ಕೊಪ್ಪಳದಲ್ಲಿ ಮಳೆಗೆ ಮನೆ ಚಾವಣಿ ಕುಸಿದು ಮೂರು ಸಾವು
ಕೊಪ್ಪಳ, ಅಕ್ಟೋಬರ್ 15: ಮನೆಯ ಚಾವಣಿ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಯಲಮಗೇರಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಕಳೆದ ಎರಡು ವಾರದಿಂದ ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಕೊಪ್ಪಳ ತಾಲೂಕಿನ ಯಲಮಗೇರಿ ಗ್ರಾಮದಲ್ಲೂ ಸೋಮವಾರ ರಾತ್ರಿ ಬಿರುಸಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ಮನೆ ಚಾವಣಿ ಶಿಥಿಲಗೊಂಡಿದ್ದು, ಇದ್ದಕ್ಕಿದ್ದಂತೆ ಬಿದ್ದಿದೆ. ಇದರಿಂದಾಗಿ ಮನೆಯೊಳಗೆ ಮಲಗಿದ್ದ ಸುಜಾತಾ (22), ಅಮರೇಶ್ (18) ಹಾಗೂ ಗವಿಸಿದ್ದಪ್ಪ (15) ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿ ತಂದೆ ಮತ್ತು ಮಕ್ಕಳು ಒಟ್ಟಿಗೆ ಊಟ ಮುಗಿಸಿ ಮಲಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಚಾವಣಿ ಬಿದ್ದು ಮಣ್ಣಿನ ಅಡಿಗೆ ಮೂವರು ಸಿಲುಕಿಕೊಂಡಿದ್ದಾರೆ. ಗವಿಸಿದ್ದಪ್ಪ ಉಸಿರುಗಟ್ಟಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಉಸಿರಾಟಕ್ಕೆ ತೊಂದರೆಯಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲ ನೀಡದೇ ಸಾವನ್ನಪ್ಪಿದ್ದಾರೆ. ಕೂದಲೆಳೆ ಅಂತರದಲ್ಲಿ ತಂದೆ ಸೋಮಣ್ಣ ಪಾರಾಗಿದ್ದಾರೆ.

ಈ ಮೂವಲ ಸಾವಿಗೆ ಸರ್ಕಾರ ಶೀಘ್ರವಾಗಿ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications