಂಶ ಬಿಡುಗಡೆಯಾದ ನಂತರ ನಡೆದ ಮೂರನೇ ದಾಳಿ ಇದಾಗಿದೆ. ಅಮೇಥಿ ಸಂಸದೆ ಸ್ಮೃತಿ ಇರಾನಿ ಅವರ ಆಪ್ತರೊಬ್ಬರನ್ನು ಭಾನುವಾರ ಅಮೇಥಿಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಸೋಮವಾರ ಸಮಾಜವಾದಿ ಪಕ್ಷದ ಮುಖಂಡ ಕಮಲೇಶ್ ಮಾಲ್ಮಿಕಿ ಎಂಬುವವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.












Click it and Unblock the Notifications