'ಗೋಲಿ ಮಾರೋ...' ಪ್ರಕರಣ: ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿ ರಾಜೀನಾಮೆ
ಕೋಲ್ಕತಾ, ಜನವರಿ 30: ಪಶ್ಚಿಮ ಬಂಗಾಳದಲ್ಲಿ ಕಳೆದ ವಾರ ರೋಡ್ ಶೋ ಒಂದರಲ್ಲಿ 'ದ್ರೋಹಿಗಳಿಗೆ ಗುಂಡಿಕ್ಕಿ' ಎಂಬ ಘೋಷಣೆ ಕೂಗಿದ್ದ ಪ್ರಕರಣದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವಂತೆ ಆದೇಶಿಸಿದ್ದ ಬಂಗಾಳದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದಾರೆ.
ಕೋಲ್ಕತಾ ಸಮೀಪದಲ್ಲಿರುವ ಚಂದನ್ನಗರದ ಪೊಲೀಸ್ ಆಯುಕ್ತರಾಗಿರುವ ಇನ್ಸ್ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿ ಹೂಮಾಯೂನ್ ಕಬೀರ್ 'ವೈಯಕ್ತಿಕ ಕಾರಣ'ಗಳನ್ನು ನೀಡಿ ರಾಜೀನಾಮೆ ಕೊಟ್ಟಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಅವರು, 'ನನ್ನ ರಾಜೀನಾಮೆಗೆ ಕಾರಣಗಳಿವೆ. ಕೆಲವು ದಿನಗಳ ಬಳಿಕ ಅದನ್ನು ಹಂಚಿಕೊಳ್ಳುತ್ತೇನೆ. ಮೊದಲು ನನಗೆ ಸೇವೆಯಿಂದ ಬಿಡುಗಡೆ ಸಿಗಲಿ' ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಕಬೀರ್ ಅವರ ಹಠಾತ್ ರಾಜೀನಾಮೆ ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಕಬೀರ್ ಅವರು ರಾಜೀನಾಮೆ ನೀಡಿರುವುದು ರಾಜಕೀಯ ಪ್ರವೇಶಕ್ಕಾಗಿ ಎಂದು ಹೇಳಲಾಗುತ್ತಿದೆ. ಏಕೆಂದರೆ ಅವರು ಏಪ್ರಿಲ್ 30ರಂದು ಸೇವೆಯಿಂದ ನಿವೃತ್ತರಾಗಬೇಕಿತ್ತು. ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ಸರ್ಕಾರವೇ ಆಹ್ವಾನ ನೀಡುವ ಸಾಧ್ಯತೆ ಇತ್ತು ಅಥವಾ ಅವರೂ ಮನವಿ ಮಾಡಬಹುದಾಗಿತ್ತು. ಆದರೆ ಜನವರಿ 31ರಿಂದ ಅನ್ವಯವಾಗುವಂತೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಕಬೀರ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂತೋಷವಾಗಿರಿಸಲು ಬಯಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತಮ್ಮ ಪತ್ನಿಗೆ ಟಿಎಂಸಿ ಟಿಕೆಟ್ ದೊರಕುವಂತೆ ಮಾಡುವುದು ಅವರ ಬಯಕೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಆದರೆ ಒಮ್ಮೆ ಕಬೀರ್ ಅವರು ಮಮತಾ ಬ್ಯಾನರ್ಜಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ಕಬೀರ್ ಅವರು ಬಿಜೆಪಿ ಪರ ಸಾಗುತ್ತಿದ್ದು, ತಮ್ಮ ಕಡೆಗಿನ ನಿಷ್ಠೆ ಕಡಿಮೆಯಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಅವರಲ್ಲಿ ಅಸಮಾಧಾನ ಉಂಟಾಗಿತ್ತು ಎಂದು ಹೇಳಲಾಗಿದೆ. ಬಂಗಾಳದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹಿಂದುಳಿದಿರುವಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ರಾಜಕೀಯ ಹೇಳಿಕೆಗಳನ್ನು ಕಬೀರ್ ನೀಡಿದ್ದರು.
ಜನವರಿ 21ರಂದು ಬಿಜೆಪಿಯ ಮೆರವಣಿಗೆಯೊಂದರ ವೇಳೆ ಕೆಲವರು ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂಬ ಘೋಷಣೆ ಕೂಗಿದ್ದರು. ಘೋಷಣೆ ಕೂಗಿದ್ದ ಮೂವರನ್ನು ಪತ್ತೆ ಹಚ್ಚಿದ್ದ ಕಬೀರ್, ಅವರನ್ನು ಬಂಧಿಸಿದ್ದರು.












Click it and Unblock the Notifications