ಹೈಕೋರ್ಟ್ ಆದೇಶದಿಂದ ವಿವಾದಕ್ಕೆ ತೆರೆ: ಶಾಂತಿಯುತವಾಗಿ ನಡೆದ ಪದ್ಮನಾಭ ತೀರ್ಥರ ಮಧ್ಯಾರಾಧನೆ
ಕೊಪ್ಪಳ, ನವೆಂಬರ್ 22: ಹಂಪಿ ಸಮೀಪದ ಆನೆಗೊಂದಿಯಲ್ಲಿ ತುಂಗಭದ್ರಾ ನದಿ ಮಧ್ಯದ ಸುಂದರ ದ್ವೀಪದಲ್ಲಿರುವ ನವವೃಂದಾವನ ನಡುಗಡ್ಡೆಯಲ್ಲಿ ಆಚಾರ್ಯ ಮಧ್ವರ ನೇರ ಶಿಷ್ಯರಾದ ಪದ್ಮನಾಭ ತೀರ್ಥರ ಎರಡನೇ ದಿನದ ಮಧ್ಯಾರಾಧನೆ ನವೆಂಬರ್ 22 ಮಂಗಳವಾರ ಶಾಂತಿಯುತವಾಗಿ ನಡೆಯಿತು.
ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಒಂದೂವರೆ ದಿನ ರಾಯರ ಮಠದವರು, ಒಂದೂವರೆ ದಿನ ಉತ್ತರಾಧಿಮಠದವರಿಗೆ ಪೂಜೆಗೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಮಂಗಳವಾರ ರಾಯರ ಮಠದವರು ಮಧ್ಯಾರಾಧನೆ ಮಾಡಿ ನವವೃಂದಾವನ ಖಾಲಿ ಮಾಡಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ತುಂಗಭದ್ರಾ ನದಿಯ ಮಧ್ಯದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಸೋಮವಾರ ಆರಂಭವಾಗಿರುವ ಪದ್ಮನಾಭ ತೀರ್ಥರ ಆರಧಾನೆ ಹೈಕೋರ್ಟ್ ಆದೇಶದಂತೆ ಮಂಗಳವಾರ ಮಧ್ಯಾಹ್ನದ ವೇಳೆಗೆ ರಾಯರ ಮಠದ ಆರಾಧನೆ ಮುಕ್ತಾಯಗೊಂಡಿತು.
ಉತ್ತರಾದಿಮಠ, ಹಾಗೂ ರಾಯರ ಮಠದ ನಡುವಿನ ಹಲವು ವರ್ಷಗಳ ಸಂಘರ್ಷದಿಂದ ವಿವಾದಿತ ಕೇಂದ್ರ ಎಂದು ಈ ಸ್ಥಳ ಹೆಸರು ಪಡೆದುಕೊಂಡಿದೆ. ಪದ್ಮನಾಭ ತೀರ್ಥರ ಆರಾಧನೆಗಾಗಿ ಎರಡು ಮಠದ ವ್ಯಾಜ್ಯ ಹಲವಾರು ವರ್ಷಗಳಿಂದ ಕೋರ್ಟ್ನಲ್ಲಿ ನಡೆಯುತ್ತಿದೆ. ಆದರೆ ಈ ಬಾರಿ ಹೈಕೋರ್ಟ್ ಎರಡು ಮಠಕ್ಕೆ ಒಂದೂವರೆ ದಿನ, ಒಂದೂವರೆ ದಿನ ಪೂಜೆ ಮಾಡುವಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನವವೃಂದಾವನದಲ್ಲಿ ಯಾವುದೇ ಗಲಾಟೆಗಳಿಲ್ಲದೆ ಪೂಜೆ ನೆರವೇರಿಸಿದರು.

ಸೋಮವಾರದಿಂದ ರಾಯರ ಮಠದ ಪೀಠಾಧಿಪತಿಗಳು ನೇತೃತ್ವದಲ್ಲಿ ಪದ್ಮನಾಭ ತೀರ್ಥರ ಆರಾಧನೆ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ರಾಯರ ಮಠದ ಸುಭುದೇಂದ್ರ ಶ್ರೀಗಳು ನವವೃಂದಾವನದಲ್ಲಿ ಅಪಾರ ಪ್ರಮಾಣದ ಭಕ್ತರೊಂದಿಗೆ ಪದ್ಮನಾಭ ತೀರ್ಥರ ಮಧ್ಯಾರಾಧನೆ ನೆರವೇರಿಸಿದ್ದಾರೆ.
ಇನ್ನು ಹೈಕೋರ್ಟ್ ಆದೇಶದಂತೆ ಸುಭುದೇಂದ್ರ ಶ್ರೀಗಳು 12 ಗಂಟೆಯೊಳಗೆ ಪೂಜಾ ಕೈಕರ್ಯಗಳನ್ನು ನೆರವೇರಿಸಿದರು. ಇನ್ನು ಪೂಜೆ ಮುಗಿಯುತ್ತಿದ್ದಂತೆ ಅವಸವಸರವಾಗಿ ಮಧ್ಯಾಹ್ನ 12:30 ಗಂಟೆಯ ಒಳಗಡೆಗೆ ನವವೃಂದಾನ ಬಿಟ್ಟು ಉತ್ತರಾಧಿಮಠಕ್ಕೆ ಪೂಜೆಗೆ ಅವಕಾಶ ಮಾಡಿಕೊಟ್ಟರು.
ಇನ್ನು ಮಧ್ಯಾರಾಧನೆಯಲ್ಲಿ ರಾಜ್ಯದ ನಾನಾ ಭಾಗದಿಂದ ರಾಯರ ಮಠದ ಭಕ್ತರು ಭಾಗಿಯಾಗಿದ್ದರು. ಕಳೆದ ಹಲವು ವರ್ಷಗಳಿಂದಲೂ ಇದ್ದ ವಿವಾದ ಈ ಬಾರಿ ಹೈಕೋರ್ಟ್ ಆದೇಶದಿಂದ ಶಾಂತಿಯುತವಾಗಿ ನಡೆಯಿತು. ಇನ್ನು ಉತ್ತರಾಧಿಮಠದವರು ಇಂದು ಮಧ್ಯಾಹ್ನವೇ ನವವೃಂದಾವನಕ್ಕೆ ಆಗಮಿಸಿದ್ದು, ನಾಳೆ ಪೂಜೆ ಸಲ್ಲಿಸಲಿದ್ದಾರೆ.
ಒಂದು ಬಾರಿ ನೈವೇದ್ಯವಾದ ಮೇಲೆ ಪೂಜೆಗೆ ಅವಕಾಶವಿಲ್ಲವಂತೆ. ಹೀಗಾಗಿ ಇಂದು ಉತ್ತರಾಧಿಮಠದ ಸತ್ಯಾತ್ಮ ಶ್ರೀಗಳು ನವವೃಂದಾವನಕ್ಕೆ ಬರುವುದು ಅನುಮಾನ ಎನ್ನಲಾಗಿದೆ. ಉತ್ತರಾದಿ ಮಠದ ಶಿಷ್ಯಂದಿರು ಒಬ್ಬೊಬ್ಬರಾಗಿ ನವ ವೃಂದಾವನಕ್ಕೆ ಆಗಮಿಸುತ್ತಿದ್ದಾರೆ ಮತ್ತೊಂದು ಕಡೆ ರಾಯರ ಮಠದವರು ನವ ವೃಂದಾವನದಿಂದ ನಿರ್ಗಮಿಸುತ್ತಿದ್ದಾರೆ.

ಈ ವೇಳೆ ಮಾತನಾಡಿದ ಸುಭುದೇಂದ್ರ ತೀರ್ಥರು, "ನಮ್ಮ ಮಿತ್ರ ಮಠವಾದ ಉತ್ತರಾದಿಮಠದವರು ಇಂದಿನಿಂದ ಪೂಜೆ ಸಲ್ಲಿಸಲ್ಲಿದ್ದಾರೆ. ನಮ್ಮ ಮಿತ್ರ ಮಠದವರಾದಂತ ಉತ್ತಾರದಿ ಮಠದವರು ಸ್ವಾಮಿಗಳು ತುಂಬಾ ಆತ್ಮೀಯರು ಅವರ ಜೊತೆ ರಾಜಿ ಸೂತ್ರಗಳ ಮಾತುಕತೆ ನಡೆಯುತ್ತಿದೆ. ಇದಕ್ಕೆ ನ್ಯಾಯಾಲಯವು ರಾಜಿ ಸೂತ್ರದ ಮೂಲಕ ಶಾಂತಿ ಸೌಹಾರ್ದತೆಯಿಂದ ಆರಾಧನೆ ಆಚರಿಸಲು ರಾಯರ ಮಠದವರು ಮುಕ್ತ ಮನಸ್ಸಿನಿಂದ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಲಿದ್ದೇವೆ ಎಂದರು.
ಒಟ್ಟಾರೆ ವಿವಾದಿತವಾಗಿದ್ದ ನವವೃಂದಾವನದ ಪದ್ಮನಾಭ ತೀರ್ಥರ ಆರಾಧನೆ ಈ ಬಾರಿ ಶಾಂತಿಯುತವಾಗಿ ನಡೆದಿದೆ. ಆದಷ್ಟು ಬೇಗ ಎರಡು ಮಠದ ಭಕ್ತರು ಕೂಡಿಕೊಂಡು ತೀರ್ಥರ ಆರಾಧನೆ ಮಾಡಲಿ ಎನ್ನುವುದು ಸ್ಥಳೀಯ ಭಕ್ತರ ಆಶಯವಾಗಿದೆ.












Click it and Unblock the Notifications