'ಮಮತಾ ಬ್ಯಾನರ್ಜಿ ತಮ್ಮ ಗೋರಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ'
ಕೋಲ್ಕತಾ, ಜೂನ್ 4: ಬಿಜೆಪಿ ಕಾರ್ಯಕರ್ತರ 'ಜೈ ಶ್ರೀರಾಂ' ಆಂದೋಲನಕ್ಕೆ ಆತುರದಲ್ಲಿ ಪ್ರತಿಕ್ರಿಯೆಗಳನ್ನು ನೀಡುವ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಗೋರಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ ಎಂದು ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕಿ, ನಟಿ ಅಪರ್ಣಾ ಸೇನ್ ಟೀಕಿಸಿದ್ದಾರೆ.
ಹಾಗೆಯೇ ರಾಜಕೀಯದೊಂದಿಗೆ ಧರ್ಮವನ್ನು ಮತ್ತು ರಾಷ್ಟ್ರೀಯತೆಯೊಂದಿಗೆ ಹಿಂದುತ್ವವನ್ನು ಬೆರೆಸುವುದರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಮಮತಾ ಬ್ಯಾನರ್ಜಿ ಅವರಿಗೆ ಆಘಾತ ನೀಡಿದ ಬಳಿಕ ಜೈ ಶ್ರೀರಾಮ್ ಘೋಷಣೆಯು ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ಇದರಿಂದ ಅಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
'ಜೈ ಶ್ರೀರಾಮ್' ಎಂದಿದ್ದಕ್ಕೆ ಕಾರಿನಿಂದ ಇಳಿದುಬಂದ ದೀದಿ ಮಾಡಿದ್ದೇನು?
'ನನಗೆ ಇದು ಇಷ್ಟವಾಗುತ್ತಿಲ್ಲ. ರಾಜಕೀಯ ಮತ್ತು ಧರ್ಮಗಳನ್ನು ಸಂಪೂರ್ಣವಾಗಿ ಪ್ರತ್ಯೇಕವಾಗಿ ಇರಿಸಬೇಕು. ಎಲ್ಲ ಸಮಸ್ಯೆಗಳೂ ಆರಂಭವಾಗುವುದೇ ರಾಜಕೀಯದೊಂದಿಗೆ ಧರ್ಮವನ್ನು ಬೆರೆಸುವುದರ ಮೂಲಕ' ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರು. ರಾಜ್ಯದಲ್ಲಿ ಕೆಲವು ಉತ್ತಮ ಕೆಲಸಗಳನ್ನು ಅವರು ಮಾಡಿದ್ದಾರೆ ಎಂದು ಅಪರ್ಣಾ ಶ್ಲಾಘಿಸಿದರು. ಎನ್ಡಿಟಿವಿ ನಡೆಸಿದ ಸಂದರ್ಶನದಲ್ಲಿ ಅವರು ಮಮತಾ ಬ್ಯಾನರ್ಜಿ ತಮ್ಮ ಮಾತುಗಳಲ್ಲಿ ಸಹನೆ ಕಂಡುಕೊಳ್ಳುವಂತೆ ಸಲಹೆ ನೀಡಿದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ
'ಇದು ಪ್ರಜಾಪ್ರಭುತ್ವ. ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಇದೆ. ಅವರು ಜೈ ಶ್ರೀರಾಂ ಅಥವಾ ಅಲ್ಲಾ ಹು ಅಕ್ಬರ್ ಅಥವಾ ಜೈ ಮಾ ಕಾಳಿ ಎಂದು ಏನೇ ಘೋಷಣೆ ಕೂಗಲಿ, ನೀವು ಅವರನ್ನು ತಡೆಯುವಂತಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಡಿಯೋ: ಬಿಜೆಪಿ ಕಚೇರಿ ಬಾಗಿಲು ಮುರಿದು ಟಿಎಂಸಿ ಚಿಹ್ನೆ ಬಿಡಿಸಿದ ದೀದಿ!
|
ನಡೆದುಕೊಂಡ ರೀತಿ ಇಷ್ಟವಾಗಲಿಲ್ಲ
ಮಮತಾ ಬ್ಯಾನರ್ಜಿ ಅವರು ಜೈ ಶ್ರೀರಾಂ ಎಂದು ಕೂಗಿದವರ ಬಳಿ ಹೋಗಿ ಅವರ ವಿರುದ್ಧ ಹರಿಹಾಯುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಪರ್ಣಾ ಸೇನ್, 'ನಮ್ಮ ಮುಖ್ಯಮಂತ್ರಿಯವರು ಕಾರಿನಿಂದ ಇಳಿದು ಹೋಗಿ ಅವರನ್ನು ತಡೆದು ನಿಂದನಾತ್ಮಕ ಭಾಷೆ ಬಳಸಿದ ರೀತಿ ಇಷ್ಟವಾಗಲಿಲ್ಲ. ಇದು ಅವರ ಕರ್ತವ್ಯವಲ್ಲ' ಎಂದು ಹೇಳಿದ್ದಾರೆ.
ಮಾತಿನ ಕ್ರಮದ ಮೇಲೆ ಹಿಡಿತವಿರಲಿ
'ಆದರೆ, ಅವರ ಎಲ್ಲ ಪ್ರತಿಕ್ರಿಯೆಗಳು ಅಸಹಜ ಪ್ರತಿಕ್ರಿಯೆಗಳಾಗಿವೆ ಎಂದು ಹೇಳುತ್ತೇನೆ. ಅವರು ತುಂಬಾ ದುಡುಕಿನ ಸ್ವಭಾವದವರು. ಯಾವುದನ್ನಾದರೂ ಹೇಳುವ ಮುನ್ನ ಅವರು ಯೋಚಿಸುವುದಿಲ್ಲ. ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸುದೀರ್ಘ ಕಾಲ ಇರಲು ಬಯಸಿದ್ದರೆ, ಅವರು ತಮ್ಮ ಮಾತುಗಳನ್ನು ನಿಯಂತ್ರಿಸಿಕೊಳ್ಳಬೇಕು, ಅವರು ಮಾತನಾಡುವ ಬಗೆಯನ್ನು ನಿಯಂತ್ರಿಸಿಕೊಳ್ಳಬೇಕು. ಮೊದಲು ಯೋಚನೆ ಮಾಡಿ ಬಳಿಕ ತಾವು ಹೇಳಬೇಕಿರುವುದನ್ನು ಹೇಳಬೇಕು. ತಮ್ಮ ಸುತ್ತಲೂ ಇರುವ ಅಮಿತ್ ಮಿತ್ರಾ, ಸೌಗತ ರಾಯ್ ಅವರಂತಹ ಜನರ ಸಲಹೆಗಳನ್ನು ಪಡೆದುಕೊಳ್ಳಬೇಕು. ತಮ್ಮ ತಲೆಗೆ ಬಂದ ವಿಚಾರವನ್ನು ಮೊದಲು ಹೇಳಿಬಿಡುವುದನ್ನು ಅವರು ನಿಲ್ಲಿಸಬೇಕು' ಎಂದು ಸಲಹೆ ನೀಡಿದ್ದಾರೆ.
ದೀದಿ ನಾಡಲ್ಲಿ ಜೈಶ್ರೀರಾಮ್ ಅನ್ನೋ ಹಾಗಿಲ್ಲ, ಇಫ್ತಾರ್ ಕೂಟಕ್ಕೆ ಅಡ್ಡಿಯಿಲ್ಲ!
ರಾಷ್ಟ್ರೀಯತೆಯೊಂದಿಗೆ ಹಿಂದುತ್ವ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರು ಬಹಳ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ. ಈಗ ನಾಗರಿಕ ನಗರ ಪ್ರದೇಶದ ಮಧ್ಯಮ ವರ್ಗದ ಜನರು ಬಿಜೆಪಿ ಪರವಾಗಿದ್ದಾರೆ. ನಾನು ಅದರ ಬಗ್ಗೆ ಚಿಂತಿತನಾಗಿದ್ದೇನೆ. ದೇಶದಲ್ಲಿನ ಎಲ್ಲ ಪರಿಸ್ಥಿತಿಯನ್ನು ಸರಿಪಡಿಸಲು ಮೋದಿ ಅವರು ಸರಿಯಾದ ಪ್ರಯತ್ನ ಮಾಡಲಿದ್ದಾರೆ ಎಂದು ನನಗೆ ಖಚಿತತೆ ಇದೆ. ಆದರೆ, ಅವರ ಮೂಲ ಗುರಿ ರಾಷ್ಟ್ರೀಯತೆಯೊಂದಿಗೆ ಹಿಂದುತ್ವ ಬೆರೆಸುವುದು. ಸಾವರ್ಕರ್ ಬ್ರ್ಯಾಂಡ್ನ ರಾಷ್ಟ್ರೀಯತೆ, ನನ್ನನ್ನು ಚಿಂತೆಗೀಡು ಮಾಡುತ್ತದೆ. ನಾನು ಗಾಂಧೀಜಿ ಅವರ ಬಹುಸಂಸ್ಕೃತಿ ಮೌಲ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದಿದ್ದಾರೆ.