ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ದಿನಾಂಕ ಘೋಷಣೆ
ಕೊಪ್ಪಳ, ಜನವರಿ 05: ನಾಡಿನ ಪ್ರಸಿದ್ಧ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ 2024ರ ಜಾತ್ರೆಯ ದಿನಾಂಕ ಘೋಷಣೆ ಮಾಡಲಾಗಿದೆ. ಲಕ್ಷಾಂತರ ಜನರು ಆಗಮಿಸುವ ಜಾತ್ರೆಯ ಅಂಗವಾಗಿ ಮೊದಲ ಹಂತದ ಪೂರ್ವಭಾವಿ ಸಿದ್ಧತಾ ಸಭೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧ್ಯಕ್ಷತೆಯಲ್ಲಿ ನಡೆಯಿತು.
ಜನವರಿ 27ರಂದು ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ನಡೆಯಲಿದೆ. ಅಂದು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜಾತ್ರೆ ಸಮಯದಲ್ಲಿ ಪ್ರತಿ ದಿನ ಭಕ್ತರು ಶ್ರೀ ಮಠಕ್ಕೆ ಆಗಮಿಸುತ್ತಾರೆ. ಜನವರಿ 23ರಿಂದ ಜನವರಿ 29ರವರೆಗೆ ಗವಿಸಿದ್ದೇಶ್ವರ ಸಂಸ್ಥಾನ ಶ್ರೀ ಗವಿಮಠದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, "ಶ್ರೀ ಗವಿಸಿದ್ದೇಶ್ವರ ಜಾತ್ರೋತ್ಸವ ಹಿನ್ನೆಲೆಯಲ್ಲಿ ಜನವರಿ 13ರಿಂದಲೇ ಮಠಕ್ಕೆ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಲಿದೆ. ರಥೋತ್ಸವ ದಿನದಿಂದ ಬಹಳಷ್ಟು ಸಂಖ್ಯೆಯಲ್ಲಿ ಭಕ್ತರು ಶ್ರೀಮಠದ ಆವರಣದಲ್ಲಿಯೇ ವಾಸ್ತವ್ಯ ಮಾಡುತ್ತಾರೆ. ಈ ಬಾರಿ ಬಸ್ಸಿನ ಸೌಕರ್ಯ ಇರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇದೆ" ಎಂದರು.
"ಶ್ರೀಮಠಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ವಿವಿಧೆಡೆ ಅಚ್ಚುಕಟ್ಟಾಗಿ ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಜಾತ್ರೋತ್ಸವ ದಿನದಂದು ಶ್ರೀಮಠದ ರಥೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ಆ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
"ಮಠದ ಆವರಣದ ನಾಲ್ಕೂ ದಿಕ್ಕಿನಲ್ಲಿ ಅಗ್ನಿಶಾಮಕ ವಾಹನಗಳು ಇರಬೇಕು. ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸಂಚರಿಸಲು ಅನುಕೂಲವಾಗುವಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು. ಆಯಾ ಇಲಾಖೆಗಳಿಗೆ ವಹಿಸಿದ ಎಲ್ಲಾ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುವಂತಾಗಬೇಕು. ಜಾತ್ರೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿದ್ಧತಾ ಕಾರ್ಯ ನಡೆಸಬೇಕು" ಎಂದರು.
ನಿರಂತರ ದಾಸೋಹ; ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, "ರಥೋತ್ಸವ ದಿನದಂದು ಲಕ್ಷಾಂತರ ಭಕ್ತರು ಮತ್ತು ಇನ್ನುಳಿದ ದಿನಗಳಲ್ಲಿ ಸಹ ಪ್ರತಿ ದಿನ 3 ರಿಂದ 4 ಲಕ್ಷ ಭಕ್ತರು ಶ್ರೀಮಠಕ್ಕೆ ಆಗಮಿಸುತ್ತಾರೆ. ಜನವರಿ 23ರಿಂದ ಜನವರಿ 29ರವರೆಗೆ ಗವಿಸಿದ್ದೇಶ್ವರ ಸಂಸ್ಥಾನ ಶ್ರೀ ಗವಿಮಠದಿಂದ ವಿವಿಧ ಕಾರ್ಯಕ್ರಮಗಳು ಇರುತ್ತವೆ. ಜಾತ್ರೋತ್ಸವ ಹಿನ್ನೆಲೆಯಲ್ಲಿ ನಿರಂತರ ದಾಸೋಹ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ" ಎಂದರು.
"ನಗರಸಭೆಯ ಅಧಿಕಾರಿಗಳು ಸ್ವಚ್ಛತೆಗೆ, ಕುಡಿಯುವ ನೀರಿನ ಸೌಕರ್ಯಕ್ಕೆ ಮತ್ತು ವಾಹನ ಸೌಲಭ್ಯಕ್ಕೆ ವಿಶೇಷ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕು. ಶ್ರೀಮಠಕ್ಕೆ ಸಂಪರ್ಕ ಇರುವ ಎಲ್ಲಾ ರಸ್ತೆಗಳ ರಿಪೇರಿ ಮತ್ತು ಪ್ರತಿ ದಿನ ಕಸ ತೆಗೆಯುವ ವ್ಯವಸ್ಥೆ ಮಾಡಬೇಕು. ಜನವರಿ 21ರಿಂದ ಫೆಬ್ರವರಿ 10ರವರೆಗೆ ಶ್ರೀಮಠದ ಸುತ್ತಲು, ಮಹಾದಾಸೋಹ ಸಂಪರ್ಕ ರಸ್ತೆಗಳು, ಜಾತ್ರಾ ಅಂಗಡಿ, ತೇರು ಸಾಗುವ ಆವರಣ, ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ ಕಸ ವಿಲೇವಾರಿ ಮಾಡಿ ಧೂಳು ಬಾರದಂತೆ ನೀರಿನ ವ್ಯವಸ್ಥೆ ಮಾಡಬೇಕು. ಈ ಕಾರ್ಯಕ್ಕಾಗಿ ಅಗತ್ಯ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸಬೇಕು" ಎಂದು ಸೂಚನೆ ನೀಡಿದರು.
"ಯಾತ್ರಾರ್ಥಿಗಳಿಗೆ ನೀಡುವ ಕಾಲೇಜು, ಶಾಲೆ, ಯಾತ್ರಿ ನಿವಾಸ, ವೃದ್ಧಾಶ್ರಮ ಹಾಗೂ ಶ್ರೀಮಠದ ಆವರಣದ ವಸತಿ ಸ್ಥಳಗಳಲ್ಲಿ ಶುಚಿತ್ವ ಇರಬೇಕು. ಸೊಳ್ಳೆಗಳು ಬರದಂತೆ ಫಾಗಿಂಗ್ ಮಾಡಿಸಬೇಕು. ಡಿಟಿಟಿ ಪುಡಿ ಹಾಕಬೇಕು. ಸಾರ್ವಜನಿಕ ಶೌಚಾಲಯಗಳಲ್ಲಿ ಸಹ ಶುಚಿತ್ವ ಕಾಯ್ದುಕೊಳ್ಳಬೇಕು. ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ರೀತಿಯ ಕ್ರಮಗಳನ್ನು ವಹಿಸಬೇಕು" ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
"ಶ್ರೀಮಠದ ಕೋರಿಕೆಯಂತೆ ಶ್ರೀಮಠಕ್ಕೆ ಸರಬರಾಜು ಆಗುವ ನೀರಿನ ಮತ್ತು ಈ ಮಾರ್ಗವಾಗಿ ರಿಪೇರಿ ಹಾಗೂ ವಾಲ್ ಲೀಕ್ ಆಗದಂತೆ ನೋಡಿಕೊಳ್ಳಬೇಕು. ಮಹಾ ದಾಸೋಹಕ್ಕೆ ಕುಡಿಯುವ ನಿರಂತರ ನೀರು, ಮಠದ ನೂತನ ಕಾಂಪ್ಲೆಕ್ಸ್, ಗವಿಸಿದ್ದೇಶ್ವರ ಕಾಲೇಜ್ ಆವರಣ, ಶ್ರೀಮಠದ ಯಾತ್ರಿ ನಿವಾಸ ಸೇರಿದಂತೆ ವಿವಿಧೆಡೆ ನೀರು ಪೂರೈಸಬೇಕು. ಶ್ರೀಮಠಕ್ಕೆ ಸರಬರಾಜು ಆಗುವ ಎಲ್ಲಾ ನೀರುಗಳಿಗೆ ಹಾಗೂ ಶ್ರೀಮಠದ ಕೆರೆ ಬಾವಿಗಳಿಗೆ ಬ್ಲಿಚಿಂಗ್ ಪೌಡರ್ ಹಾಕಿಸಬೇಕು. ತಾತ್ಕಾಲಿಕ ಸ್ನಾನ ಗೃಹ ಮತ್ತು ಶೌಚಾಲಯಗಳಿಗೆ ನೀರು ಪೂರೈಕೆ ಮಾಡಬೇಕು. ಯಾತ್ರಿಕರಿಗೆ ವಸತಿ ಒದಗಿಸಿದ ಸ್ಥಳಗಳಿಗೆ ಸಹ ನೀರು ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಬೇಕು" ಎಂದರು.
"ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಆಹಾರ ಸುರಕ್ಷಾ ಅಧಿಕಾರಿಗಳು ಗವಿಮಠದ ಅಡುಗೆ ಸಿಬ್ಬಂದಿಯೊಂದಿಗೆ ವಿಶೇಷ ಸಭೆ ನಡೆಸಿ ಆಹಾರ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಾತ್ರೆ ನಡೆಯುವ ಸ್ಥಳದಲ್ಲಿ ತುರ್ತು ಆರೋಗ್ಯ ಘಟಕ ಸ್ಥಾಪಿಸಲು ಕರ್ತವ್ಯಕ್ಕೆ ತಜ್ಞ ವೈದ್ಯರನ್ನು ಮತ್ತು ಶುಶ್ರೂಕಿಯರನ್ನು ನಿಯೋಜಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಈಗಿನಿಂದಲೇ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ ಮಾತನಾಡಿ, "ಸ್ವಚ್ಛತೆ, ನೀರಿನ ವ್ಯವಸ್ಥೆ, ಸ್ಯಾನಿಟೈಜ್, ಘನತಾಜ್ಯ ನಿರ್ವಹಣೆಗೆ ಎಲ್ಲಾ ರೀತಿಯ ಕ್ರಮ ವಹಿಸಲಾಗುವುದು. ಸ್ವಚ್ಛತೆ ಸೇರಿದಂತೆ ಇನ್ನೀತರ ಕಾರ್ಯಕ್ಕಾಗಿ ಹೆಚ್ಚುವರಿಯಾಗಿ ಬೇರೆ ಕಡೆಗಳಿಂದ ಪೌರ ಕಾರ್ಮಿಕರನ್ನು ಮತ್ತು ಇನ್ನೀತರ ಹೆಚ್ಚುವರಿ ಕಾರ್ಮಿಕರನ್ನು ಪಡೆದುಕೊಳ್ಳಲಾಗುವುದು. ತಾತ್ಕಾಲಿಕವಾಗಿ ಜಾತ್ರಾ ಆವರಣದಲ್ಲಿ ನಿರ್ಮಿಸಿದ ಶೌಚಾಲಯಗಳ ಸ್ವಚ್ಛತೆಗೆ, ಜಾತ್ರೆಯ ಆವರಣ ಮತ್ತು ಶ್ರೀಮಠದ ಸಂಪರ್ಕ ರಸ್ತೆಗಳು ಧೂಳು ಬಾರದಂತೆ ನೀರನ್ನು ಟ್ರಾಕ್ಟರ್ ಮೂಲಕ ಹಾಕಲಾಗುವುದು. ಜಾತ್ರಾ ಆವರಣದ ಕಸ ವಿಲೇವಾರಿಗೆ ಅಗತ್ಯ ಸಂಖ್ಯೆಯಲ್ಲಿ ಟ್ರಾಕ್ಟರ್, ಕಸ ವಿಲೇವಾರಿ ಮಾಡುವ ವಾಹನಗಳು ಮತ್ತು ಜಾತ್ರಾ ದಾಸೋಹ ಮುಸುರಿಗೆ ಟ್ರಾಲಿ ವ್ಯವಸ್ಥೆ ಮಾಡಲಾಗುವುದು" ಎಂದರು.












Click it and Unblock the Notifications