ಕೊಪ್ಪಳ; ಮತದಾನ ಬಹಿಷ್ಕಾರ, ಗ್ರಾಮಸ್ಥರ ಮನವೊಲಿಸಿದ ಅಧಿಕಾರಿಗಳು
ಕೊಪ್ಪಳ, ಮೇ 8; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನವನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮಸ್ಥರು ಬಹಿಷ್ಕಾರ ಮಾಡಿದ್ದರು. ಮೇ 10ರ ಬುಧವಾರ ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
ವಿಠಲಾಪುರ ಗ್ರಾಮಕ್ಕೆ ತಹಶೀಲ್ದಾರ್ ಮಂಜುನಾಥ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿತು. ಈ ತಂಡದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತಗೌಡ ಪಾಟೀಲ್, ಸಣ್ಣ ನೀರಾವರಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಕನಕಗಿರಿ ಪೊಲೀಸ್ ಠಾಣೆ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇದ್ದರು.

ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದ ವಿಠಲಾಪುರ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಅವರ ಸಮಸ್ಯೆಗಳನ್ನು ಆಲಿಸಿದರು. ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಈಡೇರಿಸಿ ಅವರ ಮನವೊಲಿಸಿದರು. ಬಳಿಕ ಗ್ರಾಮಸ್ಥರು ಮತದಾನ ಮಾಡಲು ಒಪ್ಪಿಗೆ ನೀಡಿದರು.
ಮತದಾನ ಬಹಿಷ್ಕಾರ ಏಕೆ?; ತಹಶೀಲ್ದಾರ್ ಮಂಜುನಾಥ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ನಮ್ಮ ಬೇಡಿಕೆಗಳನ್ನು ಅಧಿಕಾರಿಗಳು ಈಡೇರಿಸಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮದಲ್ಲಿ ಶೇ 100ರಷ್ಟು ಮತ ಚಲಾಯಿಸುತ್ತೇವೆ ಎಂದು ಭರವಸೆ ನೀಡಿದರು.

ಕೆರೆ ತುಂಬಿಸುವ ಯೋಜನೆಯಲ್ಲಿ ನಮ್ಮ ಗ್ರಾಮಕ್ಕೆ ಅನ್ಯಾಯವಾಗಿದೆ ಎಂದು ವಿಠಲಾಪುರ ಗ್ರಾಮಸ್ಥರು ಎಪಿಎಂಸಿ ಸೇರಿದಂತೆ ಎಲ್ಲಾ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಕರೆ ನೀಡಿದ್ದರು. ಈ ಹಿಂದೆ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ನಡೆಸಿದ ಸಭೆ ವಿಫಲವಾಗಿತ್ತು. ಈಗ ವಿಧಾನಸಭೆ ಚುನಾವಣೆಗೆ ಬುಧವಾರ ಮತದಾನ ಇರುವುದರಿಂದ ತಹಶೀಲ್ದಾರ್ ಮತ್ತೆ ಗ್ರಾಮಕ್ಕೆ ಭೇಟಿ ನೀಡಿ ಜನರ ಮನವೊಲಿಕೆ ಮಾಡಿದ್ದಾರೆ.
ವಿಠಲಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ನಮ್ಮೂರ ಕೆರೆ ಭರ್ತಿ ಮಾಡದಿರುವುದು ಇದಕ್ಕೆ ಕಾರಣವಾಗಿದೆ. ಸಮರ್ಪಕವಾಗಿ ಕೆರೆ ಭರ್ತಿ ಮಾಡದಿದ್ದರೆ ವಿಧಾನಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು 7 ದಿನದ ಹಿಂದೆ ಗ್ರಾಮಸ್ಥರು, ರೈತರು ಘೋಷಣೆ ಮಾಡಿದ್ದರು.
ಗ್ರಾಮದ ಮುಖಂಡರಾದ ನಾಗರಾಜ ಅಸುಂಡಿ, ಪಂಪಾಪತಿ ಮತ್ತು ಇತರರು ಕೆರೆ ತುಂಬಿಸುವ ಯೋಜನೆ ರೂಪಿಸುವಾಗ ವಿಠಲಾಪುರ ಗ್ರಾಮದ ಕೆಳಗೆ ಪೈಪ್ ಲೈನ್ ಮಾಡಲಾಗಿದೆ. ಚಿಕ್ಕಮಾದಿನಾಳ ಎಂಬ ಗ್ರಾಮದ ಬಳಿ ವಾಲ್ ಇಡಲಾಗಿದೆ. ಈ ವಾಲ್ನಿಂದ ನಮ್ಮೂರ ಕೆರೆಗೆ ನೀರು ಬರುವುದಿಲ್ಲ ಎಂದು ಆರೋಪಿಸಿದ್ದರು. ಯೋಜನೆಯ ವರದಿಯಲ್ಲಿ ಚಿಕ್ಕಮಾದಿನಾಳ ಬಳಿ ವಾಲ್ ಮಾಡಲು ಅವಕಾಶವೇ ಇಲ್ಲ. ಆದರೆ ಅಲ್ಲಿ ವಾಲ್ ಇಟ್ಟಿದ್ದು, ನಮ್ಮ ಗ್ರಾಮಕ್ಕೆ ಬರುವ ನೀರು ಪೋಲಾಗುತ್ತಿದೆ ಎಂದು ದೂರಿದ್ದರು.
ವಿಠಲಾಪುರ ಗ್ರಾಮಕ್ಕೆ ತಾತ್ಕಾಲಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಚಿಕ್ಕಮಾದಿನಾಳ ಗ್ರಾಮದ ಬಳಿಯ ವಾಲ್ ಬಂದ್ ಮಾಡಬೇಕು. ಈ ವಾಲ್ ಮುಚ್ಚುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸಹ ಗಮನಹರಿಸಿಲ್ಲ. ಆದ್ದರಿಂದ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದರು.
ಎಪಿಎಂಸಿ ಚುನಾವಣೆ ಬಹಿಷ್ಕಾರ ಮಾಡಿದ್ದರು; ವಿಠಲಾಪುರ ಗ್ರಾಮಸ್ಥರು ಎಪಿಎಂಸಿ ಚುನಾವಣೆಯನ್ನು ಸಹ ಬಹಿಷ್ಕಾರ ಮಾಡಿದ್ದರು. ಆಗ ತಹಶೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದ್ದರು. ಗ್ರಾಮದ ಮಾರುತೇಶ್ವರ ದೇವಾಲಯದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಅಧಿಕಾರಿಗಳು ಚುನಾವಣೆ ಮುಗಿದ ಬಳಿಕ ಮತ್ತೆ ಗ್ರಾಮಕ್ಕೆ ಬರುತ್ತೇವೆ ಎಂದು ವಾಪಸ್ ಆಗಿದ್ದರು.
ಆದರೆ ಈಗ ವಿಧಾನಸಭೆ ಚುನಾವಣೆ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಬೇಕು ಎಂದು ಚುನಾವಣಾ ಆಯೋಗ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಆದ್ದರಿಂದ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿದ ಗ್ರಾಮಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಮನವೊಲಿಕೆ ಮಾಡುವ ಕಾರ್ಯ ಮಾಡುತ್ತಿದೆ.












Click it and Unblock the Notifications