ಮಮತಾಗೆ ಗಾಯದ ಮೇಲೆ ಬರೆ: ಮತ್ತೊಬ್ಬ ಶಾಸಕ ಬಿಜೆಪಿಗೆ ಸೇರ್ಪಡೆ
ಕೋಲ್ಕತಾ, ಮೇ 29: ಲೋಕಸಭೆ ಚುನಾವಣೆಯಲ್ಲಿ ಆಘಾತಕಾರಿ ಸೋಲು ಅನುಭವಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಗಾಯದ ಮೇಲೆ ಸತತ ಬರೆ ಬೀಳುತ್ತಿದೆ.
ಟಿಎಂಸಿಯ ಇಬ್ಬರು ಶಾಸಕರು ಮತ್ತು ಸುಮಾರು 50 ಕೌನ್ಸಿಲರ್ಗಳು ಮಂಗಳವಾರವಷ್ಟೇ ಬಿಜೆಪಿ ಸೇರಿಕೊಂಡಿದ್ದರು. ಬುಧವಾರ ಮತ್ತೊಬ್ಬ ಟಿಎಂಸಿ ಶಾಸಕ ಹಾಗೂ ಪಕ್ಷದ ಮೂವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇದರಿಂದ ಮೊದಲೇ ಸೋಲಿನ ಹತಾಶೆಯಲ್ಲಿರುವ ಮಮತಾ ಬ್ಯಾನರ್ಜಿ, ಮತ್ತಷ್ಟು ಆಘಾತಕ್ಕೆ ಒಳಗಾಗಿದ್ದಾರೆ. ಇದು ಟಿಎಂಸಿಗೆ ಬಲವಾದ ಹೊಡೆತವಾಗಿದೆ. ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಮತಗಳನ್ನು ಸೆಳೆಯುವ ಶಕ್ತಿಯುಳ್ಳ ಪ್ರಭಾವಿ ಮುಸ್ಲಿಂ ಮುಖಂಡರೇ ಬಿಜೆಪಿ ತೆಕ್ಕೆಗೆ ಜಾರಿದ್ದಾರೆ.

ಟಿಎಂಸಿಯ ಶಾಸಕ ಮೊನಿರುಲ್ ಇಸ್ಲಾಂ ಅವರೊಂದಿಗೆ ತೃಣಮೂಲ ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಆಸಿಫ್ ಇಕ್ಬಾಲ್ ಮತ್ತು ಗಧಾದರ್ ಹಜ್ರಾ ಹಾಗೂ ಪಕ್ಷದ ಮುಖಂಡ ನಿಮಾಯ್ ದಾಸ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮೊನಿರುಲ್ ಇಸ್ಲಾಂ ಅವರು ಲಾಲ್ಪುರ ಕ್ಷೇತ್ರದಿಂದ ವಿಧಾನಸಭೆ ಪ್ರತಿನಿಧಿಸುತ್ತಿದ್ದಾರೆ.
Trinamool Congress MLA Manirul Islam joins Bharatiya Janata Party in Delhi. TMC's Gadadhar Hazra, Mohd Asif Iqbal and Nimai Das also join BJP. pic.twitter.com/Y2rOILuZ2f
— ANI (@ANI) 29 May 2019
ಟಿಎಂಸಿಯ ಮುಸ್ಲಿಂ ಶಾಸಕ ಬಿಜೆಪಿ ಸೇರಿಕೊಳ್ಳುವ ನಿರ್ಧಾರವು ಪ್ರಧಾನಿ ನರೇಂದ್ರ ಮೋದಿ ಅವರ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಘೋಷಣೆಯು ಸಫಲವಾದುದರ ಸಂಕೇತ ಎಂದು ಬಿಜೆಪಿ ಹೇಳಿಕೊಂಡಿದೆ. ಇಂಡಿಯಾ ಟುಡೆ ಸುದ್ದಿವಾಹಿನಿಯ ಮೂಲಗಳ ಪ್ರಕಾರ ಇನ್ನೂ ಐದು ಮಂದಿ ಶಾಸಕರು ಬಿಜೆಪಿ ಸೇರಲಿದ್ದಾರೆ.












Click it and Unblock the Notifications