ಕೊಪ್ಪಳ ಟಾಯ್ಸ್ ಕ್ಲಸ್ಟರ್; ಉದ್ಯೋಗ ತರಬೇತಿಗೆ ಒಪ್ಪಂದ
ಕೊಪ್ಪಳ, ಫೆಬ್ರವರಿ 13; ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಕೊಪ್ಪಳನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟಾಯ್ಸ್ ಕ್ಲಸ್ಟರ್ ವಿಶೇಷ ಆರ್ಥಿಕ ವಲಯಕ್ಕೆ ಪೂರಕವಾಗಿ ಸ್ಥಳೀಯರಿಗೆ ಉದ್ಯೋಗ ತರಬೇತಿ ನೀಡಲು ಎ. ಇ. ಕ್ಯೂ. ಯು. ಎಸ್. ಇನ್ಫ್ರಾ ಸಂಸ್ಥೆಯೊಂದಿಗೆ ಸಹಿ ಹಾಕಲಾಗಿದೆ.
ಶನಿವಾರ ಕಲಬುರಗಿಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳದ ಕಾರ್ಯಕ್ರಮದ ವೇದಿಕೆಯಲ್ಲಿ ಉನ್ನತ ಶಿಕ್ಷಣ, ವಿದ್ಯುನ್ಮಾನ ಮತ್ತು ಕೌಶಲ್ಯಭಿವೃದ್ಧಿ ಸಚಿವ ಡಾ. ಸಿ. ಎನ್. ಅಶ್ವಥ ನಾರಾಯಣ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಎ. ಇ. ಕ್ಯೂ. ಯು. ಎಸ್. ನಿರ್ದೇಶಕ ಡಾ. ಬಸವರಾಜ ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಪರಸ್ಪರ ಒಪ್ಪಂದಕ್ಕೆ ಸಹಿ ಮಾಡಿಕೊಂಡು ಎಂ. ಓ. ಯು ಬದಲಾಯಿಸಿಕೊಂಡರು.

25 ಸಾವಿರ ಜನರಿಗೆ ಉದ್ಯೋಗ ಒದಗಿಸುವ ಕೊಪ್ಪಳ ಟಾಯ್ಸ್ ಕ್ಲಸ್ಟರ್ ಸ್ಥಾಪನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 1 ಲಕ್ಷ ಉದ್ಯೋಗ ಸೃಷ್ಠಿಯಾಗಲಿದೆ. ಎ. ಇ. ಕ್ಯೂ. ಯು. ಎಸ್. ಇನ್ಫ್ರಾ ಸಂಸ್ಥೆಯೂ ಪ್ಲಾಸ್ಟಿಕ್ ಮೋಲ್ಡಿಂಗ್ ಹಾಗೂ ಇತರೆ ವೃತ್ತಿಗಳಿಗೆ ತರಬೇತಿ ನೀಡಲಿದೆ.
ನಿರುದ್ಯೋಗ ಸಮಸ್ಯೆ ನಿವಾರಣೆ ಆದ್ಯತೆ; ಸಚಿವ ಡಾ. ಸಿ. ಎನ್. ಅಶ್ವಥ ನಾರಾಯಣ ಮಾತನಾಡಿ, "ಕಲ್ಯಾಣ ಕರ್ನಾಟಕ ಭಾಗದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆ ನಮ್ಮ ಪ್ರಥಮ ಆದ್ಯತೆಯಾಗಿದೆ. ಇಂದಿಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ 5000ಕ್ಕೂ ಹೆಚ್ಚಿನ ಉದ್ಯೋಗಗಳು ಸ್ಥಳೀಯರಿಗೆ ಸಿಗಲಿದೆ. ಇಂದಿನ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರಕದವರು ನಮ್ಮ ಗುರಿಯಾಗುತ್ತಾರೆ. ಮಾರುಕಟ್ಟೆಯಲ್ಲಿನ ಬೇಡಿಕೆ ಅಧಾರದಂತೆ ಐಟಿಐ ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ 150 ಐಟಿಐ ಸಂಸ್ಥೆಗಳನ್ನು ವಿಶ್ವ ದರ್ಜೆಗೆ ಏರಿಸಲಾಗಿದೆ" ಎಂದರು.
"ರಾಜ್ಯದಲ್ಲಿ 21ನೇ ಶತಮಾನಕ್ಕೆ ಪೂರಕವಾಗಿ ಭವಿಷ್ಯದ ಕೌಶಲ್ಯವನ್ನು ಆಧಾರವಾಗಿಟ್ಟುಕೊಂಡು ಸ್ಮಾರ್ಟ್ ಕ್ಲಾಸ್ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿ ತಂತ್ರಜ್ಞಾನ ಅರಿಯುವುದು ತುಂಬಾ ಅವಶ್ಯಕವಾಗಿದೆ,. ಇದಕ್ಕಾಗಿ 1200 ಹೊಸ ಭವಿಷ್ಯದ ಕೌಶಲ್ಯಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ" ಎಂದು ಹೇಳಿದರು.
"ದೇಶದಲ್ಲಿ ಶೈಕ್ಷಣಿಕ ಕ್ರಾಂತಿಗೆ ರಾಷ್ಟ್ರೀಯ ಶಿಕ್ಷಣ ನೀತಿ ನಾಂದಿ ಹಾಡಲಿದೆ. ಹಿಂದೆ ಪ್ರತಿ ವಿಷಯಕ್ಕೆ ಪ್ರತ್ಯೇಕವಾಗಿ ಅಧ್ಯಯನ ಮಾಡಬೇಕಿತ್ತು. ಈ ನೀತಿ ಜಾರಿನಿಂದ ಸಮಗ್ರ ಶಿಕ್ಷಣ ಪಡೆಯುವುದು ಸುಲಭವಾಗಿದೆ. ಎನ್ಇಪಿ. ಜಾರಿಗೆ ತಂದ ಮೊದಲ ರಾಜ್ಯ ನಮ್ಮದಾಗಿದೆ. ಸ್ವಾತಂತ್ರ್ಯ, ಸಮಾನತೆ ರೀತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ತಂತ್ರಜ್ಞಾನ ಆಧಾರಿತ ಮತ್ತು ಕೌಶಲ್ಯವುಳ್ಳ ಶಿಕ್ಷಣ ನೀಡುವ ಗುರಿ ನಮ್ಮದಾಗಿದೆ" ಎಂದು ತಿಳಿಸಿದರು.
"ರಾಜ್ಯದಲ್ಲಿ ಸರ್ಕಾರದ 70 ಸೇರಿ ಒಟ್ಟಾರೆ 150 ಪಾಲಿಟೆಕ್ನಿಕ್ ಕಾಲೇಜುಗಳಿವೆ. ಪ್ರತಿ ವರ್ಷ 70 ಸಾವಿರ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹತೆವಿದ್ದರು ಸಹ 25 ರಿಂದ 30 ಸಾವಿರ ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆಯುತ್ತಿದ್ದರು. ಇದೀಗ ಇಲ್ಲಿನ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದಲ್ಲದೆ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮೂಲಕ ಪ್ರತಿಷ್ಠಿತ ಬಿಜೂ ಸಂಸ್ಥೆಯಲ್ಲಿಯೂ ನೀಡದ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಫಲವಾಗಿ ಪ್ರವೇಶಾತಿ ಸಂಖ್ಯೆ 60 ಸಾವಿರ ಮೀರಿದೆ" ಎಂದರು.
"ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಪ್ರತಿ ವಿದ್ಯಾರ್ಥಿಗಳಿಗೆ ಉದ್ಯಮ ಮತ್ತು ಉದ್ಯಮಿಗಳ ಬೇಡಿಕೆ ಅಧಾರದ ಮೇಲೆ ಕೌಶಲ್ಯ ತರಬೇತಿ ನೀಡಲು ಪ್ರತಿಷ್ಠಿತ ಇನ್ಫೋಸಿಸ್, ನಾಂದಿ, ಎನ್.ಎಸ್.ಇ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ" ಎಂದು ಸಚಿವ ಡಾ. ಅಶ್ವಥ ನಾರಾಯಣ ತಿಳಿಸಿದರು.












Click it and Unblock the Notifications