ವ್ಯಾಸರಾಜರ ವೃಂದಾವನ ಧ್ವಂಸ; ಐವರು ಅಂತಾರಾಜ್ಯ ನಿಧಿಗಳ್ಳರು ಬಂಧನ
ಕೊಪ್ಪಳ, ಜುಲೈ 21 : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವ ವೃಂದಾವನದಲ್ಲಿ ವ್ಯಾಸರಾಜರ ಮೂಲ ವೃಂದಾವನವನ್ನು ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತಲೆ ತಪ್ಪಿಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯ ಮುಂದುವರಿದಿದೆ.
ವೃಂದಾವನವನ್ನು ನಾಶ ಪಡಿಸಲು ಬಳಸಲಾದ ಹಾರೆಗಳು, ಕಬ್ಬಿಣದ ಚಾಣ, ಸಲಾಕೆ, ಸುತ್ತಿಗೆ, ಬುಟ್ಟಿ ಹಾಗೂ ಪಿಕಾಸಿ, ಆಂಧ್ರಪ್ರದೇಶದ ನೋಂದಣಿ ಸಂಖ್ಯೆ ಇರುವ ಇನ್ನೋವಾ ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ವಜ್ರ, ವೈಡೂರ್ಯದ ಆಸೆಗಾಗಿ, ನಿಧಿಗಾಗಿ ವ್ಯಾಸರಾಜ ಯತಿಗಳ ವೃಂದಾವನವನ್ನು ಧ್ವಂಸ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಈಗ ಬಂಧಿಸಿರುವ ಆರೋಪಿಗಳು ಅಂತರ ರಾಜ್ಯ ನಿಧಿಗಳ್ಳರು ಎನ್ನಲಾಗಿದ್ದು, ವೈಜ್ಞಾನಿಕವಾಗಿ ಹಾಗೂ ವೃತ್ತಿಪರವಾಗಿ ನಡೆಸಿದ ತನಿಖೆಗೆ ಮೆಚ್ಚುಗೆ ವ್ಯಕ್ತವಾಗಿದೆ. ವೃಂದಾವನ ಧ್ವಂಸದ ವಿಚಾರವಾಗಿ ತನಿಖೆ ನಡೆಸಲು ಐದು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ತನಿಖಾ ಕಾರ್ಯದಲ್ಲಿ ಯಶಸ್ವಿಯಾದ ತಂಡಗಳಿಗೆ ಬಳ್ಳಾರಿ ವಲಯದ ಐಜಿಪಿ ನಂಜುಂಡಸ್ವಾಮಿ ಬಹುಮಾನ ಘೋಷಿಸಿದ್ದಾರೆ.

ಆರೋಪಿಗಳನ್ನು ತಾಡಪತ್ರಿಯ ನಿವಾಸಿಗಳಾದ ಪೊಲ್ಲಾರಿ ಮುರಳಿ ಮನೋಹರ ರೆಡ್ಡಿ, ಡಿ. ಮನೋಹರ್, ಕೆ. ಕುಮ್ಮಟ ಕೇಶವ, ಬಿ. ವಿಜಯಕುಮಾರ್ ಹಾಗೂ ಟಿ.ಬಾಲನರಸಯ್ಯ ಎಂದು ಗುರುತಿಸಲಾಗಿದೆ. ಇದರಲ್ಲಿ ಮನೋಹರ್ ಹಾಗೂ ವಿಜಯ್ ಕುಮಾರ್ ವಾಹನ ಚಾಲಕರಾದರೆ, ಕುಮ್ಮಟ ಕೇಶವ ಬೈಕ್ ಮೆಕ್ಯಾನಿಕ್, ಮುರಳಿ ಕೃಷಿಕ ಹಾಗೂ ಬಾಲನರಸಯ್ಯ ಅರ್ಚಕ ಎಂದು ತಿಳಿದುಬಂದಿದೆ.
ಜುಲೈ 17ರ ರಾತ್ರಿ ಗಂಗಾವತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತಿಹಾಸ ಪ್ರಸಿದ್ಧ ನವವೃಂದಾವನ ನಡುಗಡ್ಡೆಯಲ್ಲಿ ವ್ಯಾಸರಾಜರ ವೃಂದಾವನವನ್ನು ನಿಧಿಯ ಆಸೆಗಾಗಿ ದುಷ್ಕರ್ಮಿಗಳು ನಾಶ ಮಾಡಿದ್ದರು. ಇದರಿಂದ ಸಾರ್ವಜನಿಕರಲ್ಲಿ, ಮಠದ ಭಕ್ತರಲ್ಲಿ ಆತಂಕ, ಆಕ್ರೋಶಕ್ಕೆ ಕಾರಣವಾಗಿತ್ತು.
ಆರೋಪಿಗಳು ಎಲ್ಲರೂ ಆಂಧ್ರಪ್ರದೇಶದ ತಾಡಪತ್ರಿ, ಅನಂತಪುರ ಮತ್ತಿತರ ಕಡೆಯವರು ಎನ್ನಲಾಗಿದೆ. ಕರ್ನೂಲ್ ಎಸ್. ಪಿ. ಫಕೀರಪ್ಪ ಕಾಗಿನೆಲೆ ಹಾಗೂ ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಗಿದೆ.












Click it and Unblock the Notifications