ಜಲಿಯನ್ ವಾಲಾಬಾಗ್ ಹತ್ಯಾಕಾಂಡ: ಮತ್ತೆ 'ವಿಷಾದ' ವ್ಯಕ್ತಪಡಿಸಿದ ಬ್ರಿಟನ್
ಲಂಡನ್, ಮೇ 9: ಜಲಿಯನ್ ವಾಲಾಬಾಗ್ ಭೀಕರ ಹತ್ಯಾಕಾಂಡಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿಯೂ ಘಟನೆ ಕುರಿತು ಭಾರತಕ್ಕೆ ಕ್ಷಮೆ ಯಾಚಿಸದ ಬ್ರಿಟನ್, ಮತ್ತೊಮ್ಮೆ ವಿಷಾದ ವ್ಯಕ್ತಪಡಿಸಿದೆ.
ಅಮೃತಸರದ ಜಲಿಯನ್ ವಾಲಾಬಾಗ್ನಲ್ಲಿ ಸಾವಿರಾರು ಮಂದಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಘಟನೆ ಬ್ರಿಟಿಷ್ ಭಾರತದ ಇತಿಹಾಸದಲ್ಲಿ 'ನಾಚಿಕೆಗೇಡಿನ ಗಾಯ' ಎಂದಿರುವ ಬ್ರಿಟನ್ ಪ್ರಧಾನಿ ಥೆರೆಸಾ ಮೇ, ಈ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತಿರುವುದಾಗಿ ಪುನರುಚ್ಚರಿಸಿದ್ದಾರೆ.
ಭಾರತೀಯ ಜನಸಮೂಹವನ್ನು ಉದ್ದೇಶಿಸಿದ ಬುಧವಾರ ಮಾತನಾಡಿದ ಅವರು, 'ಅಂದು ನಡೆದ ಘಟನೆಗೆ ಮತ್ತು ಅನೇಕ ಜನರಿಗೆ ಉಂಟಾದ ನೋವಿಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಆ ದಿನ ಏನು ನಡೆಯಿತು ಎಂಬುದನ್ನು ಕೇಳಿದವರು ಯಾರೂ ನೋವಿಗೆ ಒಳಗಾಗದೆ ಇರಲಾರರು. ನೂರು ವರ್ಷದ ಹಿಂದೆ ಆ ಉದ್ಯಾನದೊಳಗೆ ಏನಾಯಿತು ಎಂದು ಈಗ ಭೇಟಿ ನೀಡಿದವರು ಖಂಡಿತವಾಗಿಯೂ ಊಹಿಸಲು ಸಾಧ್ಯವಿಲ್ಲ' ಎಂದರು.

'ಅದು ನಮ್ಮ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಘಟನೆಗಳಲ್ಲಿ ಒಂದು' ಎಂದು ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಎಚ್ ಎಚ್ ಅಸ್ಕಿತ್ ವರ್ಣಿಸಿದ್ದರು ಎಂದು ಹೇಳಿದರು.
ಸಾವಿರಾರು ಭಾರತೀಯರ ಜೀವವನ್ನು ಬಲಿತೆಗೆದುಕೊಂಡ ಭೀಕರ ಹತ್ಯಾಕಾಂಡದ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಬ್ರಿಟಿಷ್ ಸಂಸತ್ನ ಒಂದು ವರ್ಗ ಹಾಗೂ ಸಿಖ್ ಸಂಘಟನೆಗಳು ಒತ್ತಾಯಿಸಿದ್ದವು. ಆದರೆ, ಥೆರೆಸಾ ಮೇ ಏಪ್ರಿಲ್ 10ರಂದು ವಿಷಾದ ವ್ಯಕ್ತಪಡಿಸಿದ್ದರು. ಈಗಲೂ ವಿಷಾದ ವ್ಯಕ್ತಪಡಿಸಿದರೇ ವಿನಾ ಕ್ಷಮೆ ಯಾಚಿಸಲಿಲ್ಲ.












Click it and Unblock the Notifications