ಕೊಪ್ಪಳ ಜಿಲ್ಲೆಯ ಕೊರೊನಾ ಹಾಟ್ ಸ್ಪಾಟ್ ಗಳು ಸಂಪೂರ್ಣ ಲಾಕ್ ಡೌನ್!
ಕೊಪ್ಪಳ, ಜುಲೈ.20: ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿಯೇ ಹೆಚ್ಚಾಗಿ ವರದಿಯಾಗುತ್ತಿವೆ. ಈ ಹಿನ್ನೆಲೆ ಸೋಮವಾರ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಸ್ಥಳೀಯ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.
Recommended Video
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೊರೊನಾ ಸಂಬಂಧ ಪ್ರಗತಿಪರಿಶೀಲನಾ ಸಭೆ ನಡೆಸಿ ಬಳಿಕ ಸಚಿವರು ಮಾತನಾಡಿದರು. ಗಂಗಾವತಿಯ ಶ್ರೀರಾಮನಗರ ಪ್ರವೇಶವನ್ನು ಕೊರೊನಾ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.
ಗಂಗಾವತಿ ತಾಲೂಕಿನ ಜನರ ಆರೋಗ್ಯದ ಹಿತದೃಷ್ಟಿಯಿಂದ ಜುಲೈ.21ರ ರಾತ್ರಿ 8 ರಿಂದ 10 ದಿನ ಸಂಪೂರ್ಣ ಲಾಕ್ಡೌನ್ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಕೊಪ್ಪಳದ ಭಾಗ್ಯ ನಗರದ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿ ಜೊತೆಗೆ ಮತ್ತೊಮ್ಮೆ ಪರಿಶೀಲಿಸಿ ಲಾಕ್ ಡೌನ್ ಮಾಡಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸಲಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಿ.ಸಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಹಾಟ್ ಸ್ಪಾಟ್ ನಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ವಿನಾಯಿತಿ
ಕೊರೊನಾವೈರಸ್ ಹಾಟ್ ಸ್ಪಾಟ್ ಎಂದು ಗುರಿತಿಸಿಕೊಂಡು ಲಾಕ್ ಡೌನ್ ಆಗಿರುವ ಪ್ರದೇಶಗಳಲ್ಲಿ ತುರ್ತು ಸೇವೆ, ಆಹಾರ ಪದಾರ್ಥ ಮಾರಾಟ, ಕೃಷಿ ಚಟುವಟಿಕೆ, ರಸಗೊಬ್ಬರ ಮಾರಾಟ, ಹಾಲಿನ ಬೂತ್, ಔಷಧಿ ಅಂಗಡಿಗಳನ್ನು ತೆರೆಯುವುದಕ್ಕೆ ವಿನಾಯಿತಿ ನೀಡಲಾಗಿದೆ. ಮದ್ಯದಂಗಡಿಗಳು ಬಂದ್ ಆಗಲಿದ್ದು, ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು ಮಾರ್ಗಸೂಚಿ ಬಿಡುಗಡೆ ಮಾಡುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.

ಕೊರೊನಾವೈರಸ್ ನಿರ್ಮೂಲನೆ ಲಾಕ್ ಡೌನ್ ಅಸ್ತ್ರವಲ್ಲ
ಕೊಪ್ಪಳ ಜಿಲ್ಲೆಯಲ್ಲೂ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೊರೊನಾವೈರಸ್ ಹರಡುವಿಕೆ ಪ್ರಮಾಣ ನಿಯಂತ್ರಿಸಲು ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದೆ. ಲಾಕ್ಡೌನ್ ಮಾಡಿದರೆ ಕೊವಿಡ್-19 ಸೋಂಕು ಹರಡುವಿಕೆ ಕಡಿಮೆಯಾಗುತ್ತದೆ ಇಲ್ಲದಿದ್ದರೆ ಆಗುವುದಿಲ್ಲ ಎಂಬ ಆಲೋಚನೆ ತಪ್ಪು. ಸರ್ಕಾರದ ಸೂಚನಾ ಕ್ರಮಗಳಿಗೆ ಸಾರ್ವಜನಿಕರ ಸಹಕಾರವೂ ಬೇಕಾಗುತ್ತದೆ. ರಾಜ್ಯ ಸರ್ಕಾದ ಕೊರೊನಾವೈರಸ್ ನಿಯಂತ್ರಿಸುವಲ್ಲಿ ಯಾವುದೇ ರೀತಿ ವಿಫಲವಾಗಿಲ್ಲ. ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸರ್ಕಾರದ ನಡೆಯನ್ನು ಸಚಿವ ಬಿ.ಸಿ.ಪಾಟೀಲ್ ಸಮರ್ಥಿಸಿಕೊಂಡರು.

ಹೆಲ್ತ್ ಕಿಟ್ ಖರೀದಿಸಲು 55 ಲಕ್ಷ ರೂಪಾಯಿ ಮೀಸಲು
ಕೊರೊನಾವೈರಸ್ ಸೋಂಕಿತ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ 55 ಲಕ್ಷ ರೂಪಾಯಿ ಮೌಲ್ಯದ ಹೆಲ್ತ್ ಕಿಟ್ ಖರೀದಿಸಲಾಗುತ್ತದೆ. ತಾಲೂಕುವಾರು ಐಸಿಯು ಬೆಡ್, ಮಾನಿಟರ್ಗಳಿಗೆ 76 ಲಕ್ಷ ರೂ.ವೆಚ್ಚ ಮಾಡಲಾಗುತ್ತಿದೆ. ಲ್ಯಾಬ್ ಟೆಕ್ಷಿಷಿಯನ್ಸ್ ಗಳ ಕೊರತೆ ನೀಗಿಸಲು 13 ಜನರ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಅವರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೊಪ್ಪಳದಲ್ಲಿ 30 ಮೊಬೈಲ್ ಹೆಲ್ತ್ ಯುನಿಟ್ ಆರಂಭ
ಕೊಪ್ಪಳ ಜಿಲ್ಲೆಯಾದ್ಯಂತ 30 ಮೊಬೈಲ್ ಹೆಲ್ತ್ ಯುನಿಟ್ಗಳನ್ನು ಆರಂಭಿಸಲಾಗುತ್ತದೆ. ತುರ್ತು ಲಭ್ಯತೆ ಅವಶ್ಯಕತೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸಲಾಗುವುದು. ಜಿಲ್ಲೆಯ ಗಡಿ ಭಾಗಗಳಲ್ಲಿ ಅಂತರ್ ಜಿಲ್ಲಾ ಚೆಕ್ಪೋಸ್ಟ್ ಆರಂಭಿಸಲಾಗುತ್ತಿದೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.












Click it and Unblock the Notifications