ಮನೆಯಲ್ಲಿ ಇದ್ದು ಬೇಸರವೇ?; ಈ ವೃದ್ಧನ ಕಥೆ ಕೇಳಿ!
ಕೋಲ್ಕತ್ತಾ, ಏಪ್ರಿಲ್ 02 : ಕೊರೊನಾ ಹರಡದಂತೆ ತಡೆಯಲು ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಎಲ್ಲರೂ ಮನೆಯಲ್ಲಿಯೇ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕೈ ಮುಗಿದು ದೇಶದ ಜನರಲ್ಲಿ ಪ್ರಾರ್ಥನೆ ಮಾಡಿದ್ದಾರೆ.
ಮತ್ತೊಂದು ಕಡೆ ವಿದೇಶದಿಂದ ಬಂದವರು ಮತ್ತು ಕೊರೊನಾ ಸೋಂಕು ತಗುಲಿದವರಿಗೆ ಹೋಂ ಕ್ವಾರಂಟೈನ್ಗೆ ಸೂಚನೆ ನೀಡಲಾಗಿದೆ. 8 ದಿನಕ್ಕೆ ಮನೆಯಲ್ಲಿಯೇ ಇದ್ದು ಹಲವು ಜನರಿಗೆ ಬೇಜಾರಾಗಿದೆ. ಆದ್ದರಿಂದ, ಸುಮ್ಮನೆ ಬೈಕ್ ತೆಗೆದುಕೊಂಡು ರಸ್ತೆಗೆ ಇಳಿಯುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ.
ಮನೆಯಲ್ಲಿ ಕುಟುಂಬ ಸದಸ್ಯರ ನಡುವೆಯೇ ಇದ್ದು ಬೇಸರವಾಗುತ್ತದೆ ಎಂದು ನಿಮಗೆ ಅನ್ನಿಸಿದರೆ ಈ ವೃದ್ಧನ ಕಥೆಯನ್ನು ನೀವು ಓದಲೇಬೇಕು. ಸ್ವಯಂ ಕ್ವಾರಂಟೈನ್ಗೆ ಈತ ಒಳಗಾಗಿದ್ದು, ಜನರ ಸಹವಾಸವೇ ಬೇಡ ಎಂದು ಊರಿನಿಂದ ಹೊರಗಡೆ ಇದ್ದಾನೆ.

ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಈ ವ್ಯಕ್ತಿ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾನೆ. ಯಾವುದೇ ಜನರ ಸಂಪರ್ಕವಿಲ್ಲದೆ ದೋಣಿಯಲ್ಲಿ 14 ದಿನ ಜೀವನ ನಡೆಸಲು ತೀರ್ಮಾನಿಸಿದ್ದಾನೆ. ಅಲ್ಲಿಯೇ ಆಹಾರ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾನೆ.
ಸಂಬಂಧಿಕರ ಮನೆಗೆ ಭೇಟಿ ನೀಡಿದ ಬಳಿಕ ವೃದ್ಧನಿಗೆ ಜ್ವರ ಕಾಣಿಸಿಕೊಂಡಿತ್ತು. ಆಗ ರಾಜ್ಯದಲ್ಲಿಯೂ ಕೊರೊನಾ ಭೀತಿ ಹೆಚ್ಚಾಗಿತ್ತು. ವಾಪಸ್ ಬಂದಾಗ ಜನರು ಗ್ರಾಮಕ್ಕೆ ಪ್ರವೇಶಿಸಲು ಬಿಡಲಿಲ್ಲ. ವೈದ್ಯರು ಸಹ ಕ್ವಾರಂಟೈನ್ಗೆ ಸೂಚನೆ ನೀಡಿದರು.

ಊರಿಗೆ ಹೋಗಲು ಅವಕಾಶ ಸಿಗದಿದ್ದರಿಂದ ಊರ ಹೊರಗಿನ ನದಿಯ ತಟದಲ್ಲಿರುವ ದೋಣಿಯಲ್ಲಿ ವೃದ್ಧ ಆಶ್ರಯ ಪಡೆದಿದ್ದಾನೆ. ಎರಡು ಅಂತಸ್ತಿನ ಮನೆಯಲ್ಲಿದ್ದೂ ಬೇಸರ ಎಂಬುವವರು ವೃದ್ಧ ವಾಸಿಸುತ್ತಿರುವ ದೋಣಿಯನ್ನು ಒಮ್ಮೆ ನೋಡಿ.
14 ದಿನ ಇಲ್ಲಿಯೇ ವಾಸಿಸಲು ವೃದ್ಧ ನಿಶ್ಚಯ ಮಾಡಿದ್ದಾನೆ. ಆಹಾರ ಪದಾರ್ಥಗಳನ್ನು ತಂದಿಟ್ಟುಕೊಂಡು ಅಲ್ಲಿಯೇ ಇದ್ದಾನೆ. ಈ ಮೂಲಕ ಗ್ರಾಮದ ಜನರ ಮತ್ತು ವೈದ್ಯರ ಸಲಹೆಯನ್ನು ಪಾಲಿಸುತ್ತಿದ್ದಾನೆ. ಈಗ ಹೇಳಿ ಮನೆಯಲ್ಲಿ ನಿಮಗೆ ಬೇಜಾರು ಆಗುತ್ತಿದೆಯೇ?.












Click it and Unblock the Notifications