ಕೀನ್ಯಾದಲ್ಲಿ ಕೊಪ್ಪಳದ ಶೌಚಾಲಯ ಕ್ರಾಂತಿಗೆ ಶ್ಲಾಘನೆ
ಕೊಪ್ಪಳ, ಜುಲೈ 12 : ಕೊಪ್ಪಳ ಜಿಲ್ಲೆಯನ್ನು ಬಯಲು ಶೌಚ ಮುಕ್ತಗೊಳಿಸಲು ಕೈಗೊಂಡ ಜಾಗೃತಿ ಕಾರ್ಯಕ್ರಮಗಳು ವಿಶ್ವಮಟ್ಟದಲ್ಲಿ ಗಮನ ಸೆಳೆದಿವೆ. ಕೀನ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಈ ಕುರಿತು ವಿಚಾರ ಮಂಡನೆ ಮಾಡಿದ್ದಾರೆ.
ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಜು. 11 ರಂದು ಕೀನ್ಯಾದ ನಾಕೂರನ ಲೊಗ್ಬೊರೋ ವಿಶ್ವವಿದ್ಯಾಲಯದಲ್ಲಿ ನಡೆದ 41 ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಈ ಶೌಚಾಲಯ ಜಾಗೃತಿ ಕುರಿತು ವಿಚಾರ ಮಂಡಿಸಿ, ಎಲ್ಲರ ಮೆಚ್ಚುಗೆ ಗಳಿಸಿದರು.
ಕೀನ್ಯಾದಲ್ಲಿ ಉಪನ್ಯಾಸ ನೀಡಲಿದ್ದಾರೆ ಕೊಪ್ಪಳ ಸಿಇಒ ವೆಂಕಟ್ ರಾಜಾ
ಜಿಲ್ಲೆಯನ್ನು ಬಯಲು ಶೌಚ ಮುಕ್ತಗೊಳಿಸಲು ವಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಜನಸಮುದಾಯದಲ್ಲಿ ಜಾಗೃತಿ ಮೂಡಿಸಲು ಕೈಗೊಂಡ ಹೊಸ ಬಗೆಯ ತಂತ್ರಗಳು ಹಾಗೂ ಎದುರಿಸಲಾದ ಸವಾಲುಗಳ ಕುರಿತಂತೆ ವೆಂಕಟ್ ರಾಜಾ ಅವರು ವಿಷಯ ಮಂಡಿಸಿದರು.
ಅಕ್ಟೋಬರ್ನಲ್ಲಿ ಕಲಬುರಗಿ ಬಯಲು ಶೌಚ ಮುಕ್ತ ಜಿಲ್ಲೆ
ಶೌಚಾಲಯಗಳ ನಿರ್ಮಾಣ ಹಾಗೂ ಬಳಕೆ ಕುರಿತಂತೆ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಹಲವು ಬಗೆಯ ತಂತ್ರಗಳನ್ನು ಅನುಸರಿಸಿ, ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಕೊಪ್ಪಳ ಜಿಲ್ಲೆಯನ್ನು ಇಡೀ ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಿದೆ.
ಸ್ವಚ್ಛತೆ ಮತ್ತು ಆರೋಗ್ಯ
'ಸ್ವಚ್ಛತೆ ಮತ್ತು ಆರೋಗ್ಯ' ಕುರಿತಂತೆ ಕೀನ್ಯಾದಲ್ಲಿ ಜು. 09 ರಿಂದ 13 ರವರೆಗೆ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಯಶಸ್ವಿ ಶೌಚಾಲಯ ನಿರ್ಮಾಣ ಹಾಗೂ ಸ್ವಚ್ಛತೆಯ ಕ್ರಾಂತಿ ಕುರಿತು ವಿಶೇಷ ಉಪನ್ಯಾಸವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ನೀಡಿದರು.
ಭಾರತ ದೇಶದ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿ ಕೀನ್ಯಾಕ್ಕೆ ತೆರಳಿದ್ದರು. ಇಂಗ್ಲೆಂಡ್ ಮೂಲದ ಲೊಗ್ಬೊರೊ ವಿಶ್ವವಿದ್ಯಾಲಯ ಪ್ರತಿ ವರ್ಷ ಇಂತಹ ಸಮ್ಮೇಳನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುತ್ತದೆ.
40 ದೇಶದ ಪ್ರತಿನಿಧಿಗಳು
ಈ ಬಾರಿ ಜು. 09 ರಿಂದ 13 ರವರೆಗೆ ಐದು ದಿನಗಳ ಕಾಲ ಕೀನ್ಯಾದಲ್ಲಿ ಸಮ್ಮೇಳನ ಏರ್ಪಡಿಸಿದ್ದು, ಸುಮಾರು 40 ದೇಶಗಳಿಂದ 400 ವಿವಿಧ ತಜ್ಞರು, ವಿಷಯ ಪರಿಣಿತರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಕೊಪ್ಪಳದಂತಹ ಹಿಂದುಳಿದ ಜಿಲ್ಲೆಯಲ್ಲಿ ಸರ್ಕಾರ ಹಾಗೂ ಆಡಳಿತ ವರ್ಗವು ಸಾರ್ವಜನಿಕರ ಸಹಭಾಗಿತ್ವದಲ್ಲಿ ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಪರಿಣಾಮಕಾರಿಯಾಗಿ ಹೇಗೆ ಜಾಗೃತಿ ಮೂಡಿಸುವಲ್ಲಿ ಯಶಸ್ಸು ಕಂಡಿದೆ.
ಶೌಚಾಲಯ ಕಾಂತಿ ಮಾಡಲು ಎದುರಾದ ಸವಾಲುಗಳು ಯಾವುವು, ಕೈಗೊಂಡ ಕ್ರಮಗಳೇನು ಎನ್ನುವುದರ ಕುರಿತು ಕೊಪ್ಪಳ ಸಿಇಒ ವೆಂಕಟ್ರಾಜಾ ಅವರು ವಿಶೇಷ ಉಪನ್ಯಾಸ ನೀಡಿದರು. ಕೊಪ್ಪಳ ಜಿಲ್ಲೆಯಲ್ಲಿನ ಸಾಧನೆಯ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ವಿಷಯ ವೆಂಕಟ್ ರಾಜಾ ಅವರು ಸಮ್ಮೇಳನದಲ್ಲಿ ವಿಷಯ ಮಂಡಿಸಿದರು.
ಅಧಿಕಾರಿಗಳು, ಜನರ ಸಹಕಾರ
ಶೌಚಾಲಯದ ನಿರ್ಮಾಣ ಹಾಗೂ ಅದರ ಮಹತ್ವ ಕುರಿತಂತೆ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಕೈಗೊಂಡ ಹಾಗೂ ಅನುಸರಿಸಿದ ತಂತ್ರಗಾರಿಕೆ ಎಲ್ಲ ಹಂತಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಇಂತಹ ಜನಜಾಗೃತಿಗೆ ನೀಡಿದ ಬೆಂಬಲ ಹಾಗೂ ಹಿಂದುಳಿದ ಪ್ರದೇಶವಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಬೇರೂರಿದ್ದ ಬಯಲು ಶೌಚ ಪದ್ಧತಿಗೆ ಇತಿಶ್ರೀ ಹಾಡಲು ಜನರ ಮನಸ್ಸು ಪರಿವರ್ತಿಸಲು ಕೈಗೊಂಡ ಹಲವು ಬಗೆಯ ಕ್ರಮಗಳ ಕುರಿತು ಹಾಗೂ ಈ ಸಾಧನೆಯ ಹಾದಿಯಲ್ಲಿ ಎದುರಾದ ಸವಾಲುಗಳು ಮತ್ತು ಕೈಗೊಂಡ ಪರಿಹಾರ ಕ್ರಮಗಳ ಕುರಿತು ವೆಂಕಟ್ ರಾಜಾ ಅವರು ಸಮ್ಮೇಳನದಲ್ಲಿ ಸಮಗ್ರವಾಗಿ ವಿವರಿಸಿದರು.
ವಿದ್ಯಾರ್ಥಿಗಳಲ್ಲಿ ಜಾಗೃತಿ
ಶಾಲಾ ಮಕ್ಕಳಿಂದ ಪಾಲಕರಿಗೆ ಪತ್ರ ಚಳುವಳಿ, ಸುಮಾರು 12 ಸಾವಿರ ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸಿ ದಾಖಲೆ ಕೈಗೊಂಡಿದ್ದು, ಮಿಷನ್ 200 ಹೆಸರಿನಲ್ಲಿ 200 ಗಂಟೆಗಳಲ್ಲಿ 20 ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಕಠಿಣ ಸವಾಲನ್ನು ಹಾಕಿಕೊಂಡು, ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕೈಗೊಂಡಿದ್ದು, ಗಂಗಾವತಿ ತಾಲೂಕಿನ ಢಣಾಪುರ ಗ್ರಾಮದ ವಿದ್ಯಾರ್ಥಿನಿ ಮಲ್ಲಮ್ಮ, ಶೌಚಾಲಯಕ್ಕಾಗಿ ಉಪವಾಸ ಕುಳಿತು, ಪ್ರಧಾನಮಂತ್ರಿಗಳಿಂದ ಪ್ರಶಂಸೆ ಪಡೆದಿದ್ದನ್ನು ವಿವರಿಸಿದರು.