Stories of strength; ಕೋವಿಡ್ ಗೆದ್ದ ಯುವಕನಿಂದ ಸೋಂಕಿತರ ಸೇವೆ
ಕೋವಿಡ್ ಸೋಂಕು ತಗುಲಿ ಗುಣಮುಖವಾದರೆ ಮನೆಯಲ್ಲಿಯೇ ಇರಲು ಬಯಸುವವರು ಹೆಚ್ಚು. ಆದರೆ ಇಲ್ಲೊಬ್ಬ ಯುವಕ ಕೊರೊನಾ ಸೋಂಕು ಗೆದ್ದ ಮೇಲೆ ಸ್ವಯಂ ಪ್ರೇರಣೆಯಿಂದ ಕೋವಿಡ್ ಆಸ್ಪತ್ರೆಯಲ್ಲಿ ಸೇವೆಯನ್ನು ಮಾಡುತ್ತಾ ಸೋಂಕಿತರಿಗೆ ಧೈರ್ಯ ತುಂಬುತ್ತಿದ್ದಾರೆ.
ಕೊಪ್ಪಳದ ಗವಿಶ್ರೀ ನಗರದ ನಿವಾಸಿಯಾದ ಮಹೇಶ ಸಾಲಿಮಠ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಕೋವಿಡ್ ಸೋಂಕು ತಗುಲಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಕೊಪ್ಪಳಕ್ಕೆ ಆಗಮಿಸಿದ್ದರು. ಬಳಿಕ ದೇಹದ ಆಮ್ಲಜನಕ ಮಟ್ಟ ಕುಸಿಯಿತು.
ಗವಿಸಿದ್ದೇಶ್ವರ ಕೋವಿಡ್ ಆಸ್ಪತ್ರೆಗೆ ಮೇ 13ರಂದು ದಾಖಲಾದರು. 12 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖಗೊಂಡರು. ಗುಣಮುಖರಾದ ಬಳಿಕ ಕೋವಿಡ್ ಸೋಂಕಿತರ ಸೇವೆ ಮಾಡಬೇಕು ಎಂದು ಮಹೇಶ ಸಾಲಿಮಠಗೆ ಅನ್ನಿಸಿದೆ.

ಈ ಕುರಿತು ವೈದ್ಯರ ಬಳಿ ವಿಚಾರಿಸಿದರು. ವೈದ್ಯರು ಕೋವಿಡ್ ಗೆದ್ದಿರುವುದರಿಂದ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುತ್ತದೆ. ಇಚ್ಛೇ ಇದ್ದರೆ ಸೇವೆ ಮಾಡಿ ಎಂದು ಸಲಹೆ ನೀಡಿದರು.
ಒಂದು ವಾರದಿಂದ ಗವಿಸಿದ್ದೇಶ್ವರ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಮಾಡುತ್ತಿದ್ದಾರೆ. ರೋಗಿಗಳ ಜೊತೆ ಮಾತನಾಡಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ನೀವು ಧೈರ್ಯವಾಗಿದ್ದರೆ ಕೋವಿಡ್ ಗೆಲ್ಲಬಹುದು ಎಂದು ಸೋಂಕಿತರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಿದ್ದಾರೆ.
ಕುಟುಂಬದವರಿಗೆ ಮಾತನಾಡುವುದು, ವಿಡಿಯೋ ಕಾಲ್ ಮಾಡಿಸುವುದು. ವಿವಿಧ ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ. ಸ್ವಯಂ ಪ್ರೇರಣೆಯಿಂದ ಸೇವೆ ಮಾಡುತ್ತಿರುವ ಮಹೇಶ ಸಾಲಿಮಠ ಕಾರ್ಯವನ್ನು ಮೆಚ್ಚಿದ್ದಾರೆ.
"ಈ ರೀತಿಯ ಸೇವೆ ಮಾಡುವುದು ತೀರಾ ಅಗತ್ಯವಾಗಿದೆ. ಮಹಾಮಾರಿಯನ್ನು ಕಟ್ಟಿ ಹಾಕಲು ಗೆದ್ದವರು ಕೈ ಜೋಡಿಸಬೇಕು. ಕೋವಿಡ್ ಗೆದ್ದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿರುವುದರಿಂದ ಸಮಸ್ಯೆ ಆಗುವುದಿಲ್ಲ" ಎಂದು ಮಹೇಶ ಸಾಲಿಮಠ ಹೇಳಿದ್ದಾರೆ.












Click it and Unblock the Notifications