ಕೊಪ್ಪಳ ತತ್ತರ, ವಾಡಿಕೆಗಿಂತ ಶೇ.46 ರಷ್ಟು ಅಧಿಕ ಮಳೆ
ಕೊಪ್ಪಳ, ಅ.15: ಕೊಪ್ಪಳ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ 65 ಮಿ.ಮೀ ಇದ್ದು, 118 ಮಿ.ಮೀ. ಹೆಚ್ಚಿನ ಮಳೆ ಆಗಿರುತ್ತದೆ. ಕೊಪ್ಪಳ 153 ಮಿ.ಮೀ, ಕುಷ್ಟಗಿ ತಾಲ್ಲೂಕಿನಲ್ಲಿ 134 ಮಿ.ಮೀ ಹಾಗೂ ಕುಕನೂರು ತಾಲ್ಲೂಕಿನಲ್ಲಿ 150 ಮಿ.ಮೀ ಮಳೆ ಆಗಿದ್ದು ಒಟ್ಟಾರೆಯಾಗಿ ಇದುವರೆಗೂ ಜಿಲ್ಲೆಯ ವಾಡಿಕೆ ಮಳೆ 530 ಮಿ.ಮೀ ಇದ್ದು ವಾಸ್ತವಿಕವಾಗಿ 772 ಮಿ.ಮೀ ಮಳೆಯಾಗಿದ್ದು ಶೇ.46 ರಷ್ಟು ಹೆಚ್ಚಿನ ಮಳೆ ಆಗಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಸುಮಾರು 160 ಹೆಕ್ಟರ್ ಕೃಷಿ ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ಭತ್ತ ಹಾನಿಯಾಗಿರುತ್ತದೆ ಹಾಗೂ ತೋಟಗಾರಿಕೆಯ 2275 ಹೆಕ್ಟರ್ ಬೆಳೆ ಅಂದರೆ ಬಾಳೆ, ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಗಳು ಹಾನಿಯಾಗಿದ್ದು, ಸುಮಾರು ರೂ.6 ಕೋಟಿ ಹಾನಿ ಎಂದು ಅಂದಾಜಿಸಲಾಗಿದೆ.
ಬೆಳೆ ಹಾನಿಯ ಜಂಟಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ. ನಷ್ಟದ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ 650 ಮನೆಗಳು ಮಳೆಯಿಂದ ಬಿದ್ದಿದ್ದು ಆರ್.ಜಿ.ಎಚ್.ಸಿ.ಎಲ್ ತಂತ್ರಾಂಶದಲ್ಲಿ ದಾಖಲಿಸಿ ಪರಿಹಾರ_ವಿತರಿಸಲಾಗುವುದು ಎಂದರು.

ಹೆದ್ದಾರಿ, ಸೇತುವೆ ಹಾನಿ:
ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಬ್ರಿಡ್ಜ್ ಕಾಂ ಬ್ಯಾರೇಜ್ ಹಾನಿಯಾಗಿದ್ದು, ಅಂದಾಜು ರೂ. 4.80 ಕೋಟಿ ಹಾನಿಯಾಗಿರುತ್ತದೆ ಮತ್ತು ಕುಷ್ಟಗಿ ತಾಲೂಕಿನ ಚಿಕ್ಕಹೆಸರೂರು -ಮುಗದಲ್ - ಮುಂಡರಗಿ ರಾಜ್ಯ ಹೆದ್ದಾರಿ 129 ಕಿ.ಮೀ ನಿಂದ 150 ಕಿ.ಮೀ ರಸ್ತೆಯ ಪಕ್ಕದ ಹಳ್ಳದ ತಡೆಗೋಡೆ ಹಾನಿಯಾಗಿರುತ್ತದೆ. ಹಾನಿ ಮೊತ್ತ ಅಂದಾಜು ರೂ. 110 ಕೋಟಿ ಇರುತ್ತದೆ. ಪಿ.ಆರ್.ಡಿ.ಡಿ ಇಲಾಖೆಗೆ ಸಂಬಂಧಪಟ್ಟಂತೆ ಗ್ರಾಮೀಣ ಪ್ರದೇಶದ ರಸ್ತೆಗಳು ಹಾನಿಯಾಗಿದ್ದು, ಒಟ್ಟು ರೂ. 2.55 ಕೋಟಿ ಎಂದು ಅಂದಾಜಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನಾ ವರದಿ ಪ್ರಕಾರ ಕೊಪ್ಪಳ ಜಿಲ್ಲೆಯಾದ್ಯಂತ ಅಕ್ಟೋಬರ್.14 ರಿಂದ 17 ರವರೆಗೆ ಮಳೆ ಹೆಚ್ಚು ಆಗುವ ಸಂಭವ ಇದ್ದು, ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರಲು ಎಲ್ಲಾ ತಹಶೀಲ್ದಾರಗಳ ಮುಖಾಂತರ ತಿಳುವಳಿಕೆ ನೀಡಲಾಗಿದೆ.

ಎಲ್ಲಾ ತಾಲೂಕುಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಹ ಸಹಾಯವಾಣಿಯನ್ನು ತೆರೆದಿದ್ದು ದೂ.ಸಂ: 08539-225001 ಗೆ ಕರೆಮಾಡಿ ಸಾರ್ವಜನಿಕರು ಜಿಲ್ಲಾಡಳಿತವನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications