ಚುನಾವಣೆ ಸಮೀಪದಲ್ಲಿಯೇ ಟಿಎಂಸಿ ಸೇರಿಕೊಂಡ ಖ್ಯಾತ ಕ್ರಿಕೆಟಿಗ
ಕೋಲ್ಕತಾ, ಫೆಬ್ರವರಿ 24: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅದೃಷ್ಟ ಕಂಡುಕೊಳ್ಳುವಲ್ಲಿ ವಿಫಲರಾದ ಪಶ್ಚಿಮ ಬಂಗಾಳದ ಕ್ರಿಕೆಟಿಗ ಮನೋಜ್ ತಿವಾರಿ, ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯಕ್ಕೆ ಧುಮುಕುತ್ತಿದ್ದಾರೆ. ದೇಶೀ ಕ್ರಿಕೆಟ್ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಮನೋಜ್ ತಿವಾರಿ, ಈ ಬಾರಿಯ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಹೂಗ್ಲಿ ಜಿಲ್ಲೆಯ ಚಿನ್ಸುರಾದಲ್ಲಿ ಬುಧವಾರ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಾರ್ವಜನಿಕ ಸಮಾವೇಶದಲ್ಲಿ ಮನೋಜ್ ತಿವಾರಿ ಅವರು ಅಧಿಕೃತವಾಗಿ ಟಿಎಂಸಿ ಸೇರ್ಪಡೆಯಾಗಲಿದ್ದಾರೆ. ತಿವಾರಿ ಅವರನ್ನು ಚುನಾವಣೆಯಲ್ಲಿ ಹೌರಾ ನಾರ್ತ್ ಎಸಿ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮಾಜಿ ಕ್ರಿಕೆಟಿಗ ಮತ್ತು ಮಾಜಿ ಸಚಿವ ಲಕ್ಷ್ಮಿ ರತನ್ ಶುಕ್ಲಾ ಅವರು ಟಿಎಂಸಿಗೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಮನೋಜ್ ತಿವಾರಿ ಟಿಎಂಸಿ ಸೇರ್ಪಡೆಯಾಗುತ್ತಿದ್ದಾರೆ. ಮನೋಜ್ ತಿವಾರಿ ಅವರ ಟಿಎಂಸಿ ಸೇರ್ಪಡೆ ಬಂಗಾಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಗೊಂಬೆ ಆಡ್ಸೋನು...!
ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಬಿಜೆಪಿ ಪರವಾದ ಪೋಸ್ಟ್ಗಳನ್ನು ಹಾಕುತ್ತಿದ್ದ ಮನೋಜ್ ತಿವಾರಿ, ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧದ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದರು. ರೈತರ ಪ್ರತಿಭಟನೆ ಕುರಿತಾಗಿ ಕ್ರಿಕೆಟಿಗರು ಸೇರಿದಂತೆ ಸೆಲೆಬ್ರಿಟಿಗಳು ಕೇಂದ್ರ ಸರ್ಕಾರವನ್ನು ಬೆಂಬಲಿಸಿದ್ದನ್ನು 'ನಾನು ಬಾಲ್ಯದಲ್ಲಿ ಗೊಂಬೆಯಾಟವನ್ನು ನೋಡಿರಲಿಲ್ಲ. ಅದನ್ನು ನೋಡಲು ನನಗೆ 35 ವರ್ಷ ಬೇಕಾಯಿತು' ಎಂದು ವ್ಯಂಗ್ಯವಾಡಿದ್ದರು.

ಪೆಟ್ರೋಲ್ ಅದ್ಭುತ ಶತಕ
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನೂ ಅವರು ಕ್ರಿಕೆಟ್ಗೆ ಹೋಲಿಸಿ ಲೇವಡಿ ಮಾಡಿದ್ದರು. 'ಪೆಟ್ರೋಲ್ನಿಂದ ಎಂತಹ ಅದ್ಭುತ ಇನ್ನಿಂಗ್ಸ್. ಈ ಕಷ್ಟದ ಸಂದರ್ಭದಲ್ಲಿ ಅತ್ಯುತ್ತಮ ಶತಕ ಬಾರಿಸಿದೆ. ಇದಕ್ಕೆ ಡೀಸೆಲ್ ಕೂಡ ಸಮನಾದ ಬೆಂಬಲ ನೀಡಿದೆ. ಸಾಮಾನ್ಯ ಜನರ ವಿರುದ್ಧ ಹೀಗೆ ಆಡುವುದು ಸುಲಭವಲ್ಲ. ಆದರೆ ನೀವಿಬ್ಬರೂ ಸಾಧಿಸಿದ್ದೀರಿ' ಎಂದು ಟ್ವೀಟ್ ಮಾಡಿದ್ದರು.

ಬಂಗಾಳದ ಚೋಟಾ ದಾದಾ
'ದಾದಾ' ಆಗಿ ಸೌರವ್ ಗಂಗೂಲಿ ಗುರುತಿಸಿಕೊಂಡಿದ್ದರೆ, ಮನೋಜ್ ತಿವಾರಿ ಅವರನ್ನು 'ಚೋಟಾ ದಾದಾ' ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳ ರಣಜಿ ತಂಡದ ನಾಯಕರಾಗಿದ್ದ ಅವರು, ಭಾರತದ ಪರ 12 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ. ಕೆಕೆಆರ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರೈಸಿಂಗ್ ಪುಣೆ ಸುಪರ್ಜೈಂಟ್ಸ್ ಪರವಾಗಿ ಐಪಿಎಲ್ನಲ್ಲಿ ಆಡಿದ್ದರು.

ಇಂದಿನಿಂದ ಹೊಸ ಜೀವನ
'ಇಂದಿನಿಂದ ಹೊಸ ಜೀವನ ಆರಂಭವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಬೇಕು. ಇಂದಿನಿಂದ ಇದು ಇನ್ಸ್ಟಾಗ್ರಾಂನಲ್ಲಿ ನನ್ನ ರಾಜಕೀಯ ಪ್ರೊಫೈಲ್ ಆಗಿರಲಿದೆ' ಎಂದು ಸಾಮಾಜಿಕ ಜಾಲತಾಣದ ಹೊಸ ಖಾತೆಯ ಕೊಂಡಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ವೃತ್ತಿಯನ್ನು ರಾಜಕಾರಣಿ ಎಂದು ಗುರುತಿಸಿದ್ದಾರೆ.












Click it and Unblock the Notifications