ಪಿಎಸ್ಐ ಹಗರಣ: ಬಿಜೆಪಿ ಶಾಸಕನ ಮೇಲೆ 15 ಲಕ್ಷ ರೂ ಲಂಚ ಪಡೆದ ಆರೋಪ?
ಕೊಪ್ಪಳ, ಸೆಪ್ಟೆಂಬರ್ 5: ಪಿಎಸ್ಐ ನೇಮಕಾತಿ ವೇಳೆ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ ಬಿಜೆಪಿಯ ಶಾಸಕ ಬಸವರಾಜ ದಢೇಸಗೂರ 15 ಲಕ್ಷ ರೂ ಪಡೆದಿರುವ ಆರೋಪ ಕೇಳಿಬಂದಿದ್ದು, ಆ ವ್ಯಕ್ತಿ ಮತ್ತು ಶಾಸಕನ ನಡುವಿನ ಆಡಿಯೋ ವೈರಲ್ ಆಗುತ್ತಿದೆ.
ಪಿಎಸ್ಐ ಹಗರಣ ಇಡೀ ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಿದ್ದು, ನೇಮಕಾತಿ ಎಡಿಜಿಪಿ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಅಕ್ರಮದಲ್ಲಿ ಭಾಗಿಯಾಗಿದ್ದ ಹತ್ತಾರು ಜನರ ಬಂಧನವೂ ಆಗಿದ್ದು, ಈಗಾಗಲೇ ತನಿಖೆಯೂ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಮತ್ತೊಂದು ಆತಂಕದ ವಿಚಾರ ಬೆಳಕಿಗೆ ಬಂದಿದ್ದು, ಕೊಪ್ಪಳ ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಅಭ್ಯರ್ಥಿಯೊಬ್ಬರ ತಂದೆಯಿಂದ ಬರೋಬ್ಬರಿ 15 ಲಕ್ಷ ಹಣ ಪಡೆದು, ಅಕ್ರಮದಲ್ಲಿ ಭಾಗಿಯಾಗಿರೋ ಗಂಭೀರ ಆರೋಪ ಕೇಳಿ ಬಂದಿದೆ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ಮೂಲದ ಪರಸಪ್ಪ ಎಂಬಾತ ತಮ್ಮ ಮಗನ ಪಿಎಸ್ಐ ನೇಮಕಾತಿಗಾಗಿ 15 ಲಕ್ಷ ರೂ ಕೊಟ್ಟಿದ್ದು, ಅದನ್ನು ವಾಪಸ್ ಕೇಳಿದ್ದಾರೆ. ಮೊದಲಿಗೆ ಆ ಹಣವನ್ನು ಸರಕಾರಕ್ಕೆ ಕೊಟ್ಟಿರುವುದಾಗಿ ಹೇಳಿರುವ ಶಾಸಕ ಬೆಂಗಳೂರಿಗೆ ಬಂದಾಗ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದಾರೆ.
ಜೊತೆಗೆ ಹಣ ಕೇಳಿರುವ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನನಗೆ ಎಷ್ಟು ಕೋಟಿ ಕೊಟ್ಟಿದ್ದೀಯಾ? ಯಾರ ಮುಂದೆ ಹೇಗೆ ಮಾತನಾಡಬೇಕೆಂದು ಗೊತ್ತಿಲ್ಲವಾ? ಮಾನ ಮರ್ಯಾದೆ ಇದಿಯಾ. ನಾನೇನು ನಿನ್ನ ಮನೆಗೆ ಬಂದಿದ್ನಾ ದುಡ್ಡು ಕೊಡು ಅಂತಾ, ನೀನು ಏಕೆ, ಯಾವ ಉದ್ದೇಶಕ್ಕೆ ಹಣ ಕೊಟ್ಟಿದ್ದೀಯಾ? ಯಾವ ಕೆಲಸಕ್ಕೆ ಹಣಕೊಟ್ಟಿದ್ದೀಯಾ? ಹೇಗೆ ಕೇಳಬೇಕು ಎನ್ನುವ ಸೌಜನ್ಯ ಇಲ್ಲವಾ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ.

ಸಮಸ್ಯೆ ಬಗೆಹರಿಸಲು ಹೋಗಿದ್ದೆ!
ಪರಸಪ್ಪ ಜೊತೆಗಿನ ವೈರಲ್ ಆಡಿಯೋದಲ್ಲಿ ಮಾತನಾಡಿರುವುದು ನಾನೇ ಎಂದು ಶಾಸಕ ಬಸವರಾಜ ದಡೇಸೂಗೂರ ಒಪ್ಪಿಕೊಂಡಿದ್ದಾರೆ. ಆದರೆ ನಾನು ಹಣ ಪಡೆದಿಲ್ಲ. ಬೇರೆ ಇಬ್ಬರ ನಡುವೆ ಜಗಳ ಉಂಟಾಗಿದ್ದು, ನನ್ನ ಬಳಿಗೆ ಸಮಸ್ಯೆ ಬಗೆಹರಿಸುವಂತೆ ಬಂದಿದ್ದರು. ಅವರಿಬ್ಬರನ್ನು ಒಟ್ಟುಗೂಡಿಸಿ ರಾಜಿ ಪಂಚಾಯಿತಿ ನಡೆಸಿದ್ದೆ. ಅದನ್ನು ರೆಕಾರ್ಡ್ ಮಾಡಿ ವೈರಲ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನನ್ನ ಮೇಲೆ ಷಡ್ಯಂತ್ರ
ಇದರಲ್ಲಿ ನಾನು ದುಡ್ಡು ತೆಗೆದುಕೊಂಡಿಲ್ಲ. ನಾನು ಸರಕಾರಕ್ಕೆ ಹಣ ಕೊಟ್ಟಿದ್ದೇನೆ ಎಂದು ಹೇಳಿಲ್ಲ. ಮುಂದಿನ ವರ್ಷ ಚುನಾವಣೆ ಇರುವುದರಿಂದ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಹಾಗಾಗಿ ಈ ರೀತಿ ಆಡಿಯೋಗಳನ್ನು ವೈರಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಾನೂನು ಚೌಕಟ್ಟಿನಲ್ಲಿ ತನಿಖೆ
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯಿಸಿ " ಇದು ವಿರೋಧ ಪಕ್ಷದವರ ಕೈವಾಡ. ಸರಕಾರದ ವಿರುದ್ಧ ಅಪಪ್ರಚಾರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ, ಈ ಆಡಿಯೋ ಕೇಳಿಲ್ಲ. ಅವರು ತಪ್ಪು ಮಾಡಿದ್ದರೆ ಇಂದು ಮಾಧ್ಯಮದ ಮುಂದೆ ಬರುತ್ತಿರಲಿಲ್ಲ. ಈ ಬಗ್ಗೆ ತನಿಖೆಯಾಗಲಿ, ತಪ್ಪು ಆಗಿದ್ದರೆ ಕ್ರಮ ತೆಗೆದುಕೊಳ್ಳಲಿ'' ಎಂದಿದ್ದಾರೆ.
"ಬಸವರಾಜ ದಢೇಸಗೂರ ವಿರುದ್ಧ ಕೇಳಿಬಂದಿರುವ ಆರೋಪವನ್ನು ತಳ್ಳಿ ಹಾಕಲ್ಲ, ಈ ಕುರಿತು ವಿಚಾರಣೆ ನಡೆಯಲಿ. ನಾನು ದಢೇಸಗೂರ ಜೊತೆಗೆ ಮಾತನಾಡಿದ್ದೇನೆ, ಅವರು ಯಾರಿದಂಲೂ ಹಣ ಪಡೆದಿಲ್ಲ ಎಂದು ಹೇಳಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ತನಿಖೆ ನಡೆಯಲಿ" ಎಂದು ತಿಳಿಸಿದ್ದಾರೆ.

ಬಂಧನಕ್ಕೆ ಆಗ್ರಹಿಸಿದ ಎಂಬಿ ಪಾಟೀಲ್
ಲಂಚ ಪಡೆದಿರುವ ಕುರಿತು ಆಡಿಯೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಸರಕಾರ ಹಾಗೂ ಶಾಸಕರ ಮೇಲೆ ಮುಗಿಬಿದ್ದಿದ್ದಾರೆ. ಕೂಡಲೇ ಶಾಸಕ ಬಸವರಾಜ ದಡೇಸೂಗೂರನ್ನು ಬಂಧಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಆಗ್ರಹಿಸಿದ್ದಾರೆ.
ವೈರಲ್ ಆಗಿರುವ ಆಡಿಯೋದಲ್ಲಿ ಶಾಸಕ ಹಣವನ್ನು ಸರಕಾರಕ್ಕೆ ಕೊಟ್ಟಿದ್ದಾಗಿ ಹೇಳಿದ್ದಾರೆ. ಸರಕಾರ ಅಂದರೆ ಯಾರ ಕೈಯಲ್ಲಿ ಕೊಟ್ಟಿದ್ದಾರೆ ಎನ್ನುವುದು ಬಹಿರಂಗವಾಗಬೇಕು, ಕನಕಗಿರಿ ಶಾಸಕರನ್ನು ಕೂಡಲೇ ಬಂಧಿಸಿ, ಈ ಪ್ರಕರಣದಲ್ಲಿ ಯಾರು ಯಾರು ಇದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಶಾಸಕರ ಹೇಳಿಕೆ ಗಮನಿಸಿದರೆ ಪೂರ್ಣ ಸರಕಾರವೇ ಹಗರಣದಲ್ಲಿ ಭಾಗಿಯಾಗಿರುವಂತೆ ಕಾಣುತ್ತಿದೆ. ಇದರ ಬಗ್ಗೆ ಸಂಪೂರ್ಣ ಪಾರದರ್ಶಕ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications