ಬದುನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್
ಕೊಪ್ಪಳ, ಮೇ 19: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲಕನಮರಡಿ ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 'ಬದುನಿರ್ಮಾಣ ಅಭಿಯಾನ'ಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾಲನೆ ನೀಡಿದರು.
''ಮನರೇಗಾ ಯೋಜನೆಯಡಿ ಕಾರ್ಮಿಕರು ವರ್ಷದ ನೂರು ದಿನಗಳಲ್ಲಿ ನಲವತ್ತು ದಿನಗಳ ಕಾಲ ರಸ್ತೆ ಕಾಮಗಾರಿ ಕೆಲಸಗಳಲ್ಲಿ ತೊಡಗಿಸಿಕೊಂಡರೆ, ಅಂತಹ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಈ ರೀತಿ ಸುಮಾರು 53 ಸಾವಿರ ಕಾರ್ಮಿಕರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ 5 ಸಾವಿರ ರೂಪಾಯಿ ನೀಡುತ್ತಿರುವುದು ಬಹಳಷ್ಟು ಅನುಕೂಲಕರವಾಗಿದೆ'' ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
''ಕೃಷಿ ಕಾರ್ಮಿಕರಿಗಾಗಿ ಬದು ನಿರ್ಮಾಣ ಅಭಿಯಾನ ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಮೊದಲು 60 ಸಾವಿರ ಕೋಟಿ ರೂಪಾಯಿ ಮನರೇಗಾ ಯೋಜನೆಯಡಿ ಇಟ್ಟಿದ್ದರು. ಈಗ ಕೋವಿಡ್-19 ಸಂಕಷ್ಟ ಪರಿಹಾರಕ್ಕಾಗಿ ಕೂಲಿ ಕಾರ್ಮಿಕರಿಗಾಗಿ 40 ಸಾವಿರ ಕೋಟಿ ರೂಪಾಯಿ ಘೋಷಿಸಿದ್ದಾರೆ. ದುಡಿಯುವ ಕೈಗೆ ಕೆಲಸ ಹೊಟ್ಟೆಗೆ ಅನ್ನ ಸಿಗಲಿದೆ'' ಎಂದು ಬಿ.ಸಿ.ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

''ಬದು ನಿರ್ಮಾಣದಿಂದ ಭೂಮಿಯ ಫಲವತ್ತತೆ ಸಾರದ ರಕ್ಷಣೆಯ ಜೊತೆಗೆ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಕೋವಿಡ್-19 ಸಂದಿಗ್ಧ ಸಂದರ್ಭದಲ್ಲಿ ಬಡವರ, ಕೂಲಿ, ಕಾರ್ಮಿಕರು ಹಾಗೂ ರೈತರು ಸೇರಿದಂತೆ ಎಲ್ಲಾ ವರ್ಗದ ಪರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಂತಿವೆ. ರಾಜ್ಯ ಸರ್ಕಾರ ಎರಡು ತಿಂಗಳ ಮೊದಲೇ ಪಡಿತರ ವಿತರಿಸಿದರೆ, ಕೇಂದ್ರ ಸರ್ಕಾರ ಮೇ.1 ರಿಂದ ಉಚಿತ ಪಡಿತರ ನೀಡುತ್ತಿದೆ. ಮುಸುಕಿನ ಜೋಳ ಬೆಳೆಗಾರರಿಗೆ, ಹೂ ಬೆಳೆಗಾರರಿಗೆ, ತರಕಾರಿ ಹಣ್ಣು ಬೆಳೆಗಾರರಿಗೂ ಸರ್ಕಾರ ಪ್ಯಾಕೇಜ್ ಘೋಷಿಸಿದೆ. ಬದು ನಿರ್ಮಾಣದಂತಹ ರೈತ ಪರ ಯೋಜನೆಯನ್ನು ನೀಡಿದ್ದು ಬಹಳ ಉಪಯೋಗಕಾರಿ'' ಎಂದು ಬಿ.ಸಿ.ಪಾಟೀಲ್ ಹೇಳಿದರು.
* ಕೂಲಿ ಕಾರ್ಮಿಕರಿಂದ ಪ್ರತಿಜ್ಞೆ:
ಬದು ನಿರ್ಮಾಣದಲ್ಲಿ ಪಾಲ್ಗೊಂಡಿರುವ ಕೂಲಿ ಕಾರ್ಮಿಕರು ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿಲ್ಲವೆಂದು ಹಾಗೂ ಕೆಲಸದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಿ ಕೂಲಿ ಕಾರ್ಮಿರು ಪ್ರತಿಜ್ಞೆ ಮಾಡಿದರು. ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಜ್ಞಾವಿಧಿ ಬೋಧಿಸಿದರು.
* ಏನಿದು ಬದು ನಿರ್ಮಾಣ ಅಭಿಯಾನ.?
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರು ತಮ್ಮ ಹೊಲಗಳಲ್ಲಿಯೂ ಕೂಲಿ ಕೆಲಸ ಮಾಡಿಕೊಳ್ಳಲು ಸರ್ಕಾರ ಬೃಹತ್ ಅಭಿಯಾನಕ್ಕೆ ಮುಂದಾಗಿದ್ದು, ಮುಂಗಾರು ಮಳೆ ಪೂರ್ವದಲ್ಲಿ ನೆಲಕ್ಕೆ ಬಿದ್ದ ನೀರನ್ನು ಇಂಗಿಸಿಕೊಳ್ಳಲು ಹೊಲದಲ್ಲಿ ಬದು ನಿರ್ಮಾಣ ಮಾಸಾಚರಣೆ ಕೈಗೊಂಡಿದೆ.

ನರೇಗಾ ಯೋಜನೆಯಡಿ ರೈತರು ಕೂಲಿ ಕಾರ್ಮಿಕರಾಗಿ ದುಡಿದು ಬದುಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ. ಬಿದ್ದ ನೀರು ವ್ಯರ್ಥವಾಗಬಾರದು ಎಂಬ ಉದ್ದೇಶ ಒಂದೆಡೆಯಾದರೆ, ದುಡಿಯುವ ಕೈಗಳಿಗೆ ಕೆಲಸ ಕೊಡುವ ನಿಟ್ಟಿನಲ್ಲಿಯೂ ಸರ್ಕಾರ ಯೋಚಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಬದು ನಿರ್ಮಾಣ ಮಾಸಾಚಾರಣೆಯನ್ನು ಮೇ 19 ರಿಂದ ಜೂನ್ 16ರ ವರೆಗೆ ಹಮ್ಮಿಕೊಂಡಿದೆ.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ್ ದಡೇಸಗೂರು, ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ್ ರೆಡ್ಡಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications