ಕೊಪ್ಪಳ ವಿಮಾನ ನಿಲ್ದಾಣ; ಮುಖ್ಯಮಂತ್ರಿಗಳಿಗೆ ಸಂಸದರ ಮನವಿ ಏನು?
ಕೊಪ್ಪಳ, ನವೆಂಬರ್ 03: ಕೊಪ್ಪಳ ವಿಮಾನ ನಿಲ್ದಾಣ ಯೋಜನೆ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿವೆ. ಈಗಾಗಲೇ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹಂಪಿ ಪ್ರವಾಸದಲ್ಲಿದ್ದರು. ಗಿಣಿಗೇರಾ ಹತ್ತಿರದ ಎಂಎಸ್ಪಿಎಲ್ ಏರೋಡ್ರಮ್ ಆವರಣದಲ್ಲಿ ಅವರನ್ನು ಭೇಟಿ ಮಾಡಿದ ಸಂಸದ ಕರಡಿ ಸಂಗಣ್ಣ ಕೊಪ್ಪಳ ವಿಮಾನ ನಿಲ್ದಾಣ ಯೋಜನೆ ಕುರಿತು ಮುಖ್ಯಮಂತ್ರಿಗಳಿಗೆ ಮನವಿಯೊಂದನ್ನು ನೀಡಿದ್ದಾರೆ.

ಸಂಸದರು, ಉಡಾನ್ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗಾಗಿ ಭೂಮಿ ಖರೀದಿಸುವ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಕೊಪ್ಪಳ ವಿಮಾನ ನಿಲ್ದಾಣ ಯೋಜನೆ; ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಈಗಾಗಲೇ ಕೊಪ್ಪಳ ತಾಲೂಕಿನ ಕುಷ್ಟಗಿ ರಸ್ತೆಗೆ ಹೊಂದಿಕೊಂಡಂತೆ ತಾಳಕನಕಾಪೂರ, ಬುಡಶೆಟ್ನಾಳ, ಕಲಕೇರಿ ಹಾಗೂ ಹಟ್ಟಿ ಗ್ರಾಮಗಳ ಒಟ್ಟು 669.10 ಎಕರೆ ಜಮೀನಿನ ಸಮೀಕ್ಷೆ ಮಾಡಿ ನಕ್ಷೆ ತಯಾರಿಸಲಾಗಿದೆ.
ಕೇಂದ್ರದ ವಿಮಾನಯಾನ ಪ್ರಾಧಿಕಾರದ ತಾಂತ್ರಿಕ ತಂಡವು ಸಹ ಸ್ಥಳವನ್ನು ಅಧ್ಯಯನ ಮಾಡಿ ತನ್ನ ಒಪ್ಪಿಗೆಯನ್ನು ಸೂಚಿಸಿರುತ್ತದೆ. ಕೊಪ್ಪಳ ಜಿಲ್ಲಾಡಳಿತ ಸರ್ಕಾರದ ಮೂಲಕ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿ ಆಡಳಿತಾತ್ಮಕ ಅನುಮೋದನೆಯನ್ನು ಕೋರಿದೆ.
ಈ ಪ್ರಸ್ತಾವನೆಯನ್ನು ಸಂಬಂಧಿಸಿದ ಇಲಾಖೆಯವರು ತಕ್ಷಣವೇ ಪರಿಶೀಲನೆ ಮಾಡಿ ಆಡಳಿತಾತ್ಮಕ ಅನುಮೋದನೆ ನೀಡುವುದು ಬಾಕಿ ಇದೆ. ಹಿಂದಿನ ಸರ್ಕಾರ ಉದ್ದೇಶಿತ ವಿಮಾನ ನಿಲ್ದಾಣ ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರೂ. 40 ಕೋಟಿಗಳ ಅನುದಾನವನ್ನು ಕೆ. ಕೆ. ಆರ್. ಡಿ. ಬಿ ಯೋಜನೆಯಲ್ಲಿ ಮೀಸಲಾಗಿಟ್ಟಿದ್ದರು.
ಮುಖ್ಯಮಂತ್ರಿಗಳಿಗೆ ಮಾಡಿರುವ ಮನವಿಯಲ್ಲಿ ಸಂಸದರು ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ ಆಡಳಿತಾತ್ಮಕ ಅನುಮೋದನೆ ನೀಡಲು ನಿರ್ದೇಶಿಸಬೇಕು ಮತ್ತು ಭೂ ಸ್ವಾಧೀನಕ್ಕಾಗಿ ಅವಶ್ಯವಿರುವ ಅನುದಾನವನ್ನು ಸಹ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾಗಿದ್ದ ವಿ. ಸೋಮಣ್ಣ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಹೊಸದಾಗಿ ವಿಮಾನ ನಿಲ್ದಾಣ ಸ್ಥಾಪಿಸುವ ಕುರಿತು ಬೆಂಗಳೂರಿನಲ್ಲಿ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದರು.
ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೆಶಕ ಎಂ. ಆರ್. ರವಿ ತಂಡದ ಜೊತೆ ಆಗಿನ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಸಂಸದ ಸಂಗಣ್ಣ ಕರಡಿ ಹಾಗೂ ಜಿಲ್ಲೆಯ ಮುಖಂಡರುಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದ್ದರು.
ಕೊಪ್ಪಳ ಜಿಲ್ಲೆಯಲ್ಲಿ ಭಲ್ಟೋಟ ವಿಮಾನ ನಿಲ್ದಾಣವು ಎಂ.ಎಸ್.ಪಿ.ಎಲ್ ಖಾಸಗಿ ಸಂಸ್ಥೆಯ ಒಡೆತನದಲ್ಲಿದೆ. ಭಲ್ಟೋಟ ವಿಮಾನ ನಿಲ್ದಾಣವು ಪ್ರಾದೇಶಿಕ ವಾಯು ಸಂಪರ್ಕ (ಆರ್.ಸಿ.ಎಸ್) ಯೋಜನೆ- 2.0ರಲ್ಲಿ ಆಯ್ಕೆಯಾಗಿದೆ. ಈ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಉಪಯೋಗಿಸುವ ಕುರಿತು ಮೇ ಎಂ.ಎಸ್.ಪಿ.ಎಲ್ ಖಾಸಗಿ ಸಂಸ್ಥೆಯವರೊಂದಿಗೆ ಸರ್ಕಾರದ ವತಿಯಿಂದ ಹಲವಾರು ಪ್ರಯತ್ನಗಳನ್ನು ಮಾಡಲಾಗಿತ್ತು.
ಆದರೆ ವಿಮಾನಗಳ ಕಾರ್ಯಾಚರಣೆಗೆ ಸಂಸ್ಥೆಯಿಂದ ಸಕಾರಾತ್ಮಕ ಪ್ರಕ್ರಿಯೆ ಸಿಕ್ಕಿರಲಿಲ್ಲ. ಎ.ಎ.ಐ.ನ ತಂಡವು ಫ್ರೆಬ್ರವರಿ 2021ರಲ್ಲಿ ಕೊಪ್ಪಳದಲ್ಲಿನ ಭಲ್ಟೋಟ ವಿಮಾನ ನಿಲ್ದಾಣಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಸ್ತುತ 1703 * 30 ಮೀ. ಉದ್ದದ ರನ್-ವೇ ಇರುವುದಾಗಿ ಹಾಗೂ ಎಟಿಆರ್-72 ಮಾದರಿಯ ವಿಮಾನಗಳ ಕಾರ್ಯಾಚರಣೆಗಾಗಿ ಸುಮಾರು 257 ಎಕರೆ ಹೆಚ್ಚುವರಿ ಜಮೀನು ಬೇಕಾಗುತ್ತದೆಂದು ಹಾಗೂ ಎ-320 ಮಾದರಿಯ ವಿಮಾನಗಳ ಕಾರ್ಯಾಚರಣೆಗಾಗಿ ಸುಮಾರು 507 ಎಕರೆ ಹೆಚ್ಚುವರಿ ಜಮೀನು ಬೇಕಾಗುತ್ತದೆಂದು ವರದಿ ನೀಡಿತ್ತು.












Click it and Unblock the Notifications