ಡೀನೋಟಿಫಿಕೇಷನ್, ಡೀಮಾನಿಟೈಸೇಷನ್ ಬಿಜೆಪಿ ಫಲ : ಎಚ್.ಕೆ.ಪಾಟೀಲ್
ಕೊಪ್ಪಳ, ಏಪ್ರಿಲ್ 05: ಕಾಂಗ್ರೆಸ್ ಪಕ್ಷ ದೇಶದಲ್ಲಿನ ಬಡವರ ಏಳ್ಗೆಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಆದರೆ, ಬಿಜೆಪಿಗೆ ಹೇಳಿಕೊಳ್ಳುವ ಯಾವುದೇ ಜನಪರ ಕಾರ್ಯಕ್ರಮಗಳಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರು ವ್ಯಂಗ್ಯವಾಡಿದ್ದಾರೆ.
ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಪರವಾಗಿ ಮತ ಯಾಚಿಸಲು ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶದಲ್ಲಿ 20 ಅಂಶಗಳ ಕಾರ್ಯಕ್ರಮಗಳು, ಬಡವರನ್ನು ಬಡತನದಿಂದ ನಿರ್ಮೂಲನೆ ಮಾಡಿ ಅವರ ಏಳ್ಗೆ ಮಾಡುವುದು, ಭೂಸುಧಾರಣಾ ಕಾಯ್ದೆಗಳಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ಮೂಲಕ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಜನಮನ್ನಣೆ ಗಳಿಸಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆದರೆ, ಬಿಜೆಪಿ ಪಕ್ಷಕ್ಕೆ ಹೇಳಿಕೊಳ್ಳುವಂತಹ ಯಾವುದೇ ಕಾರ್ಯಕ್ರಮಗಳಿಲ್ಲ. ದೇಶದ ಜನರ ಪರ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಗೆ ಕೇವಲ ಡಿನೋಟಿಫಿಕೇಷನ್, ಡೀಮಾನಿಟೈಸೇಷನ್, ಸರ್ಜಿಕಲ್ ಸ್ಟೈಕ್ಗಳನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಮಾಜಿ ಸಂಸದ ಶ್ರೀರಾಮುಲುಗೆ ತಿರುಗೇಟು ನೀಡಿ, ಬಿಜೆಪಿ ನಾಯಕ ಇಂತಹ ಕ್ರಾಂತಿಕಾರಕ ಪ್ರಣಾಳಿಕೆಯನ್ನು ಜನ ತಿರಸ್ಕರಿಸಿದ್ದಾರೆ ಎಂದು ಟೀಕಿಸಿದ್ದಾರೆ. ಸ್ವಾಮಿ ಶ್ರೀರಾಮುಲು ಅವರೇ ನಮ್ಮ ಪ್ರಣಾಳಿಕೆಯನ್ನು ಜನ ತಿರಸ್ಕರಿಸಿಲ್ಲ. ಪುರಸ್ಕರಿಸಿ ಸ್ವಾಗತಿಸಿದ್ದಾರೆ. ದೇಶದೆಲ್ಲೆಡೆ ಇದರದ್ದೇ ಚರ್ಚೆಗಳು ನಡೆಯುತ್ತಿವೆ ಎಂದರು.

ಕಾಂಗ್ರೆಸ್ ಅವಧಿಯ ಸರ್ಜಿಕಲ್ ಸ್ಟ್ರೈಕ್
ಸ್ವಾತಂತ್ರ್ಯ ಬಂದ ದಿನದಿಂದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಹಲವಾರು ಸರ್ಜಿಕಲ್ ಸ್ಟೈಕ್ಗಳನ್ನು ನಡೆಸಿದೆ. 1948, 1952, 1961, 1972 ರಲ್ಲಿ ಯುದ್ಧ ಗೆದ್ದೆವು. ಆದರೆ, ಈ ಯುದ್ಧಗಳನ್ನು ಗೆದ್ದ ವಿಚಾರಗಳನ್ನು ನಾವು ಎಂದಿಗೂ ರಾಜಕೀಯ ವಸ್ತುಗಳನ್ನಾಗಿ ಬಳಸಿಕೊಳ್ಳಲಿಲ್ಲ. ಆದರೆ, ಬಿಜೆಪಿ ಬಡಜನರಿಗಾಗಿ ಯಾವುದೇ ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳದಿರುವುದರಿಂದ ಸರ್ಜಿಕಲ್ ಸ್ಟೈಕ್ ಅನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.

ಆರ್ಟಿಕಲ್ 371 ಅನುಷ್ಠಾನಗೊಳಿಸಿದ್ದು ಕಾಂಗ್ರೆಸ್
ನಮ್ಮ ಪಕ್ಷದ ಪ್ರಧಾನಮಂತ್ರಿಯಾಗಿದ್ದ ಡಾ.ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಸಂವಿಧಾನದ 371 ಜೆಗೆ ತಿದ್ದುಪಡಿ ತಂದರು. ಇದರ ಹಿಂದೆ ನಮ್ಮ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮವೂ ಇದೆ ಎಂದು ಬಣ್ಣಿಸಿದರು.

ಉದ್ಯೋಗದಲ್ಲಿ ಮೀಸಲಾತಿ
ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿ ಮೀಸಲಾತಿ ರೂಪುರೇಷೆಗಳನ್ನು ಕೊಟ್ಟರು. ಕಾಲೇಜು ಪ್ರವೇಶ, ಇಂಜಿನಿಯರಿಂಗ್ ಪ್ರವೇಶದಂತಹ ಹಲವಾರು ಮೀಸಲಾತಿಯನ್ನು ನಮ್ಮ ಪಕ್ಷ ಕಲ್ಪಿಸಿಕೊಟ್ಟಿರುವುದರಿಂದ ಹೈದ್ರಾಬಾದ್ ಕರ್ನಾಟಕದ ಅಸಂಖ್ಯಾತ ಜನರು ನಿರುಮ್ಮಳರಾಗುವಂತೆ ಮಾಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. ರಾಜ್ಯದ ಯಾವುದೇ ಭಾಗದಲ್ಲಿ ಉದ್ಯೋಗ ಭರ್ತಿ ಪ್ರಕ್ರಿಯೆಗಳಲ್ಲಿ ಈ ಭಾಗದ ಜನತೆಗೆ ಶೇ.8 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮೀಸಲಾತಿ ಬಗ್ಗೆ
ಲೋಕಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷ ಹಲವಾರು ಜನಪರ ಕಾರ್ಯಕ್ರಮಗಳನ್ನು ಒಳಗೊಂಡ ಕ್ರಾಂತಿಕಾರಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ 20 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 6 ಸಾವಿರದಂತೆ ವರ್ಷಕ್ಕೆ 72 ಸಾವಿರ ರೂಪಾಯಿಗಳ ಆದಾಯ ಖಾತರಿಯನ್ನು ಒದಗಿಸಲಾಗುತ್ತದೆ. ಇಂತಹ ಕಾರ್ಯಕ್ರಮವನ್ನು ಯಾವುದೇ ಪಕ್ಷ ಜಾರಿಗೆ ತರುವ ಧೈರ್ಯ ತೋರಲಿಲ್ಲ ಎಂದು ತಿಳಿಸಿದರು.












Click it and Unblock the Notifications